ವಿಧಾನಸಭಾ ಅಧ್ಯಕ್ಷರ ಕಚೇರಿಯಲ್ಲಿ ದುಂದುವೆಚ್ಚ ಆರೋಪ: ನ್ಯಾಯಾಂಗ ತನಿಖೆಗೆ ಶಾಸಕ ಭರತ್ ಶೆಟ್ಟಿ ಒತ್ತಾಯ

ಮಂಗಳೂರು: ವಿಧಾನಸಭಾ ಅಧ್ಯಕ್ಷರ ಕಚೇರಿಯಲ್ಲಿ ಆಡಳಿತಾತ್ಮಕ ಸುಧಾರಣೆ ಹೆಸರಲ್ಲಿ ಕೋಟ್ಯಂತರ ರೂ.ಗಳ ಭ್ರಷ್ಟಾಚಾರ ಮತ್ತು ದುಂದುವೆಚ್ಚವಾಗಿದ್ದು, ಈ ಬಗ್ಗೆ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ಶಾಸಕ ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ.
ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅನವಶ್ಯಕವಾಗಿ ಕೋಟ್ಯಂತರ ರೂ. ದುಬಾರಿ ವೆಚ್ಚದಲ್ಲಿ ಶಾಸಕರ ಭವನವನ್ನು ಸ್ಮಾರ್ಟ್ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಲು ಹೊರಟರೆ, ಸ್ಪೀಕರ್ ಕಚೇರಿ ವಿಚಾರ ಮಾಹಿತಿ ಹಕ್ಕು ವ್ಯಾಪ್ತಿಗೆ ಒಳಪಡುವುದಿಲ್ಲ. ಇದನ್ನೇ ಬಂಡವಾಳ ವಾಗಿಟ್ಟು ಕೊಂಡು ಸ್ಪೀಕರ್ ಅವರು ಹಣಕಾಸು ದುರುಪಯೋಗ ಮಾಡಿರುವ ಶಂಕೆ ಇದೆ. ಈ ಬಗ್ಗೆ ಬಿಜೆಪಿ ವತಿಯಿಂದ ರಾಜ್ಯಪಾಲರಿಗೆ ದೂರು ನೀಡಲಾಗುವುದು ಎಂದರು.
ವಿಧಾನಸೌಧಕ್ಕೆ ವಿದ್ಯುತ್ ದೀಪಾಲಂಕಾರ, ಶಾಸಕರ ಭವನಕ್ಕೆ ಹಾಸಿಗೆ, ದಿಂಬುಗಳ ಖರೀದಿ, ದುಂದುವೆಚ್ಚದ ವಿದೇಶಿ ಅಧ್ಯಯನ ಪ್ರವಾಸ, ವಿಧಾನಸೌಧದ ಮೊಗಸಾಲೆಯಲ್ಲಿ ಮಸಾಜ್ ಪಾರ್ಲರ್ ಸ್ಥಾಪನೆಯಲ್ಲಿ ಅಕ್ರಮ ನಡೆದಿರುವ ಶಂಕೆ ಇದೆ. ಕೋಟ್ಯಂತರ ರೂ.ಗಳಲ್ಲಿ ಮರದ ಬಾಗಿಲು, ಅನಗತ್ಯ ನೆಲಹಾಸು ಹೊದಿಕೆ, ದುಬಾರಿ ಪುಸ್ತಕ ಮೇಳ, ಸಭಾಂಗಣದ ಒಳಗೆ ಎಐ ಕ್ಯಾಮರಾ ಹಾಗೂ ಹೊಸದಾಗಿ ಟಿವಿ ಅಳವಡಿಕೆಗೆ ಬೇಕಾಬಿಟ್ಟ ಖರೀದಿ ಮಾಡಿರುವ ಆರೋಪಕ್ಕೆ ಗುರಿಯಾಗಿದ್ದಾರೆ ಎಂದು ಆರೋಪಿಸಿದರು.
ಯಾವುದೇ ವಸ್ತು ಖರೀದಿಸಲು ಹಣಕಾಸು ಇಲಾಖೆಯ ಅನುಮತಿ ಮತ್ತು ಟೆಂಡರ್ ಸೇರಿದಂತೆ ಹಲವು ನಿಯಮ ಗಳ ಪಾಲನೆಯಾಗಬೇಕು. ಆದರೆ ಇಲ್ಲಿ ಅಂತಹ ನಿಯಮಗಳ ಪಾಲನೆಯಾಗಿಲ್ಲ. ಹಣಕಾಸು ಇಲಾಖೆಯ ಅನುಮತಿ ಇಲ್ಲದೆಯೇ ಕೋಟ್ಯಂತರ ರೂ. ವೆಚ್ಚ ಮಾಡಲಾಗಿದೆ. ಎಲ್ಲ ವಸ್ತುಗಳಿಗೂ ಎರಡ್ಮೂರು ಪಟ್ಟು ಹೆಚ್ಚು ದರ ತೋರಿಸಿ ಇಲಾಖೆಯ ಅನುಮತಿ ಪಡೆಯಲಾಗಿದೆ. ತುರ್ತಾಗಿ ಮಾಡಬೇಕಾದ ಕೆಲಸ ಎಂದು 4ಜಿ ವಿನಾಯ್ತಿ ನೀಡಿರುವುದು ಸಂಶಯಕ್ಕೆ ಕಾರಣವಾಗಿದೆ. ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿರುವ ಹಿಂದೆ ಸಭಾಧ್ಯಕ್ಷರ ಪಕ್ಷಪಾತಿ ನಿರ್ಣಯಕೂಡ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರವನ್ನು ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಬಿಜೆಪಿ ಪ್ರಸ್ತಾಪಿಸಲಿದೆ ಎಂದರು.
ಮುಖಂಡರಾದ ರಾಜಗೋಪಾಲ ರೈ, ರವೀಂದ್ರ ಶೆಟ್ಟಿ ಉಳಿದೊಟ್ಟು, ಪೂರ್ಣಿಮಾ, ರಮೇಶ್ ಕಂಡೆಟ್ಟು, ವಸಂತ ಪೂಜಾರಿ, ಅರುಣ್ ಶೇಟ್ ಮತ್ತಿತರರಿದ್ದರು.







