ತುಳುವನ್ನು ಕರ್ನಾಟಕದ 2ನೇ ಅಧಿಕೃತ ಭಾಷೆಯನ್ನಾಗಿ ಘೋಷಣೆಗೆ ಆಗ್ರಹಿಸಿ ಅಭಿಯಾನ
ಜ.29ರಿಂದ ಫೆ.2ರ ತನಕ ಪ್ರಧಾನಿ, ಮುಖ್ಯಮಂತ್ರಿಗೆ ಮನವಿ ಸಲ್ಲಿಕೆ

ಮಂಗಳೂರು: ತುಳು ಭಾಷೆಯನ್ನು ಸಂವಿಧಾನದ ಆರ್ಟಿಕಲ್-345ರ ಅಡಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕನ್ನಡ ಭಾಷೆಯೊಂದಿಗೆ 2ನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರವನ್ನು ಆಗ್ರಹಿಸಿ ಜ.29ರಿಂದ ಫೆ.2ರ ತನಕ ಅಭಿಯಾನ ನಡೆಸಲಾಗುವುದು ಎಂದು ಮಾಜಿ ಶಾಸಕ ಬಿ.ಎ.ಮೊಯ್ದೀನ್ ಬಾವ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆ ಯನ್ನಾಗಿ ಘೋಷಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ರಿಜಿಸ್ಟ್ರರ್ಡ್ ಪೋಸ್ಟ್ ಮೂಲಕ ತಲಾ 10 ಸಾವಿರ ಮನವಿ ಪತ್ರಗಳು ಸಲ್ಲಿಕೆಯಾಗಲಿದೆ ಎಂದು ಮಾಹಿತಿ ನೀಡಿದರು.
ಈ ಅಭಿಯಾನಕ್ಕೆ ಕೈಜೋಡಿಸುವಂತೆ ತುಳುನಾಡಿನ ಎಲ್ಲಾ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರುಗಳು, ತುಳು ರಂಗಭೂಮಿ ಮತ್ತು ತುಳು ಚಿತ್ರರಂಗದ ಎಲ್ಲಾ ಕಲಾವಿದರು ಹಾಗೂ ಪ್ರಮುಖರು, ತುಳುನಾಡಿನ ಎಲ್ಲಾ ವ್ಯಾಪಾರಿಗಳು, ಉದ್ಯಮಿಗಳನ್ನು ವಿನಂತಿಸಿದರು.
ಫೆಬ್ರವರಿ ತಿಂಗಳಲ್ಲಿ ನಡೆಯುವ ಬಜೆಟ್ ಅಧಿವೇಶನದ ಒಳಗಾಗಿ ಈ ಕುರಿತು ನಿರ್ಣಯ ಕೈಗೊಂಡು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಲು ಶೀಘ್ರದಲ್ಲೇ ಮುಖ್ಯ ಮಂತ್ರಿ ಅವರನ್ನು ನಿಯೋಗ ಭೇಟಿಯಾಗಲಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯದ ಕರಾವಳಿ ಜಿಲ್ಲೆಗಳಾದ ತುಳುನಾಡಿನ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಸೇರಿದಂತೆ, ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ ಜಿಲ್ಲೆಯ, ತೀರ್ಥಹಳ್ಳಿ, ಹೊಸನಗರ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಶೃಂಗೇರಿ, ಕೊಪ್ಪ, ಹಾಸನ ಜಿಲ್ಲೆಯ ಸಕಲೇಶಪುರ ಭಾಗದಲ್ಲಿ ಮತ್ತು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ತುಳು ಭಾಷೆಯನ್ನು ಮಾತೃಭಾಷೆಯನ್ನಾಗಿ ಮಾತನಾಡುವ ಜನರಿದ್ದು, ತುಳು ಭಾಷೆಗೆ ತನ್ನದೇ ಆದ ಇತಿಹಾಸವಿದೆ. 2011ರ ಜನಗಣತಿಯ ಪ್ರಕಾರ ಸುಮಾರು 18 ಲಕ್ಷ ಜನರು ತುಳು ಭಾಷೆಯನ್ನು ಮಾತೃಭಾಷೆಯನ್ನಾಗಿ ಮಾತನಾಡುತ್ತಿದ್ದಾರೆ. ತುಳು ಭಾಷೆಯ ಸ್ವಂತ ಲಿಪಿಯನ್ನು ಹೊಂದಿದ ಭಾಷೆಯಾಗಿದೆ. ತುಳು ಭಾಷೆಗೆ ಸಂಬಂಧಿಸಿದಂತೆ ಕಲಿಕಾ ಹಾಗೂ ಸಂಶೋಧನಾ ಕೋರ್ಸ್ಗಳು ಸಹ ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿವೆ. ಪ್ರಮುಖವಾಗಿ ಕರ್ನಾಟಕ ಸರಕಾರವು ತುಳು ಸಾಹಿತ್ಯ ಅಕಾಡೆಮಿ ಎಂಬ ಸರಕಾರದ ಸಂಸ್ಥೆಯನ್ನು ಪ್ರಾರಂಭಿಸಿ ತುಳು ಸಾಹಿತ್ಯಕ್ಕೆ ಉತ್ತೇಜನವನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ತುಳುನಾಡಿನಲ್ಲಿ ದೈವಗಳ ಭಾಷೆಯೆಂದು ಕರೆಯಲ್ಪಡುವ ತುಳು ಭಾಷೆ ಉಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಆದ್ಯ ಕರ್ತವ್ಯವಾಗಿದೆ ಎಂದರು.
