ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ವಿನೂತನ ಶೈಲಿಯ ಚಿಕಿತ್ಸೆಯಿಂದ ಹೃದ್ರೋಗಿಗೆ ಜೀವದಾನ

ಮಂಗಳೂರು: ಸಾವು ಬದುಕಿನ ಹೋರಾಟದಲ್ಲಿದ್ದ ನಗರದ 64ರ ಹರೆಯದ ಹೃದ್ರೋಗಿಯೊಬ್ಬರಿಗೆ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದಯ ರೋಗಶಾಸ್ತ್ರ ವಿಭಾಗದ ವೈದ್ಯರ ತಂಡವು ಅಪರೂಪದ ಮತ್ತು ವಿನೂತನ ಶೈಲಿಯ ಚಿಕಿತ್ಸೆ ನೀಡಿ ಮರುಜೀವ ನೀಡಿದ ಘಟನೆ ವರದಿಯಾಗಿದೆ.
ವೃದ್ಧ ರೋಗಿಯು ಮಧುಮೇಹ ಕಾಯಿಲೆ, ತೀವ್ರ ಹೃದಯ ಸಮಸ್ಯೆ, ಎದೆ ನೋವು, ಗಂಭೀರ ಉಸಿರಾಟದ ಸಮಸ್ಯೆ ಮತ್ತು ಅಧಿಕ ರಕ್ತದೊತ್ತಡ ಇತ್ಯಾದಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹೃದ್ರೋಗ ಶಾಸ್ತ್ರ ತಜ್ಞ ಡಾ.ಎಚ್. ಪ್ರಭಾಕರ್ ಅವರನ್ನು ಸಲಹೆಗಾಗಿ ಭೇಟಿ ಯಾಗಿದ್ದರು. ತಮ್ಮ ತೀವ್ರ ಆರೋಗ್ಯ ಸಮಸ್ಯೆಗಳನ್ನು ವೈದ್ಯರಿಗೆ ವಿವರಿಸಿದರು.
ವೈದ್ಯರು ಸೂಕ್ಷ್ಮವಾಗಿ ತಪಾಸಣೆಗೆ ಒಳಪಡಿಸಿದಾಗ ರೋಗಿಯು ತೀವ್ರ ಹೃದ್ರೋಗ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದು, ಹೃದಯದ ಮುಖ್ಯ ರಕ್ತನಾಳದಲ್ಲಿ ಬಿರುಕು ಬಿದ್ದು ರಕ್ತ ಸೋರಿಕೆಯಾಗಿ ದೇಹದ ಇತರ ಅಂಗಾಂಗ ಗಳಿಗೆ ರಕ್ತ ಪರಿಚಲನೆಗೆ ಅಡ್ಡಿಯಾಗುತ್ತಿತ್ತು. ಇದು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು ಎಂಬುದನ್ನು ವೈದ್ಯರು ಪತ್ತೆ ಮಾಡಿದರು. ರೋಗಿಗೆ ತೆರೆದ ಹೃದಯ ಶಸ್ತ್ರಚಿತ್ಸೆ ನರವೇರಿಸಿದರೆ ಜೀವಕ್ಕೆ ಮಾರಣಾಂತಿಕವಾಗುವ ಅಪಾಯ ಇತ್ತು.
ಡಾ.ಪ್ರಭಾಕರ್ ಅವರು ತಕ್ಷಣ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿದರು. ಅವರ ನೇತೃತ್ವದ ವೈದ್ಯರ ತಂಡವು ತುರ್ತು ೩ ಗಂಟೆ ಅವಧಿಯ ವಿನೂತನ ಶೈಲಿಯ ಕ್ಲಿಷ್ಟಕರ ಅಯೋರ್ಟಿಕ್ ಸ್ಟಂಟ್ ಗ್ರಾಫ್ಟ್ ಚಿಕಿತ್ಸೆಯನ್ನು ನೆರವೇ ರಿಸಿ ರಕ್ತನಾಳದ ಸೋರುವಿಕೆಯನ್ನು ತಡೆಗಟ್ಟಿ, ದೇಹದ ಇತರ ಅಂಗಾಂಗಗಳಿಗೆ ನಿಯಮಿತ ರಕ್ತ ಪರಿಚಲನೆಗೆ ಅನುವು ಮಾಡಿಕೊಡುವಲ್ಲಿ ಯಶಸ್ವಿಯಾಗಿದೆ.
ರೋಗಿಯ ತೊಡೆಯಲ್ಲಿ ಸೂಕ್ಷ್ಮ ರಂದ್ರವನ್ನು ಕೊರೆದು ಅದರ ಮೂಲಕ ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಈ ಅಪಾಯಕಾರಿ ಮತ್ತು ಕ್ಲಿಷ್ಟಕರ ಚಿಕಿತ್ಸೆಯನ್ನು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ನಿರ್ವಹಿಸಲಾಗಿದೆ ಎಂದು ಡಾ.ಎಚ್. ಪ್ರಭಾಕರ್ ಮಾಹಿತಿ ನೀಡಿದ್ದಾರೆ.
ಈ ಅಪರೂಪದ ಚಿಕಿತ್ಸೆಗೆ ಆಸ್ಪತ್ರೆಯ ಹೃದ್ರೋಗ ತಜ್ಞರಾದ ಡಾ. ಪ್ರದೀಪ್ ಪಿರೇರಾ, ಡಾ. ಜೋಸ್ಟೋಲ್ ಪಿಂಟೊ, ಡಾ. ಚೇತನ್ ಆನಂದ್ ಮತ್ತು ಡಾ. ಅಶೋಕ್ ಮತ್ತು ಡಾ. ಆನಂದ್ ಕೆ.ಟಿ. ಸಾಥ್ ನೀಡಿದ್ದರು. ರೋಗಿಯು ಚಿಕಿತ್ಸೆಗೆ ಸ್ಪಂದಿಸಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ತಮ್ಮ ನಿವಾಸದಲ್ಲಿ ಸಹಜ ಆರೋಗ್ಯ ಜೀವನ ನಡೆಸುತ್ತಿದ್ದಾರೆ.
ಫಾದರ್ ಮುಲ್ಲರ್ ಸಂಸ್ಥೆಗಳ ನಿರ್ದೇಶಕ ರೆ.ಫಾ. ಫೌಸ್ಟಿನ್ ಲ್ಯೂಕಸ್ ಲೋಬೊ ಅವರು ವೈದ್ಯಕೀಯ ತಂಡದ ಗಮನಾರ್ಹ ಸಾಧನೆಯನ್ನು ಪ್ರಶಂಸಿಸಿ ಅಭಿನಂದಿಸಿದ್ದಾರೆ.
ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಆರೋಗ್ಯ ಕ್ಷೇತ್ರದಲ್ಲಿ ಹೊಸ ಪ್ರವೃತ್ತಿ ಮತ್ತು ತಂತ್ರಜ್ಞಾನಗಳೊಂದಿಗೆ ಹೆಜ್ಜೆ ಹಾಕುತ್ತಿದೆ ಎಂದು ಫೌಸ್ಟಿನ್ ಲ್ಯೂಕಸ್ ಲೋಬೊ ಅಭಿಪ್ರಾಯಪಟ್ಟಿದ್ದಾರೆ.







