ಜಾತಿ ಸಮೀಕ್ಷೆ ವೇಳೆ ಕ್ರೈಸ್ತರಲ್ಲಿ ಗೊಂದಲ ಬೇಡ: ಐವನ್ ಡಿಸೋಜಾ

ಮಂಗಳೂರು, ಸೆ.15: ರಾಜ್ಯದಲ್ಲಿ ನಡೆಯುತ್ತಿರುವ ಜಾತಿ ಸಮೀಕ್ಷೆಯ ವೇಳೆ ಕರಾವಳಿಯ ಕ್ರೈಸ್ತರು ತಮ್ಮ ಧರ್ಮ ವನ್ನು ನಮೂದಿಸುವಾಗ ಯಾವುದೇ ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಎಲ್ಲ ಕ್ರೈಸ್ತರು ನಿಗದಿತ ಕಾಲಂನಲ್ಲಿ ‘ಕ್ರೈಸ್ತರು’ ಎಂಬುದಾಗಿ ನಮೂದಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.
ಸೋಮವಾರದಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮೀಕ್ಷಾ ಪ್ರಶ್ನಾವಳಿಯ 8ನೇ ಕಾಲಂನಲ್ಲಿ ಸ್ಪಷ್ಟವಾಗಿ ‘ಕ್ರೈಸ್ತರು’ ಎಂದು ನಮೂದಿಸಬೇಕು. ಇದರಲ್ಲಿ ಯಾವುದೇ ಗೊಂದಲ ಇರಬಾರದು. ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟ ಪ್ರತಿಯೊಬ್ಬರೂ ಕ್ರೈಸ್ತರು. ಬೇರೆ ಧರ್ಮಗಳಂತೆ ಕ್ರೈಸ್ತರಲ್ಲೂ ಉಪಜಾತಿಗಳಿವೆ. ಅವುಗಳನ್ನು ನಮೂದಿಸುವುದು ಆಯಾಉಪಜಾತಿಯವರಿಗೆ ಬಿಟ್ಟದ್ದು. ಅದನ್ನು ನಮೂದಿಸುವುದು ಕಡ್ಡಾಯವಲ್ಲ. ಆದರೆ ಧರ್ಮದ ಕಾಲಂನಲ್ಲಿ ತಪ್ಪದೆ ಕ್ರೈಸ್ತರು ಎಂಬುದಾಗಿ ನಮೂದಿಸಬೇಕು. ಸುಪ್ರೀಂಕೋರ್ಟ್ ನಿರ್ದೇಶನದಂತೆ ದಲಿತ ಕ್ರೈಸ್ತರನ್ನು ಕೂಡ ಈಗಾಗಲೇ ಕೇಂದ್ರ ಸರಕಾರ ಮಾನ್ಯ ಮಾಡಿದೆ ಎಂದು ಹೇಳಿದರು.
ಪ್ರಸ್ತುತ ಕ್ರಿಶ್ಚಿಯನ್ ಸಮುದಾಯ 3ಬಿ ವರ್ಗದಲ್ಲಿದೆ. ಜಾತಿ ಸಮೀಕ್ಷೆಯ ವರದಿ ಸಲ್ಲಿಕೆಯಾದ ಅನಂತರ, ಕ್ರೈಸ್ತರನ್ನು 3ಬಿ ವರ್ಗದಿಂದ ತೆಗೆದು ವಿಶೇಷ ವರ್ಗದಲ್ಲಿ ಸೇರಿಸುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಲಾಗುವುದು. ಇದರಿಂದ ಕ್ರೈಸ್ತರಿಗೆ ಪ್ರತ್ಯೇಕ ಮೀಸಲಾತಿ ಪ್ರಯೋಜನಗಳು ದೊರೆಯುತ್ತವೆ ಎಂದು ಐವನ್ ಹೇಳಿದರು.
ಇದು ರಾಜ್ಯದ ಪ್ರಗತಿಗಾಗಿ ನಡೆಯುವ ಸಮೀಕ್ಷೆಯಾಗಿದ್ದು, ಇದನ್ನು ರಾಜಕೀಯಗೊಳಿಸಬಾರದು. ಸಮುದಾಯ ಗಳ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಬಗ್ಗೆ ಸಮಗ್ರ ದತ್ತಾಂಶವನ್ನು ಸಂಗ್ರಹಿಸುವುದು ಈ ಸಮೀಕ್ಷೆಯ ಉದ್ದೇಶ. ಸೆ.22ರಿಂದ ಅ.7ರವರೆಗೆ ಸಮೀಕ್ಷೆ ನಡೆಯಲಿದೆ. ರಾಜ್ಯ ಸರಕಾರ ಈಗಾಗಲೇ ಸಮೀಕ್ಷೆ ಗಾಗಿ ಕೈಪಿಡಿ ಮತ್ತು 60 ಅಂಶಗಳ ವಿವರವಾದ ಪ್ರಶ್ನಾವಳಿಯನ್ನು ಬಿಡುಗಡೆ ಮಾಡಿದೆ. ಈ ಸಮೀಕ್ಷೆಯಲ್ಲಿ ಎಲ್ಲರೂ ಭಾಗವಹಿಸುವಂತೆ ಅಧಿಕಾರಿಗಳು ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ಐವನ್ ಹೇಳಿದರು.
