ಕುಪ್ಪೆಪದವು: ಸರಕಾರಿ ಬಸ್ ಓಡಿಸಲು ಒತ್ತಾಯಿಸಿ ಮನವಿ

ಕುಪ್ಪೆಪದವು: ಕುಪ್ಪೆಪದವು, ಇರುವೈಲು ಮಾರ್ಗದಲ್ಲಿ ಸರಕಾರಿ ಬಸ್ ಓಡಿಸಲು ಆಗ್ರಹಿಸಿ ಬೀಡಿ ಕಾರ್ಮಿಕರ ಸಂಘದ ವತಿಯಿಂದ ಕೆಎಸ್ಸಾರ್ಟಿಸಿ ವಿಭಾಗೀಯ ಕಚೇರಿ ಅಧಿಕಾರಿಗಳಿಗೆ ಗುರುವಾರ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
ಮಂಗಳೂರು ನಗರದಿಂದ ಸುಮಾರು 30ಕಿಮೀ ದೂರದಲ್ಲಿರುವ, ತಾಲೂಕಿನ ಕೊನೆಯ ಗ್ರಾಮವಾದ ಕುಪ್ಪೆಪದವು ಗ್ರಾಮದ ಜನತೆ ಸರಿಯಾದ ಬಸ್ ಪ್ರಯಾಣ ಸೇವೆಯಿಂದ ವಂಚಿತರಾಗಿದ್ದಾರೆ. ಖಾಸಗಿ ಬಸ್ ಗಳು ಮಂಗಳೂರು ನಗರದಿಂದ ಕುಪ್ಪೆಪದವು ಗ್ರಾಮಕ್ಕೆ ಸಂಚರಿಸುತ್ತಿದ್ದರೂ, ಅದರ ಪ್ರಮಾಣ ಸಾಲದು. ವಿದ್ಯಾರ್ಥಿಗಳು, ಕೂಲಿ ಕಾರರು, ವಿವಿಧ ಉದ್ಯೋಗಳಲ್ಲಿ ತೊಡಗಿಸಿಕೊಂಡವರು ಸೇರಿ ಕೈಕಂಬ, ಮಂಗಳೂರು, ಮೂಡಬಿದ್ರೆಯನ್ನು ದೊಡ್ಡ ಪ್ರಮಾಣದಲ್ಲಿ ಕುಪ್ಪೆಪದವು, ಇರುವೈಲು ಹಾಗು ಸುತ್ತಮುತ್ತಲಿನ ಜನತೆ ಅವಲಂಬಿಸಿದ್ದಾರೆ. ಬೆಳಗ್ಗೆ ಹಾಗೂ ಸಂಜೆಯ ಹೊತ್ತು ಈಗಿರುವ ಬಸ್ ಗಳಲ್ಲಿ ವಿಪರೀತ ನೂಕುನುಗ್ಗಲು ಇರುತ್ತದೆ. ಮಹಿಳೆಯರು, ವಿದ್ಯಾರ್ಥಿಗಳಿಗೆ ಪ್ರಯಾಣಿಸುವುದೇ ತೀರಾ ತ್ರಾಸದಾಯಕ ಆಗಿರುತ್ತದೆ. ಇದಲ್ಲದೆ, ಮಧ್ಯಾಹ್ನ, ರವಿವಾರ ಸೇರಿದಂತೆ ರಜಾ ದಿನಗಳಲ್ಲಿ, ದಿನದ ಕೊನೆಯ ಟ್ರಿಪ್ ಗಳಲ್ಲಿ ಖಾಸಗಿ ಬಸ್ ಗಳು ಟ್ರಿಪ್ ಕಟ್ ಮಾಡುವುದರಿಂದ ಗ್ರಾಮಸ್ಥರು ಅನುಭವಿಸುವ ಸಮಸ್ಯೆ ದೊಡ್ಡದಿದೆ. ಇದಲ್ಲದೆ, ಸರಕಾರದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಅವಕಾಶ ದಿಂದಲೂ ನಮ್ಮ ಗ್ರಾಮದ ಮಹಿಳೆಯರು ವಂಚಿತರಾಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಮಂಗಳೂರು, ಕುಪ್ಪೆಪದವು ಇರುವೈಲು, ಮೂಡಬಿದ್ರೆ ಮಾರ್ಗವಾಗಿ ಕೆಎಸ್ಸಾರ್ಟಿಸಿ ವತಿಯಿಂದ ತಲಾ ಎರಡು ಬಸ್ ಗಳ ಸೇವೆ ಒದಗಿಸಬೇಕು ಎಂದು ಒತ್ತಾಯಿಸಿ ಬಿಜೈನಲ್ಲಿರುವ ಕೆಎಸ್ಸಾರ್ಟಿಸಿ ವಿಭಾಗೀಯ ಕಚೇರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
ಮನವಿ ಸಲ್ಲಿಸುವ ನಿಯೋಗದಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಸದಾಶಿವ ದಾಸ್, ಕುಪ್ಪೆಪದವು ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷರಾದ ಭವಾನಿ, ಕಾರ್ಯದರ್ಶಿ ವಸಂತಿ ಕುಪ್ಪೆಪದವು, ಕೋಶಾಧಿಕಾರಿ ಕುಸುಮ ಕುಪ್ಪೆಪದವು, ಪದಾಧಿಕಾರಿಗಳಾದ ಬೇಬಿ ನಾಯ್ಕ, ವಾರಿಜ ನೀಲಿ, ಸವಿತಾ ಮೊದಲಾದವರು ಉಪಸ್ಥಿತರಿದ್ದರು.







