ಪುದು ಗ್ರಾಪಂಗೆ 2.50 ಕೋಟಿ ರೂ. ಅನುದಾನ: ಸ್ಪೀಕರ್ ಯು.ಟಿ.ಖಾದರ್
ಅಮ್ಮೆಮಾರ್ ಸರಕಾರಿ ಶಾಲೆಯ ನೂತನ ಕಟ್ಟಡದಕ್ಕೆ ಶಿಲಾನ್ಯಾಸ

ಬಂಟ್ವಾಳ: ಪುದು ಗ್ರಾಮ ಪಂಚಾಯತ್ ಸದಸ್ಯರ ಬೇಡಿಕೆಯಂತೆ ಈ ಬಾರಿ ಪುದು ಗ್ರಾಪಂ ವ್ಯಾಪ್ತಿಗೆ 2.50 ಕೋಟಿ ರೂ ಅನುದಾನ ಒದಗಿಸಲಾಗಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಆದ್ಯತೆಯ ಮೇಲೆ ಕಾಮಗಾರಿಗಳನ್ನು ಮಾಡುವಂತೆ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ಪುದು ಗ್ರಾಪಂ ವ್ಯಾಪ್ತಿಯ ಅಮ್ಮೆಮಾರ್ ನಲ್ಲಿರುವ ದ.ಕ. ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 36 ಲಕ್ಷ ರೂ. ವೆಚ್ಚದ ನೂತನ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡುತ್ತಿದ್ದರು.
ಅಮ್ಮೆಮಾರ್ ಗ್ರಾಮ ಪಂಚಾಯತ್ ಅಭಿವೃದ್ಧಿಯಾಗಲಿಕ್ಕೆ ಈ ಭಾಗದ ಜನರು ಬೇರೆ ಬೇರೆ ಕೆಲಸ ಮಾಡಿಕೊಂಡು ಸ್ವಾಭಿಮಾನದ ಬದುಕನ್ನು ಕಂಡುಕೊಂಡ ಹಿನ್ನೆಲೆಯಲ್ಲಿ ಸಾಧ್ಯವಾಗಿದೆ. ಜನವಸತಿ ಜಾಸ್ತಿ ಇದ್ದ ಕಾರಣ ಇಲ್ಲಿಗೆ ಹೆಚ್ಚಿನ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಸ್ಪೀಕರ್ ತಿಳಿಸಿದರು.
ಹಿರಿಯರು ಆರಂಭಿಸಿದ ಶಾಲೆಯ ಅಭಿವೃದ್ಧಿಗಾಗಿ ಎರಡು ತರಗತಿ ಕೊಠಡಿಗೆ 36 ಲಕ್ಷ ರೂ. ಹಾಗೂ ಶಾಲೆಗೆ ಬಣ್ಣ ಬಳಿಯಲು ಮತ್ತು ಬೆಂಚು, ಡೆಸ್ಕ್ ಗಳಿಗೆ 3.5 ಲಕ್ಷ ರೂ. ಒಟ್ಟು 39 ಲಕ್ಷ ರೂ. ಅನುದಾನ ಒದಗಿಸಲಾಗಿದೆ. 65 ಲಕ್ಷ ರೂ. ವೆಚ್ಚದಲ್ಲಿ ಅಮ್ಮೆಮಾರ್ ನಲ್ಲಿ ನೂತನ ಆರೋಗ್ಯ ಉಪ ಕೇಂದ್ರ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.
ಅಮ್ಮೆಮಾರ್ ರೈಲ್ವೆ ಟ್ರ್ಯಾಕ್ ಬಳಿಯರಸ್ತೆ ಕಾಂಕ್ರೀಟೀಕರಣ ಆಗುತ್ತಿದೆ, ಉಳಿದಂತೆ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಹಂತ ಹಂತವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದು ಸ್ಪೀಕರ್ ತಿಳಿಸಿದರು.
ದ.ಕ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ, ಗ್ರಾಪಂ ಮಾಜಿ ಅಧ್ಯಕ್ಷ ರಮ್ಲಾನ್ ಮಾರಿಪಲ್ಲ, ಉಪಾಧ್ಯಕ್ಷ ಇಕ್ಬಾಲ್ ಸುಜೀರ್, ಗ್ರಾಪಂ ಸದಸ್ಯರಾದ ಇಶಾಮ್ ಫರಂಗಿಪೇಟೆ, ರಝಾಕ್ ಅಮ್ಮೆಮಾರ್, ಸಾರಾ ಅಮ್ಮೆಮಾರ್, ರುಕ್ಸಾನಾ ಅಮ್ಮೆಮಾರ್, ನಬೀಸಾ ಅಮ್ಮೆಮಾರ್, ಆತಿಕಾ ಅಮ್ಮೆಮಾರ್, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಝುಬೈರ್ ಅಮ್ಮೆಮಾರ್, ಶಾಲಾ ಮುಖ್ಯ ಶಿಕ್ಷಕಿ ಝರಿನಾ ಫೆರ್ನಾಂಡಿಸ್, ಬದ್ರಿಯಾ ಮಸೀದಿ ಅಧ್ಯಕ್ಷ ಅಬುಸಾಲಿ ಉಸ್ತಾದ್, ಪ್ರಮುಖರಾದ ಅಖ್ತರ್ ಹುಸೈನ್, ಮುಹಮ್ಮದ್ ಬುಖಾರಿ, ಎಫ್.ಎ.ಖಾದರ್, ಫಯಾಝ್ಅಮ್ಮೆಮಾರ್, ಅಬುಸಾಲಿ ಕಲ್ಲಾಜೆ, ಫಾರೂಕ್ ಪುಂಚಮೆ, ಹರ್ಷದ್ ಪುಂಚಮೆ ಮೊದಲಾದವರು ಉಪಸ್ಥಿತರಿದ್ದರು.