ಧರ್ಮಸ್ಥಳ ಚಲೊ ಪಕ್ಷಾತೀತ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಮಂಗಳೂರು, ಆ.31:ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಸೋಮವಾರ ನಡೆಸುವ ಚಲೋ ರಾಜಕೀಯದ್ದಲ್ಲ. ಅದು ಪಕ್ಷಾತೀತ. ಬಿಜೆಪಿ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ನಗರದ ಸಂಘನಿಕೇತನದ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಟಪಕ್ಕೆ ರವಿವಾರ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ಧರ್ಮಸ್ಥಳದ ವಿಷಯದಲ್ಲಿ ರಾಜಕೀಯ ಮಾಡುವುದಾದರೆ ಎಸ್ಐಟಿ ರಚನೆಯಾದ ತಕ್ಷಣ ಬಿಜೆಪಿ ಬೀದಿಗಿಳಿಯು ತ್ತಿತ್ತು. ಎಸ್ಐಟಿ ವಿಷಯದಲ್ಲಿ ಬಿಜೆಪಿಗೆ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಆದರೆ ಅಪಪ್ರಚಾರಗಳ ಹಿಂದೆ ಷಡ್ಯಂತ್ರವಿದೆ ಎಂಬ ಸಂದೇಹ ಇದೆ. ಹಾಗಾಗಿ ಎನ್ಐಎ ಅಥವಾ ಸಿಬಿಐ ತನಿಖೆ ಆಗಬೇಕು ಎಂಬುದು ಪಕ್ಷದ ಒತ್ತಾಯವಾಗಿದೆ ಎಂದು ವಿಜಯೇಂದ್ರ ಹೇಳಿದರು.
ಒಂದಿಬ್ಬರನ್ನು ಬಂಧಿಸಿದ ತಕ್ಷಣ ಪ್ರಕರಣ ಮುಗಿಯುತು ಎಂದು ಹೇಳಲಾಗದು. ಈ ಕೃತ್ಯದ ಹಿಂದೆ ಯಾರೆಲ್ಲಾ ಕೆಲಸ ಮಾಡಿದ್ದಾರೆ ಎಂಬುದು ಕೂಡ ತನಿಖೆಯಿಂದ ಬಹಿರಂಗ ಆಗಬೇಕು. ಎನ್ಐಎಯಿಂದ ತನಿಖೆ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಹೇಳಿರಬಹುದು. ಧರ್ಮಸ್ಥಳ ಪ್ರಕರಣದಲ್ಲಿ ವಿದೇಶದಿಂದ ಹಣಕಾಸಿನ ನೆರವು ಆಗಿದೆ. ಹಾಗಾಗಿ ನಿಜಾಂಶ ಬಹಿರಂಗಗೊಳ್ಳಬೇಕಾದರೆ ಎನ್ಐಎ ಅಥವಾ ಸಿಬಿಐ ತನಿಖೆಗೆ ಪ್ರಕರಣವನ್ನು ಒಪ್ಪಿಸಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು.





