ಮೀನುಗಾರಿಕಾ ಧಕ್ಕೆಯ 3ನೆ ಹಂತದ ಜೆಟ್ಟಿ ಕಾಮಗಾರಿ ಟೆಂಡರ್ಗೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ

ಮಂಗಳೂರು: ಮಂಗಳೂರು ಮೀನುಗಾರಿಕಾ ಬಂದರಿನ ಬಹುಮುಖ್ಯ ಬೇಡಿಕೆಯಾಗಿರುವ 3ನೆ ಹಂತದ ಜೆಟ್ಟಿ ಕಾಮಗಾರಿಗೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರಕಿದ್ದು, ವಾರದೊಳಗೆ ಪರಿಷ್ಕೃತ ಅಂದಾಜು ಪಟ್ಟಿ ತಯಾರಿಸಿ ಡಿಸೆಂಬರ್ ಅಂತ್ಯದೊಳಗೆ ಟೆಂಡರ್ ಕರೆಯಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಮೀನುಗಾರ ಮುಖಂಡರ ಜತೆ ಜತೆಗಿನ ಚರ್ಚೆಯ ವೇಳೆ ಈ ಸೂಚನೆ ನೀಡಿದರು.
ತೃತೀಯ ಹಂತದ ಜೆಟ್ಟಿ ನಿರ್ಮಾಣದ ಕಾಮಗಾರಿಗೆ 2022ರ ಡಿಸೆಂಬರ್ನಲ್ಲಿ ಅಂದಾಜುಪಟ್ಟಿ ಸಲ್ಲಿಸಲಾಗಿತ್ತು. ಇತ್ತೀಚೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರಕಿದೆ. ಆದರೆ ಈ ನಡುವೆ ಎಸ್ಆರ್ ದರ ಹೆಚ್ಚಳವಾಗಿದೆ. ಹಾಗಾಗಿ ಕೆಲವೊಂದು ಬದಲಿ ಕಾಮಗಾರಿಗಳೊಂದಿಗೆ ಪರಿಷ್ಕೃತ ಅಂದಾಜು ಪಟ್ಟಿ ತಯಾರಿಸುವಂತೆ ಇಲಾಖೆಯಿಂದ ನಿರ್ದೇಶನ ಬಂದಿದ್ದು, ಪಟ್ಟಿ ತಯಾರಿಸಲಾಗುತ್ತಿದೆ ಎಂದು ಬಂದರು ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.
ನಿರಂತರ ಡ್ರೆಜ್ಜಿಂಗ್ ಅಗತ್ಯ
ಮಂಗಳೂರು ಧಕ್ಕೆಯಲ್ಲಿ 3.95 ಕೋಟಿ ರೂ. ವೆಚ್ಚದಲ್ಲಿ ಬರ್ತ್ ಡ್ರೆಜ್ಜಿಂಗ್ ನಡೆಯುತ್ತಿದ್ದು, 27 ಕೋಟಿ ರೂ.ವೆಚ್ಚದಲ್ಲಿ ಬಂದರು ಇಲಾಖೆಯಿಂದ 7 ಮೀಟರ್ ಆಳದಲ್ಲಿ ಚಾನೆಲ್ಗಳ ಡ್ರೆಜ್ಜಿಂಗ್ಗೆ ಟೆಂಡರ್ ಅನುಮತಿಗೆ ಸಂಬಂಧಪಟ್ಟ ಇಲಾಖೆಗೆ ಕಳುಹಿಸಿದ್ದು, ಈ ವಾರ ಅನುಮತಿ ಸಿಗಲಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ಈಗ ನಡೆಯುತ್ತಿರುವ ಡ್ರೆಜ್ಜಿಂಗ್ ವ್ಯವಸ್ಥೆಯಿಂದ ಮತ್ತೆ ಆರು ತಿಂಗಳಲ್ಲಿ ಹೂಳು ತುಂಬಲಿದೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಪ್ರತಿಕ್ರಿಯಿಸಿದರು.
ಕಳೆದ ನಾಲ್ಕು ವರ್ಷಗಳ ಬಳಿಕ ಮತ್ತೆ ಡ್ರೆಜ್ಜಿಂಗ್ ಆಗುತ್ತಿದ್ದು, ಪ್ರತಿ ವರ್ಷ ಡ್ರೆಜ್ಜಿಂಗ್ ನಡೆಸುತ್ತಿದ್ದರೆ ಸಮಸ್ಯೆ ಕಡಿಮೆಯಾ ಗಲಿದೆ. ಈ ಬಗ್ಗೆ ಪರಿಶೀಲನೆ ನಡೆಸುವಂತೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು.
ಪ್ರಸ್ತುತ ಹೊರಗಿನಿಂದಯಂತ್ರವನ್ನು ತಂದು ಡ್ರೆಜ್ಜಿಂಗ್ ಮಾಡಲಾಗುತ್ತಿದ್ದು, ಸರಕಾರ ಮಟ್ಟದಲ್ಲಿ ಡ್ರೆಜ್ಜಿಂಗ್ ಯಂತ್ರ ಖರೀದಿಗೆ ಮಾತುಕತೆ ನಡೆಯುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು. ಮಲ್ಟಿ ಲೆವೆಲ್ ಫಿಶ್ ಬಾಕ್ಸ್ ವ್ಯವಸ್ಥೆ, ರಖಂ ಮತ್ತು ಕಮಿಷನ್ ಮೀನು ಹರಾಜಿಗೆ ಪ್ರತ್ಯೇಕ ಜಾಗ, ಅಗ್ನಿಶಾಮಕ ದಳದ ವ್ಯವಸ್ಥೆ, ಸೀ ಆ್ಯಂಬುಲೆನ್ಸ್ ಅಗತ್ಯತೆಯ ಬಗ್ಗೆ ಮೀನುಗಾರ ಮುಖಂಡರು ಸಚಿವರ ಗಮನ ಸೆಳೆದರು.
ಧಕ್ಕೆಯಲ್ಲಿ ಶುಚಿತ್ವಕ್ಕೆ ಒತ್ತು ನೀಡಲು ಸೂಚನೆ
ಧಕ್ಕೆಯಲ್ಲಿ ಶುಚಿತ್ವದ ಗುತ್ತಿಗೆ ವಹಿಸಿಕೊಂಡವರ ಕಾರ್ಯದ ಬಗ್ಗೆ ತೃಪ್ತಿ ಇಲ್ಲ ಎಂಬ ಮೀನುಗಾರ ಮುಖಂಡರ ಆಕ್ಷೇಪದ ಬಗ್ಗೆ ಸಚಿವರು, ಗುತ್ತಿಗೆದಾರರನ್ನು ಪ್ರಶ್ನಿಸಿದರು.
ಕಳೆದ ಎಂಟು ವರ್ಷಗಳಿಂದ ಧಕ್ಕೆಯಲ್ಲಿ ಗುತ್ತಿಗೆಯಡಿ ಸ್ವಚ್ಚತೆಯನ್ನು ಕಾಪಾಡುತ್ತಿದ್ದು, ಮತ್ತೆ ಎರಡು ವರ್ಷಗಳ ಕಾಲ ಮುಂದುವರಿಸಲು ಅವಕಾಶ ದೊರಕಿದೆ. ಕಾರ್ಯ ಸಮರ್ಪಕವಾಗಿರದಿದ್ದರೆ ಮತ್ತೆ ಅವಧಿ ವಿಸ್ತರಿಸಲಾಗುತ್ತಿತ್ತೇ ಎಂದು ಗುತ್ತಿಗೆದಾರ ಅಶ್ರಫ್ ಅವರು ಮರು ಪ್ರಶ್ನಿಸಿದರು.
ಗುತ್ತಿಗೆಯ ನಿಯಮಗಳಂತೆ ನಿಗದಿತ ರೀತಿಯಲ್ಲಿ ಸ್ವಚ್ಛತಾ ಕಾರ್ಯ ನಡೆಯಬೇಕು. ನೈರ್ಮಲ್ಯ ಹಾಗೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ ಅಚ್ಚುಕಟ್ಟಾಗಿ ಮಾಡಬೇಕು ಎಂದು ಸಚಿವರು ಗುತ್ತಿಗೆದಾರರಿಗೆ ಸೂಚಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಹರೀಶ್ ಕುಮಾರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಪಾಲಿಕೆ ಆಯುಕ್ತ ಆನಂದ್, ಡಿಸಿಪಿ ಸಿದ್ಧಾರ್ಥ್ ಗೋಯಲ್ ಮೊದಲಾದವರು ಉಪಸ್ಥಿತರಿದ್ದರು.
ಶೋರ್ಲೈನ್ ಮ್ಯಾನೇಜ್ಮೆಂಟ್ ಪ್ಲಾನ್
ಕಡಲ್ಕೊರೆತ ಸಮಸ್ಯೆಯನ್ನು ಒಳಗೊಂಡು ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿ ಶೋರ್ಲೈನ್ ಮ್ಯಾನೇಜ್ಮೆಂಟ್ ಪ್ಲಾನ್ ಶೀಘ್ರವೇ ಜಾರಿಗೊಳ್ಳಲಿದೆ. ಇದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಸಭೆಯಲ್ಲಿ ತಿಳಿಸಿದರು.
ನೀರಿನ ಸಮಸ್ಯೆ ಆಗದಂತೆ ಕ್ರಮ ವಹಿಸಲು ನಿರ್ದೇಶನ
ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇರುವುದರಿಂದ ಅಗತ್ಯವಿದ್ದಲ್ಲಿ ಬೋರ್ವೆಲ್, ಟ್ಯಾಕರ್ ಮೂಲಕ ನೀರು ಪೂರೈಕೆಗೆ ಸಿದ್ಧತೆಗಳನ್ನು ನಡೆಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಸಚಿವ ದಿನೇಶ್ ಗುಂಡೂರಾವ್, ಈ ಬಗ್ಗೆ ಡಿಸೆಂಬರ್ನಲ್ಲಿ ಕೆಡಿಪಿ ಸಭೆಯಲ್ಲಿ ವಿಸ್ತೃತವಾಗಿ ಚರ್ಚೆ ನಡೆಸೋಣ ಎಂದರು.







