ಇನಾಯತ್ ಅಲಿ ನೇತೃತ್ವ; ಮಂಗಳೂರು ಉತ್ತರದಿಂದ 150ಕ್ಕೂ ಅಧಿಕ ಬಸ್ಗಳಲ್ಲಿ ಆಗಮಿಸಿದ ಕಾರ್ಯಕರ್ತರು
ಕಾಂಗ್ರೆಸ್ ಕಾರ್ಯಕರ್ತರ ರಾಜ್ಯ ಮಟ್ಟದ ಸಮಾವೇಶ

ಮಂಗಳೂರು: ಅಡ್ಯಾರ್ನಲ್ಲಿಂದು ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ರಾಜ್ಯ ಮಟ್ಟದ ಸಮಾವೇಶಕ್ಕೆ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ನೇತೃತ್ವದಲ್ಲಿ 150ಕ್ಕೂ ಹೆಚ್ಚಿನ ಬಸ್ ಹಾಗೂ ವಿವಿಧ ವಾಹನಗಳಲ್ಲಿ ಕಾರ್ಯಕರ್ತರು ಆಗಮಿಸಿದರು.
ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಸುರತ್ಕಲ್, ಕಾವೂರು, ವಾಮಂಜೂರು ಸೇರಿದಂತೆ ಹಲವೆಡೆಯ ಕಾರ್ಯಕರ್ತರು ಹಾಗೂ ಬೆಂಬಲಿಗರು 150 ಬಸ್ಗಳು, 250ಕ್ಕೂ ಹೆಚ್ಚಿನ ಕಾರುಗಳು, ದ್ವಿಚಕ್ರ ವಾಹನಗಳಲ್ಲಿ ಮಧ್ಯಾಹ್ನ 1 ಗಂಟೆಗೆ ಇನಾಯತ್ ಅಲಿಯವರ ಮಂಗಳೂರಿನ ಕೆಪಿಟಿ ಕಚೇರಿ ಬಳಿ ಜಮಾಯಿಸಿದರು. ಬಳಿಕ ಸಮಾವೇಶ ಆಯೋಜಿಸಿದ್ದ ಸಹ್ಯಾದ್ರಿ ಕಾಲೇಜು ಮೈದಾನದತ್ತ ಪ್ರಯಾಣಿಸಿದರು.
"ಇನಾಯತ್ ಎಂಎಲ್ಸಿಯಾಗಲಿ"
ಈ ವೇಳೆ ತಮ್ಮ ಅನಿಸಿಕೆ ಹಂಚಿಕೊಂಡ ಕಾರ್ಯಕರ್ತರು, ‘‘ಚುನಾವಣೆಯಲ್ಲಿ ಸೋತರೆ ಕ್ಷೇತ್ರದತ್ತ ಮುಖ ಮಾಡದ ರಾಜಕಾರಣಿಗಳನ್ನು ನೋಡಿದ್ದೇವೆ. ಆದರೆ, ಇನಾಯತ್ ಅಲಿ ಅವರು ಕ್ಷೇತ್ರದಲ್ಲೇ ಇದ್ದು, ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಕ್ಷದ ಬಲವರ್ಧನೆ ಮಾಡಿ ಮುನ್ನಡೆಸುತ್ತಿದ್ದಾರೆ. ಅವರಂತಹ ಮಾನವ ಪ್ರೇಮಿಗೆ ಸರಕಾರ ವಿಧಾನ ಪರಿಷತ್ ಸದಸ್ಯತ್ವ ನೀಡಿ ಮತ್ತಷ್ಟು ಜನಸೇವೆಗೆ ಅವಕಾಶ ಕಲ್ಪಿಸಬೇಕು’’ ಎಂದು ಒತ್ತಾಯಿಸಿದರು.
ಈ ಬಾರಿ ಕಾಂಗ್ರೆಸ್ ಲೋಕಸಭೆ ಚುನಾವಣೆಯ ರಣಕಹಳೆಯನ್ನು ಮಂಗಳೂರಿನಲ್ಲೇ ಮೊಳಗಿಸಿದೆ. ಇದಕ್ಕೆ ಸಾಕ್ಷಿ ಯಾಗಲು ಮಂಗಳೂರು ಉತ್ತರ ಕ್ಷೇತ್ರದಿಂದ 15 ಸಾವಿರದಷ್ಟು ಮಂದಿ ಸಮಾವೇಶಕ್ಕೆ ಬಂದಿದ್ದೇವೆ. ಈ ಪೈಕಿ ಹೆಚ್ವಿನವರು ಕಾಂಗ್ರೆಸ್ ನ ಐದು ಗ್ಯಾರಂಟಿಗಳ ಫಲಾನುಭವಿಗಳಾಗಿದ್ದು, ಎಲ್ಲರೂ ಸ್ವಇಚ್ಛೆಯಿಂದ ಆಗಮಿಸಿದ್ದಾರೆ. ಡಬಲ್ ಇಂಜಿನ್ ಆಗಿದ್ದ ಸರಕಾರದಿಂದ ಒಂದು ಇಂಜಿನನ್ನು ನಾವು ಈಗಾಗಲೇ ಕಳಚಿದ್ದೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮತ್ತೊಂದು ಇಂಜಿನನ್ನೂ ಕಳಚಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲಿದೆ.
-ಇನಾಯತ್ ಅಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ







