ಮಾಜಿ ಪತ್ರಕರ್ತ ಶ್ರೀನಿವಾಸನ್ ನಂದಗೋಪಾಲ್ರಿಂದ ಬೈಕ್ ಯಾನ: ಸರಕಾರಿ ಶಾಲೆಗಳ ಎಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ

ಮಂಗಳೂರು, ಅ.15: ಸರಕಾರಿ ಶಾಲೆಯ ವಿದ್ಯಾರ್ಥಿಗಳು ಭವಿಷ್ಯದ ಸಮಸ್ಯೆಗಳನ್ನು ಎದುರಿಸುವಂತೆ ಸದೃಢ ರಾಗಿಸುವ ಆಶಯದೊಂದಿಗೆ ಮಾಜಿ ಪತ್ರಕರ್ತ ಶ್ರೀನಿವಾಸನ್ ನಂದಗೋಪಾಲ್ ರಾಜ್ಯಾದ್ಯಂತ ಸಂಚರಿಸುವ ಯಾನ ಆರಂಭಿಸುತ್ತಿದ್ದಾರೆ.
’ಡ್ರೀಮ್ಸ್ ಆನ್ ವೀಲ್ಸ್’ ಎಂಬ ವಿಶಿಷ್ಟ ಯೋಜನೆಯೊಂದಿಗೆ ಆರಂಭವಾಗಿರುವ ಈ ಪ್ರಯಾಣದ ವೇಳೆ ಅವರು ರಾಜ್ಯದ ವಿವಿಧ ಸರಕಾರಿ ಶಾಲೆಗಳ 10ನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ’ಕೌಶಲ ವೃದ್ಧಿ, ಪರೀಕ್ಷಾ ಸಿದ್ಧತೆ ಮತ್ತು ವೃತ್ತಿಬದುಕಿನ ಅವಕಾಶಗಳು’ ಎಂಬ ವಿಷಯವಾಗಿ ಸಂವಾದ-ಸಂವಹನ ನಡೆಸಲಿದ್ದಾರೆ.
ರಾಜ್ಯದ ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿರುವ ಆತ್ಮವಿಶ್ವಾಸದ ಕೊರತೆಯೊಂದಿಗೆ ಪಿಯುಸಿ ಹಂತವನ್ನು ಪ್ರವೇಶಿಸುವ ಅವಕಾಶವಂಚಿತ ವಿದ್ಯಾರ್ಥಿಗಳಲ್ಲಿ ಪ್ರೇರಣೆ ತುಂಬುವಲ್ಲಿ ನೆರವಾಗುವ ಈ ವಿನೂತನ ಯೋಜನೆ ಯನ್ನು ಸಾಕಾರಗೊಳಿಸುವುದಕ್ಕಾಗಿ, ಅವರು ತನ್ನ ಬೈಕ್ನಲ್ಲಿ ಸಂಚರಿಸಲಿದ್ದಾರೆ.
ಮೂರು ತಿಂಗಳಲ್ಲಿ ರಾಜ್ಯದ 31 ಜಿಲ್ಲೆಗಳ ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ತಲಾ 90 ನಿಮಿಷಗಳ 62 ಸಂವಾದ ಕಾರ್ಯಕ್ರಮವನ್ನು ನಡೆಸುವ ಮೂಲಕ ಸುಮಾರು 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪುವ ಯೋಜನೆಯಿದೆ ಎಂದು ನಂದಗೋಪಾಲ್ ಮಾಹಿತಿ ನೀಡಿದ್ದಾರೆ.
ಈ ಯೋಜನೆಯ ಉದ್ದೇಶವು ಸಂವಾದ ಕಾರ್ಯಕ್ರಮದ ಪರಿಧಿಯಾಚೆಗೆ ವಿಸ್ತರಿಸಿಕೊಂಡಿರುವಂತದ್ದು. ರಾಜ್ಯ ದಲ್ಲಿರುವ ಸರಕಾರಿ ಶಾಲೆಗಳ ಪ್ರಸಕ್ತ ಸನ್ನಿವೇಶ, ಶೈಕ್ಷಣಿಕ ಸಂರಚನೆ ಹಾಗೂ ಅಧ್ಯಾಪಕರ ಸಾಮರ್ಥ್ಯಗಳ ವಿಮರ್ಶಾತ್ಮಕ ಅಧ್ಯಯನ ಮತ್ತು ಮೌಲ್ಯಮಾಪನದ ಉದ್ದೇಶವೂ ಇದೆ ಎಂದು ತಿಳಿಸಿದ್ದಾರೆ.
16 ವರ್ಷಗಳ ಹಿಂದೆ ನಂದಗೋಪಾಲ್ ಮತ್ತವರ ಪತ್ನಿ ಸಚಿತಾ ದಂಪತಿಯು ಉದ್ಯೋಗವನ್ನು ತೊರೆದು ಮಕ್ಕಳ ಸಹಜ ಕಲಿಕೆಯನ್ನು ಉತ್ತೇಜಿಸುವ ’ಸೆಂಟರ್ ಫಾರ್ ಇಂಟಗ್ರೇಟೆಡ್ ಲರ್ನಿಂಗ್’ ಎಂಬ ಸಂಸ್ಥೆಯೊಂದನ್ನು ಮುನ್ನಡೆ ಸುತ್ತಿದ್ದಾರೆ. ಪ್ರಸಕ್ತ ಶಿಕ್ಷಣ ವ್ಯವಸ್ಥೆಯನ್ನು ಮೌಲಿಕವಾಗಿಸುವ ತರಬೇತಿ ಮಾಡ್ಯೂಲ್ಗಳು, ಅಭಿಯಾನಗಳು, ಶೈಕ್ಷಣಿಕ ಕಾರ್ಯಕ್ರಮಗಳು ಮತ್ತಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.
ಸರಕಾರಿ ಶಾಲಾ ಶಿಕ್ಷಣದ ಕುರಿತಾದ ಕಾಳಜಿ, ಪತ್ರಿಕೋದ್ಯಮ ರಂಗದ ಅನುಭವಗಳು ಹಾಗೂ ತನ್ನ ಸಾಹಸ ಪ್ರಿಯತೆಗಳ ಹಿನ್ನೆಲೆಯು ಈ ಯಾನದ ಯೋಜನೆಗೆ ಪ್ರೇರಣೆಯಾಗಿವೆ. ಸುಮಾರು 4,000 ಕಿ.ಮೀ. ದೂರವನ್ನು ಕ್ರಮಿಸುವ ಮೂಲಕ ಸಮಸ್ಯೆಯನ್ನು ತಲಸ್ಪರ್ಶಿಯಾಗಿ ಅರಿತುಕೊಳ್ಳುವ ಇಚ್ಛೆಯಿದೆ ಎಂದು ನಂದಗೋಪಾಲ್ ತಿಳಿಸಿದರು.







