ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ

ಮಂಗಳೂರು, ಅ.8: ದೇಶದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಗವಾಯಿಯವರ ಮೇಲೆ ಶೂ ಎಸೆದ ಸನಾತನಿಯ ದುಷ್ಕ್ರತ್ಯವನ್ನು ಖಂಡಿಸಿ ದೇಶಾದ್ಯಂತ ಭುಗಿಲೆದ್ದ ಆಕ್ರೋಶದ ಹಿನ್ನೆಲೆಯಲ್ಲಿ ನಗರದ ಕ್ಲಾಕ್ಟವರ್ ಬಳಿ ಬುಧವಾರ ರೈತ, ಕಾರ್ಮಿಕ ಸಂಘಟನೆಗಳು ಸೇರಿದಂತೆ ವಿವಿಧ ಜನಪರ ಸಮಾನ ಮನಸ್ಕ ಸಂಘಟನೆಗಳ ಜಂಟಿ ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಯಿತು.
ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಅಖಿಲ ಭಾರತ ವಕೀಲರ ಸಂಘಟನೆಯ ಜಿಲ್ಲಾಧ್ಯಕ್ಷ ಯಶವಂತ ಮರೋಳಿ ಮಾತನಾಡಿ ‘ಮುಖ್ಯ ನ್ಯಾಯಮೂರ್ತಿಯವರ ಮೇಲೆ ಚಪ್ಪಲಿ ತೂರಿರುವುದು ಆಕ್ರೋಶಿತನೊಬ್ಬನ ತಕ್ಷಣದ ಪ್ರತಿಕ್ರಿಯೆ ಅಲ್ಲ. ಇದರ ಹಿಂದೆ ವ್ಯವಸ್ಥಿತವಾದ ಪಿತೂರಿ ಇದೆ. ಚಪ್ಪಲಿ ತೂರಿದ ವ್ಯಕ್ತಿ ಬಲಪಂಥೀಯ ಸಿದ್ದಾಂತ, ಸಂಘಟನೆಗಳ ಜೊತೆಗೆ ಗುರುತಿಸಿಕೊಂಡಾತ. ಆರ್ಎಸ್ ಎಸ್ಗೆ ನೂರು ವರ್ಷ ತುಂಬಿರುವ ಸಂದರ್ಭ ನಡೆಯುತ್ತಿರುವ ಕಾರ್ಯಕ್ರಮಗಳು, ಹೊರಡುತ್ತಿರುವ ಸಂದೇಶಗಳು, ಮೋದಿ ನೇತೃತ್ವದ ಸರಕಾರ ನಾಣ್ಯ, ಅಂಚೆ ಚೀಟಿ ಬಿಡುಗಡೆ ಮಾಡಿ ನೀಡಿರುವ ಹೇಳಿಕೆಗಳಿಗೂ, ಚಪ್ಪಲಿ ತೂರಿದ ವ್ಯಕ್ತಿ ಘಟನೆಯ ತರುವಾಯ ನೀಡಿದ ಹೇಳಿಕೆಗಳಿಗೂ ಸಂಬಂಧ ಇದೆ ಎಂದರು.
ಭಾರತದ ಪ್ರಜಾಪ್ರಭುತ್ವ, ಜಾತ್ಯತೀತತೆ, ಸಂವಿಧಾನದ ಘನತೆಯನ್ನು ಘಾಸಿಗೊಳಿಸುವ ದುರುದ್ದೇಶದ ಭಾಗವಾಗಿಯೆ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯ ಕಡೆಗೆ ಚಪ್ಪಲಿ ತೂರಲಾಗಿದೆ, ಈ ಹುನ್ನಾರವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಹೇಳಿದರು.
ಎಐಟಿಯುಸಿ ಜಿಲ್ಲಾ ನಾಯಕರಾದ ಬಿ ಶೇಖರ್ ಮಾತನಾಡಿ, ಮುಖ್ಯ ನ್ಯಾಯಮೂರ್ತಿಯವರ ಮೇಲೆ ಚಪ್ಪಲಿ ತೂರಿದ ಘಟನೆಯ ಹಿಂದೆ ಸಂಘ ಪರಿವಾರದ ಶಕ್ತಿಗಳ ಪಿತೂರಿ ಅಡಗಿದೆ. ಘಟನೆಯ ತರುವಾಯ ಸಾಮಾಜಿಕ ಜಾಲತಾಣಗಳಲ್ಲಿ ಬಲಪಂಥೀಯರು ನ್ಯಾಯಮೂರ್ತಿಯ ವಿರುದ್ದ ಸೃಷ್ಟಿಸಿ ಹರಿಯ ಬಿಡುತ್ತಿರುವ ದ್ವೇಷ ಪೂರಿತ ಕತೆಗಳು ಘಟನೆಯಲ್ಲಿ ಸಂಘ ಪರಿವಾರದ ಪಾತ್ರವನ್ನು ಎತ್ತಿತೋರಿಸುತ್ತದೆ ಎಂದರು.
