ಪಟಾಕಿ ಸ್ಟಾಲ್ ತೆರೆಯಲು ಮಂಗಳೂರು ಪೊಲೀಸ್ ಆಯುಕ್ತಾಲಯದಿಂದ ಅರ್ಜಿ ಆಹ್ವಾನ

ಮಂಗಳೂರು, ಸೆ.15: ದೀಪಾವಳಿ ಮತ್ತು ತುಳಸಿ ಪೂಜೆ ಹಬ್ಬಗಳ ಸಂದರ್ಭ ಅ.19ರಿಂದ 22ರವರೆಗೆ ಹಾಗೂ ನವೆಂಬರ್ 1ರಿಂದ 2 ರವರೆಗೆ ಒಟ್ಟು 6 ದಿನ ಮಾತ್ರ) ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸುಡುಮದ್ದು ಮಾರಾಟ ಮಾಡಲು ಅಪೇಕ್ಷಿಸುವವರು ಅರ್ಜಿ ನಮೂನೆ ತಾತ್ಕಾಲಿಕ ಸುಡುಮದ್ದು ಪರವಾನಿಗೆಯನ್ನು ಪಡೆಯಲು ಸಾಕಷ್ಟು ಮುಂಚಿತವಾಗಿ ಅರ್ಜಿ ಸಲ್ಲಿಸಿ ಪರವಾನಿಗೆ ಪಡೆಯಬಹುದು ಎಂದು ಪ್ರಕಟನೆ ತಿಳಿಸಿದೆ.
ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಮಾರ್ಗಸೂಚಿಗಳು:-
ಸ್ಫೋಟಕ ಕಾಯ್ದೆ ಮತ್ತು ನಿಯಮಗಳಂತೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ತೆರೆದ ಪ್ರದೇಶಗಳಲ್ಲಿ (ಮಹಾನಗರಪಾಲಿಕೆ/ಪಂಚಾಯತ್ ನಿಗದಿಪಡಿಸುವ ಸರ್ಕಾರಿ ಸ್ಥಳಗಳಲ್ಲಿ ಮಾತ್ರ) ದೀಪಾವಳಿ ಮತ್ತು ತುಳಸಿ ಪೂಜೆ ಹಬ್ಬಗಳ ನಿುತ್ತ ಸುಡುಮದ್ದು ಮಾರಾಟದ ತಾತ್ಕಾಲಿಕ ಪರವಾನಿಗೆ ನೀಡುವ ಬಗ್ಗೆ ಅರ್ಜಿಗಳನ್ನು ಇಲಾಖಾ ಅಧಿಕೃತ ವೆಬ್ಸೈಟ್ ಮೂಲಕ ಪಡೆದು ಅ.10 ರೊಳಗೆ ಕಚೇರಿಗೆ ಸಲ್ಲಿಸಬೇಕು.
ಅರ್ಜಿಯನ್ನು ಸಲ್ಲಿಸುವಾಗ ಸರಕಾರವು ನಿಗದಿಪಡಿಸಿರುವ ಶುಲ್ಕ 300 ರೂ.ವನ್ನು ಸರಕಾರಕ್ಕೆ ಪಾವತಿಸಬೇಕು. ಪರವಾನಿಗೆ ಪಡೆಯುವ ಸಂದರ್ಭ 600 ರೂ.ವನ್ನು ಲೈಸೆನ್ಸ್ ಶುಲ್ಕವಾಗಿ ಪಾವತಿಸಬೇಕು. ಅರ್ಜಿದಾರರು ಅಗ್ನಿಶಾಮಕ ಇಲಾಖೆ, ಸ್ಥಳೀಯ ಸಂಸ್ಥೆ ಹಾಗೂ ವ್ಯಾಪ್ತಿಯ ಪೊಲೀಸ್ ಠಾಣೆಯವರಿಂದ ನೇರವಾಗಿ ನಿರಾಕ್ಷೇಪಣಾ ಪತ್ರವನ್ನು ಪಡೆದು ಅರ್ಜಿಯೊಂದಿಗೆ ಲಗತ್ತಿಸಬೇಕು.
ಈ ರೀತಿ ಪಡೆದ ನಿರಾಕ್ಷೇಪಣಾ ಪತ್ರಗಳನ್ನು ಪಡೆದು ಕಚೇರಿಗೆ ಅರ್ಜಿ ಸಲ್ಲಿಸುವಾಗ ಅಉ5 ಅರ್ಜಿ ನಮೂನೆ, ಸರಕಾರಕ್ಕೆ ಪಾವತಿಸಿದ ಅರ್ಜಿ ಶುಲ್ಕದ ಚಲನ್, ಅಫಿದಾವಿತ್ 100 ರೂ.ರ ಛಾಪ ಕಾಗದ, ಪ್ರಸ್ತಾವಿತ ಜಮೀನಿನ ನಕ್ಷೆ, 2 ಭಾವಚಿತ್ರ, ಆಧಾರ್ ಕಾರ್ಡ್, ಅಗ್ನಿಶಾಮಕ ಇಲಾಖೆ, ಸ್ಥಳೀಯ ಸಂಸ್ಥೆ (ಮಹಾನಗರಪಾಲಿಕೆ/ಗ್ರಾಪಂ) ಮತ್ತು ಪೊಲೀಸ್ ಠಾಣೆಯಿಂದ ನಿರಾಕ್ಷೇಪಣಾ ಪತ್ರ, ಇತ್ಯಾದಿ ದಾಖಲಾತಿಯೊಂದಿಗೆ ಸಲ್ಲಿಸಿ ಹಾಗೂ ಕಚೇರಿಯಿಂದ ಸೂಕ್ತ ಸ್ವೀಕೃತಿಯನ್ನು ಪಡೆಯಬಹುದು.