10 ವರ್ಷಗಳ ಹಿಂದೆ ಸಮೀಕ್ಷೆ ನಡೆದಿತ್ತು. ಆದರೆ ಅದು ಹಳೆಯ ದತ್ತಾಂಶಗಳನ್ನು ಒಳಗೊಂಡಿತ್ತು. ಸಮೀಕ್ಷೆ ಸಮರ್ಪಕವಾಗಿರಲಿಲ್ಲ ಎಂಬ ವರದಿಗಳ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಮೀಕ್ಷೆ ನಡೆಯುತ್ತಿದೆ. ಎಲ್ಲ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಸಹಕರಿಸಬೇಕು. ಎಲ್ಲರೂ ಭಾಗವಹಿಸಬೇಕು ಎಂದು ಐವನ್ ಹೇಳಿದರು.
ರಾ.ಹೆ. ಕಳಪೆ ಕಾಮಗಾರಿ ತನಿಖೆಗೆ ಕೇಂದ್ರ ಸಚಿವರಿಗೆ ಪತ್ರ
ಕರಾವಳಿ ಭಾಗದಲ್ಲಿ ನಡೆದಿರುವ, ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ತನಿಖೆಗೆ ಆದೇಶಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆಯಲಾಗಿದೆ ಎಂದು ಐವನ್ ತಿಳಿಸಿದರು.
ತಲಪಾಡಿ ಮತ್ತು ಕಾರವಾರ ನಡುವಿನ ಎನ್ಎಚ್-66 ಉದ್ದಕ್ಕೂ ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ಹಲವಾರು ಅಪಘಾತಗಳು ಸಂಭವಿಸಿವೆ. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಅಪೂರ್ಣವಾಗಿವೆ. ಈ ಸಮಸ್ಯೆ ಯನ್ನು ಅಧ್ಯಯನ ಮಾಡಲು ಮತ್ತು ಅವೈಜ್ಞಾನಿಕವಾಗಿ ನಡೆಸಿದ ಕಾಮಗಾರಿಗಳ ಬಗ್ಗೆ ಕೂಡಲೇ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಕೇರಳದ ತಲಪಾಡಿ-ಕಾಸರಗೋಡು ನಡುವಿನ ಹೆದ್ದಾರಿ ವೈಜಾನಿಕವಾಗಿ, ಉತ್ತಮ ಗುಣಮಟ್ಟದಲ್ಲಿ ನಿರ್ಮಾಣ ವಾಗಿದೆ. ಆದರೆ ದಕ್ಷಿಣ ಕನ್ನಡದಲ್ಲಿ ಕಾಮಗಾರಿಗಳ ಗುಣಮಟ್ಟ ಕಳಪೆಯಾಗಿದೆ. ಮಳೆ ಬಂದಾಗ ಹೆದ್ದಾರಿಯಲ್ಲಿ ನೀರು ನಿಲ್ಲುವುದು ಸಾಮಾನ್ಯ ದೃಶ್ಯವಾಗಿದೆ. ಇದು ಮೂಲ ಎಂಜಿನಿಯರಿಂಗ್ ನಿಯಮಗಳನ್ನು ನಿರ್ಲಕ್ಷಿಸಿದ್ದರ ನೇರ ಪರಿಣಾಮವಾಗಿದೆ. ರಸ್ತೆಗಳನ್ನು ನಿರ್ಮಿಸುವಾಗ ಮಣ್ಣಿನ ಪರಿಸ್ಥಿತಿ, ಮಳೆ ಪ್ರಮಾಣ, ಸ್ಥಳೀಯ ಹವಾಮಾನದಂತಹ ಅಂಶಗಳನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಿ ವಿನ್ಯಾಸದಲ್ಲಿ ಅಳವಡಿಸಬೇಕು. ಅನುದಾನ, ಭೂಸ್ವಾಧೀನದ ಸಮಸ್ಯೆ ಇಲ್ಲವಾದರೂ ಸಂಸದರ ನಿರ್ಲಕ್ಷ್ಯದಿಂದಾಗಿ ಈ ರೀತಿಯಾಗುತ್ತಿದೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಸಂತೋಷ್ ಡಿಸೋಜಾ, ಕೆಥೋಲಿಕ್ ಸಭಾದ ಕಾರ್ಯದರ್ಶಿ ವಿಲ್ಮಾ ಮೊಂತೆರೊ, ಸೌಹಾರ್ದ ಸಮಿತಿಯ ಸಂಚಾಲಕ ಅರುಣ್ ಡಿ‘ಸೊಜಾ, ಮೀನಾ ಟೆಲ್ಲಿಸ್, ಸತೀಶ್ ಪೆಂಗಾಲ್, ಮನುರಾಜ್, ಭಾಸ್ಕರ್ ರಾವ್, ಸ್ಟ್ಯಾನಿ ಲೋಬೊ, ಚಂದ್ರಹಾಸ್ ಪೂಜಾರಿ, ಇಮ್ರಾನ್ ಉಪಸ್ಥಿತರಿದ್ದರು.