ದೇಶದ ಸಂವಿಧಾನವನ್ನೇ ಅಪ್ರಸ್ತುತಗೊಳಿಸುವ, ಬಲಪ್ರಯೋಗದ ಮೂಲಕ ಸನಾತನ ಮನುವಾದವನ್ನು ದೇಶದ ಮೇಲೆ ಅಘೋಷಿತವಾಗಿ ಹೇರುವ ಈ ಷಡ್ಯಂತ್ರವನ್ನು ಪ್ರಜಾಪ್ರಭುತ್ವವಾದಿಗಳು ಒಗ್ಗಟ್ಟಿನಿಂದ ಎದುರಿಸಬೇಕಿದೆ ಎಂದು ಹೇಳಿದರು
ದಲಿತ ಚಳುವಳಿಯ ಹಿರಿಯ ನಾಯಕರಾದ ಎಂ.ದೇವದಾಸ್ ರವರು ಮಾತನಾಡಿ, ಭಾರತದ ಸಂವಿಧಾನ, ಪ್ರಜಾಪ್ರಭುತ್ವವು ದಮನಿತ ಸಮುದಾಯಗಳಿಗೆ ಅವಕಾಶ ಒದಗಿಸುತ್ತಿರುವುದು, ಸರ್ವೋಚ್ಚ ನ್ಯಾಯಾಲಯದ ಉನ್ನತ ಪೀಠಗಳಲ್ಲಿ ವಂಚಿತ ಸಮುದಾಯಗಳು, ದಲಿತ ಜಾತಿಗಳಿಂದ ಬಂದವರು ಕುಳಿತುಕೊಳ್ಳುವುದು ಸನಾತನವಾದಿಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಜೀವ ವಿರೋಧಿ, ಅಸಮಾನತೆ, ಜಾತಿ ತಾರತಮ್ಯ ಪ್ರತಿಪಾದಿಸುವ ಮನುವಾದವನ್ನು ಹಿಂಬಾಗಿಲ ಮೂಲಕ ತರಲು ಈ ಸನಾತನವಾದಿಗಳು ಯತ್ನಿಸುತ್ತಿದ್ದಾರೆ. ಅದರ ಭಾಗವಾಗಿಯೇ ದಲಿತ ಸಮುದಾಯದಿಂದ ಬಂದಿರುವ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ಸನಾತನಿಯೊಬ್ಬ ಚಪ್ಪಲಿ ತೂರಿದ್ದಾನೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಹೇಳಿದರು.
ಪ್ರತಿಭಟನೆಯನ್ನುದ್ದೇಶಿಸಿ ಸಮುದಾಯ ಸಂಘಟನೆಯ ರಾಜ್ಯ ನಾಯಕರಾದ ವಾಸುದೇವ ಉಚ್ಚಿಲ್,ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ಮುಖಂಡರಾದ ಶೇಖರ್ ವಾಮಂಜೂರು,ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಝ್ ಮಾತನಾಡಿದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಮುನೀರ್ ಕಾಟಿಪಳ್ಳ, ಸುನಿಲ್ ಕುಮಾರ್ ಬಜಾಲ್, ಸೀತಾರಾಮ ಬೇರಿಂಜ, ವಿ ಕುಕ್ಯಾನ್,ಮಂಜಪ್ಪ ಪುತ್ರನ್,ರಮೇಶ್ ಉಳ್ಳಾಲ, ರಾಮಚಂದ್ರ ಬಬ್ಬುಕಟ್ಟೆ,ಯೋಗೀಶ್ ಜಪ್ಪಿನಮೊಗರು,ಪ್ರಮೀಳಾ ಶಕ್ತಿನಗರ, ಕೃಷ್ಣ ತಣ್ಣೀರುಬಾವಿ, ನವೀನ್ ಕೊಂಚಾಡಿ,ಕರಿಯ ಕೆ,ಕೃಷ್ಣ ಇನ್ನಾ, ಪ್ರಮೋದಿನಿ ಕಲ್ಲಾಪು, ಫ್ಲೇವಿ ಕ್ರಾಸ್ತಾ ಅತ್ತಾವರ,ಡಾ.ಪೌಲಿ ಟೀಚರ್,ತಯ್ಯುಬ್ ಬೆಂಗರೆ, ಪ್ರಭಾಕರ ಕಾಫಿಕಾಡ್, ರಾಕೇಶ್ ಕುಂದರ್, ವಿಲಾಸಿನಿ, ಅಸುಂತ ಡಿಸೋಜ, ರಿಝ್ವಾನ್ ಹರೇಕಳ, ರಝಾಕ್ ಮುಡಿಪು, ಅಬೂಬಕರ್ ಜೆಲ್ಲಿ, ಮನೋಜ್ ವಾಮಂಜೂರು, ಹೊನ್ನಯ್ಯ ಅಮೀನ್,ಮಂಜುಳಾ ವಾಮಂಜೂರು, ಲತಾ ಲಕ್ಷ್ಮಣ್ ಜಗದೀಶ್ ಬಜಾಲ್, ಸಾಧಿಕ್ ಮುಲ್ಕಿ, ವಿಶ್ವನಾಥ ಮಂಜನಾಡಿ, ನಾರಾಯಣ ಮುಂತಾದವರು ಭಾಗವಹಿಸಿದ್ದರು.







