ಪ್ರಿಯದರ್ಶಿನಿ ಮಹಿಳಾ ವೇದಿಕೆ ವತಿಯಿಂದ ಮಹಿಳಾ ಸಮಾವೇಶ

ಉಳ್ಳಾಲ: ರಾಜ್ಯ ಸರಕಾರ ಅನುಷ್ಟಾನಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳಿಂದ ಇಂದು ಮಹಿಳೆಯರು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಕುಟುಂಬವನ್ನು ನಿರ್ವಹಿಸುವ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಿದೆ.ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ ಅವರನ್ನ ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸೌಮ್ಯಾ ರೆಡ್ಡಿ ಹೇಳಿದರು.
ಮಂಗಳೂರು ವಿಧಾನಸಭಾ ಕ್ಷೇತ್ರ ಪ್ರಿಯದರ್ಶಿನಿ ಮಹಿಳಾ ವೇದಿಕೆಯ ಆಶ್ರಯದಲ್ಲಿ ಅಂಬಿಕಾರೋಡ್ ಖಾಸಗಿ ಸಭಾಂಗಣದಲ್ಲಿ ಶನಿವಾರ ‘ನಮ್ಮ ಕಥೆ, ನಮ್ಮ ಶಕ್ತಿ, ನಮ್ಮ ಯಶಸ್ಸು, ಬನ್ನಿ ಮಹಿಳಾ ಸಮಾವೇಶದಲ್ಲಿ’ ಎಂಬ ಘೋಷಣೆಯಡಿ ನಡೆದ ‘ಪರಿವರ್ತನಾ’ ಮಹಿಳಾ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಈ ಮಹಿಳಾ ಸಮಾವೇಶವು ರಾಜ್ಯ ಹಾಗೂ ದೇಶಕ್ಕೆ ಮಾದರಿಯಾಗಿದೆ.ಪ್ರತಿ ತಾಲೂಕು ಜಿಲ್ಲೆಗಳಲ್ಲೂ ಇಂತಹ ಮಹಿಳಾ ಸಮಾವೇಶ ನಡೆಯುವಂತಾಗಬೇಕು ಎಂದು ಕರೆ ನೀಡಿದರು.
ಪಂಚ ಗ್ಯಾರಂಟಿ ಯೋಜನೆಯ ಬಗ್ಗೆ ಫಲಾನುಭವಿಗಳು ವೇದಿಕೆಯಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಈ ಸಂದರ್ಭ ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಕಾರ್ಡ್ ವಿತರಣೆ ಹಾಗೂ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ನೋಂದಣಿ ಕಾರ್ಯ ನಡೆಯಿತು.
ಸ್ಪೀಕರ್ ಯು.ಟಿ ಖಾದರ್ , ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಸೌಮ್ಯಾ ರೆಡ್ಡಿ, ಹಿರಿಯ ಕಾಂಗ್ರೆಸಿಗರಾದ ವಾರಿಜ ಬಾಬು ಸುವರ್ಣ, ಲೂಯಿಸ ಮೊಂತೆರೋ, ನೆಬಿಸ ಮಹಮ್ಮದ್ ಮಲಾರ್ , ವಿಧಾನ ಪರಿಷತ್ ಸದಸ್ಯೆ ಆರತಿ ಕೃಷ್ಣ, ಮಾಜಿ ಶಾಸಕಿ ಶಕುಂತಳ ಶೆಟ್ಟಿ,ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾಲ ನಾರಾಯಣ ರಾವ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೆಟಿಲ್ಡ ಡಿಸೋಜ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಮತಾ ಗಟ್ಟಿ, ಪರಿಸರ ಹಾಗೂ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಶಾಲೆಟ್ ಪಿಂಟೋ, ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಪ್ರತಿಭಾ ಕುಳಾಯಿ, ಸಾವಯವ ಬೀಜ ಪ್ರಾಮಣೀಕರಣ ನಿಗಮದ ಅಧ್ಯಕ್ಷೆ ಲಾವಣ್ಯ ಬಳ್ಳಾಲ್ ,ವಕ್ಫ್ ರಾಜ್ಯ ಸಮಿತಿ ಸದಸ್ಯೆ ರಝಿಯಾ ಇಬ್ರಾಹಿಂ, ಬೆಂಗಳೂರು ಸೆಂಟ್ರಲ್ ಉಸ್ತುವಾರಿ ಸುರಯ್ಯ ಅಂಜುಮ್, ಮಂಗಳೂರು ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕುಮಾರಿ ಅಪ್ಪಿ ಎಸ್., ಜಿಲ್ಲಾ ಗ್ರಾಮೀಣ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಉಷಾ ಆಂಚನ್,ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಉಪಾಧ್ಯಕ್ಷೆ ಸುರೇಖಾ ಚಂದ್ರಹಾಸ್, ಉಳ್ಳಾಲ ನಗರಸಭಾಧ್ಯಕ್ಷೆ ಶಶಿಕಲಾರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಿಕಾ ರೈ ಸ್ವಾಗತಿಸಿದರು.ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸುರೇಖಾ ಚಂದ್ರಹಾಸ್ ವಂದಿಸಿದರು.ವಿಜೆ ಶರ್ಮಿಳಾ ನಿರೂಪಿಸಿದರು.







