ಮಹಿಳಾ ಸಂಜೀವಿನಿ ಒಕ್ಕೂಟದ ʼಅಕ್ಕ ಕೆಫೆ’ಗೆ ಸ್ಪೀಕರ್ ಖಾದರ್ ಚಾಲನೆ

ಉಳ್ಳಾಲ :ತಾಲೂಕಿನ ಮುನ್ನೂರು ಗ್ರಾಪಂನ ಸ್ನೇಹ ಸಂಜೀವಿನಿ ಒಕ್ಕೂಟದ ವ್ಯಾಪ್ತಿಯಲ್ಲಿ ನೂತನ ಅಕ್ಕ ಕೆಫೆ ಉಪಹಾರ ಗೃಹವನ್ನು ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಶನಿವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಅಕ್ಕ ಕೆಫೆಯು ಮಹಿಳಾ ಸಬಲೀಕರಣಕ್ಕೆ ಮಹತ್ವದ ಹೆಜ್ಜಯಾಗಿದೆ ಎಂದು ಹೇಳಿದರು.
ಈ ಸಂದರ್ಭ ರಾಜ್ಯ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಜಿಪಂ ಸಿಇಒ ವಿನಾಯಕ ನರ್ವಡೆ, ಯೋಜನಾ ನಿರ್ದೇಶಕ ಜಯರಾಂ, ತಾಪಂ ಇಒ ಗುರುದತ್, ಮುನ್ನೂರು ಗ್ರಾಪಂ ಅಧ್ಯಕ್ಷೆ ರೆಹನಾ ಬಾನು ಮತ್ತಿತರರು ಉಪಸ್ಥಿತರಿದ್ದರು.
*ಕೌಶಲಾಭಿವೃದ್ಧಿ ಉದ್ಯಮಶೀಲತಾ ಮತ್ತು ಜೀವನೋಪಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಜಿಪಂನ ಮಹತ್ವಾಂಕ್ಷೆಯ ಯೋಜನೆ ಇದಾಗಿದೆ. ರಾಜ್ಯ ಸರಕಾರದ ಮಹಿಳಾ ಅಭಿವೃದ್ಧಿಗೆ ಬಜೆಟ್ನಲ್ಲಿ ಘೋಷಣೆಯಾಗಿರುವ ಅಕ್ಕ ಕೆಫೆಗಳಲ್ಲಿ ದ.ಕ.ಜಿಲ್ಲೆಗೆ 2 ಕೆಫೆಗಳು ಅನುಮೋದನೆಗೊಂಡಿವೆ. ಅವುಗಳ ಪೈಕಿ ಈಗಾಗಲೇ ಉಜಿರೆ ಅಕ್ಕ ಕೆಫೆ ಶುಚಿ ರುಚಿ ಊಟ ಉಪಹಾರವನ್ನು ಜನಸಾಮಾನ್ಯರ ಕೈಗೆಟಕುವ ದರದಲ್ಲಿ ನೀಡುತ್ತಾ ಜನರ ಮನ ಗೆದ್ದಿದೆ.
ಇದೀಗ 2ನೇ ಅಕ್ಕ ಕೆಫೆ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಪಂ ವ್ಯಾಪ್ತಿಯ ಸ್ನೇಹ ಸಂಜೀವಿನಿ ಗ್ರಾಪಂ ಮಟ್ಟದ ಒಕ್ಕೂಟದ ವ್ಯಾಪ್ತಿಯಲ್ಲಿ ಚಾಲನೆಗೊಂಡಿದೆ. ಮುಖ್ಯಮಂತ್ರಿಗಳು ಬಜೆಟ್ನಲ್ಲಿ ಅಕ್ಕ ಕೆಫೆ ಆರಂಭಿಸುವ ಕುರಿತು ಘೋಷಣೆ ಮಾಡಿದ್ದರು. 2024ರ ಮಾ.8ರಂದು ರಾಜ್ಯದಲ್ಲಿ ಮೊದಲ ಅಕ್ಕ ಕೆಫೆಗೆ ಚಾಲನೆ ನೀಡಲಾಗಿತ್ತು. ನಂತರ ರಾಜ್ಯದ ಇತರೆಡೆ ಸಂಜೀವಿನಿ ಸ್ವ-ಸಹಾಯ ಗುಂಪುಗಳ ನಿರ್ವಹಣೆಯಲ್ಲಿ ಆರಂಭಿಸಿದ ಅಕ್ಕ ಕೆಫೆಗಳು ಯಶಸ್ವಿ ಯಾಗಿವೆ. ಸಂಪೂರ್ಣವಾಗಿ ಮಹಿಳೆಯರಿಂದಲೇ ಕಾರ್ಯನಿರ್ವಹಿಸುತ್ತಿವುದು ಅಕ್ಕ ಕೆಫೆಯ ವಿಶೇಷತೆಯಾಗಿದೆ. ಶುಚಿ ಮತ್ತು ರುಚಿಯಾದ ಆಹಾರವನ್ನು ಸಾರ್ವಜನಿಕರು ಅಕ್ಕ ಕೆಫೆಯಲ್ಲಿ ಸವಿಯಬಹುದು.