ಸಂವಿಧಾನದ ಆರ್ಟಿಕಲ್ 29ರ ಅಡಿಯಲ್ಲಿ ಲಿಪಿಯನ್ನು ಹೊಂದಿದ ಭಾಷೆಗಳನ್ನು ಉಳಿಸಿ ಬೆಳೆಸುವುದು ಭಾಷಾ ಅಲ್ಪ ಸಂಖ್ಯಾತರ ಹಕ್ಕಾಗಿದೆ. ಈ ಕುರಿತಂತೆ ಬಿಹಾರ್ ರಾಜ್ಯ ಭಾಷಾ (ಜಾರ್ಖಂಡ್) 2018, ಉತ್ತರಾಖಂಡ ರಾಜ್ಯ ಭಾಷಾ ಕಾಯ್ದೆ 2009, ಆಂಧ್ರ ಪ್ರದೇಶ ಅಧಿಕೃತ ಭಾಷೆಗಳ ತಿದ್ದುಪಡಿ ಕಾಯ್ದೆ 2022 ಹಾಗೂ ಕೇರಳ ರಾಜ್ಯ ಅಧಿಕೃತ ಭಾಷಾ ಕಾಯ್ದೆ 1969 ಸೆಕ್ಷನ್ 3ರ ರೀತಿಯಲ್ಲಿ ಆ ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಭಾಷೆಗಳಿಗೆ ಅಧಿಕೃತ ಭಾಷೆಯ ಸ್ಥಾನವನ್ನು ನೀಡಲಾಗಿದೆ. ಅದೇ ರೀತಿಯಲ್ಲಿ ತುಳುನಾಡಿನ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹಾಗೂ ಗಡಿನಾಡು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗಳಲ್ಲಿ ಹೆಚ್ಚು ಜನರು ಮಾತನಾಡುವ ಭಾಷೆಯಾದ ತುಳು ಭಾಷೆಯನ್ನು 8ನೇ ಪರಿಚ್ಚೇದ ದಲ್ಲಿ ಸೇರಿಸುವ ಮೂಲಕ ಕನ್ನಡ ಭಾಷೆಯ ಜೊತೆಗೆ ಸಹೋದರ ಭಾಷೆಯಾಗಿ ತುಳು ಭಾಷೆಯನ್ನು ಕರ್ನಾಟಕದ 2ನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಲು ಕ್ರಮ ಕೈಗೊಳ್ಳಬೇಕೆಂದು ಸರಕಾರವನ್ನು ಆಗ್ರಹಿಸಿದರು.
ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಮಾತನಾಡಿ ತುಳು ಅಕಾಡೆಮಿಗೆ ಅಧ್ಯಕ್ಷರಿಲ್ಲದೆ ಅಕಾಡೆಮಿಯ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದೆ. ಕೂಡಲೇ ಸಮರ್ಥ ಅಧ್ಯಕ್ಷರೊಬ್ಬರನ್ನು ನೇಮಕ ಮಾಡುವಂತೆ ಸರಕಾರವನ್ನು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ತುಳು ರಂಗಭೂಮಿಯ ಹಿರಿಯ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ಬೈಲ್, ಎಚ್.ಕೆ.ಶರೀಫ್, ಶೈಲೇಶ್ ಉಪಸ್ಥಿತರಿದ್ದರು.