ತಾತ್ಕಾಲಿಕ ಮಳಿಗೆಗಳನ್ನು ತೆರೆಯುವ ಸಂದರ್ಭ ಮೂಲ ಪರವಾನಿಗೆಯನ್ನು ಕಡ್ಡಾಯವಾಗಿ ಮಳಿಗೆಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಕಾಣಿಸುವ ರೀತಿಯಲ್ಲಿ ಇರಿಸಬೇಕು. ಪರವಾನಿಗೆದಾರರು ಕಡ್ಡಾಯವಾಗಿ ಮಳಿಗೆಗಳಲ್ಲಿ ಹಾಜರಿರಬೇಕು. ಕಚೇರಿಯಿಂದ ಪರವಾನಿಗೆಯನ್ನು ಪಡೆದ ಮಾರಾಟಗಾರರು ಹಸಿರು ಪಟಾಕಿಯನ್ನು ಮಾತ್ರ ಮಾರಾಟ ಮಾಡಬೇಕು. ಪಟಾಕಿ ಮಾರಾಟದ ಮಳಿಗೆಗಳನ್ನು ಅ.19ರಿಂದ ಅ.22 ಮತ್ತು ನವೆಂಬರ್ 1 ಮತ್ತು 2ರವರೆಗೆ ತೆರೆದಿರಬೇಕು.
ಪರವಾನಿಗೆಯಲ್ಲಿ ನಿಗದಿಪಡಿಸಿರುವ ದಿನಾಂಕ ಮತ್ತು ಸ್ಥಳದಲ್ಲಿ ಮಾತ್ರ ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ಇಡಬೇಕು. ಬೇರೆ ಸ್ಥಳ ಮತ್ತು ದಿನಾಂಕಗಳಲ್ಲಿ ಅಂಗಡಿಯನ್ನು ತೆರೆಯಬಾರದು. ಸಾರ್ವಜನಿಕ ವಸತಿ ಸ್ಥಳಗಳಿಂದ ದೂರವಿರುವ ತೆರೆದ ಪ್ರದೇಶಗಳಲ್ಲಿ ಪಟಾಕಿ ಮಳಿಗೆಗಳನ್ನು ಸ್ಥಾಪಿಸಲು ಸಂಬಂಧಿಸಿದ ಇಲಾಖೆ/ಪ್ರಾಧಿಕಾರಗಳು ಅನುಮತಿ ನೀಡಬೇಕು.
ಮಳಿಗೆಗಳಲ್ಲಿ ಎರಡು ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು. ಒಂದು ಮಾರಾಟ ಮಳಿಗೆಯಿಂದ ಮತ್ತೊಂದು ಮಾರಾಟ ಮಳಿಗೆಗೆ ಕನಿಷ್ಟ 3 ಮೀ.ಅಂತರವಿರಬೇಕು. ಪಟಾಕಿ ಖರೀದಿಯ ಸಂದರ್ಭ ಯಾವುದೇ ರೀತಿಯ ಜನದಟ್ಟಣೆಯಾಗದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕು.
ಕೇಂದ್ರ ಮತ್ತು ರಾಜ್ಯ ಸರಕಾರದ ಆದೇಶ/ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 223ರಡಿ ಶಿಸ್ತು/ಕಾನೂನು ಕ್ರಮ ಮತ್ತು ಅನ್ವಯ ವಾಗಬಹುದಾದ ಇತರೆ ಕಾನೂನಿನ ಮೇರೆಗೆ ಕ್ರಮ ಜರುಗಿಸಲಾಗುತ್ತದೆ.
ಮಳಿಗೆಯಲ್ಲಿ ಸ್ಫೋಟಕ ನಿಯಮದಂತೆ 100 ಕೆ.ಜಿ ಯಷ್ಟು ಪಟಾಕಿಗಳು ಮತ್ತು 500 ಕೆ.ಜಿ ಯಷ್ಟು ಚೋರ್ಸಾ ಕ್ರಾಕರ್ಸ್ ಮತ್ತು ಸ್ಟಾಕ್ಲರ್ಸ್ಗಳನ್ನು ಮಾತ್ರ ಇಡಲು ಅವಕಾಶವಿದೆ. ಭಾರತೀಯ ಶಬ್ದಮಟ್ಟದ ಮಾನದಂಡಗಳಂತೆ 125 ಡಿಬಿ (ಎ1) ಅಥವಾ 145 ಪಿಕೆಗಿಂತ ಅಧಿಕ ಶಬ್ದವನ್ನುಂಟು ಮಾಡುವ ಸುಡುಮದ್ದು ಮಾರಾಟ/ಬಳಕೆಯನ್ನು ನಿಷೇಧಿಸಲಾಗಿದೆ.
ಮಳಿಗೆಗಳನ್ನು ರಾತ್ರಿ 10 ಗಂಟೆಯ ನಂತರ ತೆರೆದಲ್ಲಿ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ. ದೀಪಾವಳಿಯ ಮತ್ತು ತುಳಸಿ ಪೂಜೆಯ ಸಂದರ್ಭ ಪಟಾಕಿ ಮಾರಾಟ ಮಾಡುವ ಪರವಾನಿಗೆಯು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಸಮಯದಲ್ಲೂ ರದ್ದುಗೊಳಿಸುವ ಷರತ್ತಿಗೆ ಒಳಪಟ್ಟಿರುತ್ತದೆ.
ಹೆಚ್ಚಿನ ಮಾಹಿತಿಗೆ ನಗರದ ಪೋಲಿಸ್ ಆಯುಕ್ತರ ಕಚೇರಿ ದೂ.ಸಂ:0824-2220803 ಯನ್ನು ಸಂಪರ್ಕಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.







