ಮಂಗಳೂರು: ಆರೋಗ್ಯ ತಪಾಸಣಾ ಶಿಬಿರ ಮತ್ತು ಬ್ಯಾರಿ ಭಾಷಾ ದಿನಾಚರಣೆ

ಮಂಗಳೂರು,ಅ.5: ಅಖಿಲ ಭಾರತ ಬ್ಯಾರಿ ಪರಿಷತ್, ಬ್ಯಾರಿ ಎಲ್ತ್ಗಾರ್ತಿಮಾರೊ ಕೂಟ, ಬ್ಯಾರಿ ಪರಿಷತ್ ಮಹಿಳಾ ಘಟಕದ ವತಿಯಿಂದ ಯೆನೆಪೋಯ ಸಮುದಾಯ ವೈದ್ಯಕೀಯ ವಿಭಾಗದ ಸಹಕಾರದಲ್ಲಿ ಅಡ್ಯಾರ್ನ ಬರಕಾ ಇಂಟರ್ನ್ಯಾಷನಲ್ ಸ್ಕೂಲ್ ಸಭಾಂಗಣದಲ್ಲಿ ರವಿವಾರ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಬಳಿಕ ಬ್ಯಾರಿ ಭಾಷಾ ದಿನ ಆಚರಿಸಲಾಯಿತು.
ಸ್ಕೂಲ್ನ ಪ್ರಾಂಶುಪಾಲ ಬಿ.ಎಸ್. ಶರಫುದ್ದೀನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಖಿಲ ಭಾರತ ಬ್ಯಾರಿ ಪರಿಷತ್ ಕೇಂದ್ರೀಯ ಸಮಿತಿ ಅಧ್ಯಕ್ಷ ಯು.ಎಚ್. ಖಾಲಿದ್ ಉಜಿರೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಯೆನೆಪೋಯ ಮೆಡಿಕಲ್ ಕಾಲೇಜಿನ ಸಮುದಾಯ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಬಾಸ್ಮಾ ರೀಮ್ ಅಮೀರ್, ವೈದ್ಯಾಧಿಕಾರಿ ಡಾ. ಆಯಿಶಾ ನೌರಿನ್, ಸಫ್ರೀನಾ, ಬ್ಯಾರಿ ಎಲ್ತ್ಗಾರ್ತಿಮಾರೊ ಕೂಟದ ಮೇಲ್ವಿಚಾರಕಿ ಆಯಿಶಾ ಯು.ಕೆ., ಬ್ಯಾರಿ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಶಮೀಮಾ ಕುತ್ತಾರ್ ಭಾಗವಹಿಸಿದ್ದರು.
ಈ ಸಂದರ್ಭ ಬ್ಯಾರಿ ಎಲ್ತ್ಗಾರ್ತಿಮಾರೊ ಕೂಟ ಏರ್ಪಡಿಸಿದ ಬ್ಯಾರಿ ಕವನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಲೇಖಕಿ ಝುಲೇಖಾ ಮುಮ್ತಾಝ್ರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಆಯಿಶಾ ಪೆರ್ನೆ, ಸಾರಾ ಅಲಿ ಪರ್ಲಡ್ಕ, ರಮೀಝಾ ಎಂಬಿ., ಮರಿಯಂ ಇಸ್ಮಾಯೀಲ್, ಅಸ್ಮತ್ ವಗ್ಗ ಕವನ ವಾಚಿಸಿದರು. ಡಾ. ಜುವೇರಿಯಾ ಮುಫೀದಾ ಕವಿಗೋಷ್ಠಿ ನಿರೂಪಿಸಿದರು. ಹಸನಬ್ಬ ಮೂಡುಬಿದಿರೆ, ಮುಫೀದಾ ಮತ್ತಿತರರು ಬ್ಯಾರಿ ಹಾಡುಗಳನ್ನು ಹಾಡಿದರು.
ಅಖಿಲ ಭಾರತ ಬ್ಯಾರಿ ಪರಿಷತ್ ಕೇಂದ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ನಡುಪದವು ಪ್ರಾಸ್ತಾವಿಕವಾಗಿ ಮಾತನಾಡಿದರು. ರಮ್ಲತ್ ಕಿರಾಅತ್ ಪಠಿಸಿದರು. ಸೌದಾ ಸ್ವಾಗತಿಸಿದರು. ರೇಶ್ಮಾ ಎಸ್.ಐ. ವಂದಿಸಿದರು. ಅಸ್ಮತ್ ವಗ್ಗ ಕಾರ್ಯಕ್ರಮ ನಿರೂಪಿಸಿದರು.







