ಉಪ್ಪಿನಂಗಡಿ: ಗ್ರಾಮಕರಣಿಕ ಸುನೀಲ್ ನಿಧನ

ಉಪ್ಪಿನಂಗಡಿ: ಕೊಣಾಲು ಮತ್ತು ಆಲಂತಾಯ ಗ್ರಾಮ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸುನಿಲ್ ಎಂ.ಎಸ್. (53) ಹೃದಯಾಘಾತಕ್ಕೀಡಾಗಿ ಉಪ್ಪಿನಂಗಡಿಯ ಅವರ ನಿವಾಸದಲ್ಲಿ ಶನಿವಾರ ನಿಧನರಾದರು.
ಮೂಲತಃ ಮಂಗಳೂರಿನ ಮಂಗಳಾದೇವಿ ನಿವಾಸಿಯಾಗಿರುವ ಸುನೀಲ್ ಪ್ರಸ್ತುತ ಉಪ್ಪಿನಂಗಡಿಯಲ್ಲಿ ವಾಸವಿದ್ದರು. 2023ರಲ್ಲಿ ಉಪ್ಪಿನಂಗಡಿ ಗ್ರಾಮಕರಣಿಕರಾಗಿ ನೇಮಕಗೊಂಡ ಇವರು ಬಳಿಕ ಹಿರೇಬಂಡಾಡಿ, ಬಜತ್ತೂರು, ಕೌಕ್ರಾಡಿ, ನರಿಮೊಗ್ರು ಗ್ರಾಮಗಳಲ್ಲಿ ಗ್ರಾಮಕರಣಿಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಅಲ್ಲದೇ, ಕಡಬ ತಾಲೂಕು ಕಚೇರಿ, ಪುತ್ತೂರು ತಾಲೂಕು ಕಚೇರಿ ಯಲ್ಲಿಯೂ ಸೇವೆ ಸಲ್ಲಿಸಿದ್ದ ಇವರು ಪ್ರಸಕ್ತ ಕೊಣಾಲು ಮತ್ತು ಆಲಂತಾಯ ಗ್ರಾಮದಲ್ಲಿ ಗ್ರಾಮಕರಣಿಕರಾಗಿ ಸೇವೆ ಸಲ್ಲಿಸುತ್ತಿದ್ದರು.
ರಾತ್ರಿ ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿಯೇ ಹೃದಯಾಘಾತಕ್ಕೀಡಾಗಿ ಮೃತಪಟ್ಟ ಸ್ಥಿತಿಯಲ್ಲಿ ಅವರ ಮೃತ ದೇಹ ಪತ್ತೆಯಾಗಿದ್ದು, ಸಂಶಯಾಸ್ಪದ ಸಾವಿನ ಕಾರಣಕ್ಕೆ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಿ , ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು. ಮೃತರು ಪತ್ನಿ, ಮೂವರು ಪುತ್ರರನ್ನು ಅಗಲಿದ್ದಾರೆ.





