ಯಾದಗಿರಿ | ಪತ್ನಿಯ ಶೀಲ ಶಂಕಿಸಿ ಮಕ್ಕಳಿಬ್ಬರ ಹತ್ಯೆ ಪ್ರಕರಣ : ಪರಾರಿಯಾಗಿದ್ದ ಆರೋಪಿಯ ಬಂಧನ
Update: 2025-09-26 16:17 IST
ಶರಣಪ್ಪ
ಯಾದಗಿರಿ : ತಾಲ್ಲೂಕಿನ ಹತ್ತಿಕುಣಿ ಸಮೀಪದ ದುಗನೂರ ಹಟ್ಟಿಯಲ್ಲಿ ನಡೆದ ಇಬ್ಬರು ಮಕ್ಕಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪರಾರಿಯಾಗಿದ್ದ ಆರೋಪಿ ಶರಣಪ್ಪ ಹಣಮಂತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿದ ಶರಣಪ್ಪ, ತನ್ನ ಮಗಳು ಸಾನ್ವಿ (4) ಹಾಗೂ ಮಗ ಭಾರ್ಗವ (2.5) ಅವರನ್ನು ಕೊಡಲಿಯಿಂದ ಹೊಡೆದು ಕೊಲೆಮಾಡಿದ್ದನು. ಹಿರಿಯ ಮಗ ಹೇಮಂತ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಘಟನೆಯ ನಂತರ ಆರೋಪಿ ಗ್ರಾಮದ ಸಮೀಪದ ಬೆಟ್ಟದಲ್ಲಿ ಅವಿತುಕೊಂಡಿದ್ದ ಎನ್ನಲಾಗಿದೆ. ಈ ಕುರಿತು ಸುಳಿವುಗಳನ್ನು ಆಧರಿಸಿ ಶೋಧ ನಡೆಸಿದ ಪೊಲೀಸರು ಶರಣಪ್ಪನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಕೌಟುಂಬಿಕ ಕಲಹವೇ ಈ ಹತ್ಯೆಗೆ ಕಾರಣವಾಗಿದೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ಮುಂದುವರಿಯಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.