ಉಳ್ಳಾಲ ದರ್ಗಾ ಉರೂಸ್ಗೆ 3 ಕೋಟಿ ರೂ. ಅನುದಾನ: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್
ಸೈನಿಕರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಕೆಗೆ ಶ್ಲಾಘನೆ

ಉಳ್ಳಾಲ: ರಾಜ್ಯದ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾದ ಉಳ್ಳಾಲ ದರ್ಗಾ ಉರೂಸ್ ಸಮಾರಂಭಕ್ಕೆ ರಾಜ್ಯ ಸರ್ಕಾರವು ವಿಧಾನಸಭಾ ಸ್ಪೀಕರ್ ಅವರ ಬೇಡಿಕೆಯನ್ನು ಪುರಸ್ಕರಿಸಿ ಮೂರು ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಅವರು ಖುತ್ ಬುಝ್ಝಮಾನ್ ಹಝ್ರತ್ ಅಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ತಂಙಳ್ ಅವರ ಹೆಸರಿನಲ್ಲಿ ನಡೆಯುವ ಉರೂಸ್ ಕಾರ್ಯಕ್ರಮ ಪ್ರಯುಕ್ತ ಶನಿವಾರ ಭೇಟಿ ನೀಡಿ ದರ್ಗಾ ಝಿಯಾರತ್ ನಡೆಸಿದ ಬಳಿಕ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದ ಏಕತೆಯ ಸಂಕೇತವಾಗಿ ಉಳ್ಳಾಲ ದರ್ಗಾದಲ್ಲಿ ಶ್ರದ್ಧಾ, ಭಕ್ತಿಯಿಂದ ಲಕ್ಷಾಂತರ ಜನರು ಭಾಗಿಯಾಗುತ್ತಾರೆ. ಇಲ್ಲಿನ ಉರೂಸ್ ನ ಕೊನೆಯ ದಿನ ಭಕ್ತಾದಿಗಳಿಗೆ ನೀಡಲಾಗುವ ಅನ್ನದಾನ ವ್ಯವಸ್ಥೆಗೆ 50 ಕುರಿಗಳನ್ನು ನಾನು ದಾನ ನೀಡುತ್ತೇನೆ ಎಂದು ಹೇಳಿದರು.
ಪಹಲ್ಗಾಮ್ ಘಟನೆ ಖಂಡಿಸಿ ಹಾಗೂ ಸೈನಿಕರು ನಡೆಸುವ ದಾಳಿ ಯಶಸ್ಸು ಕಾಣಲಿ ಎಂದು ಆಗ್ರಹಿಸಿ ಮುಸ್ಲಿಮರು ಮಸೀದಿಗಳಲ್ಲಿ ಶುಕ್ರವಾರ ಪ್ರಾರ್ಥನೆ ಮಾಡಿದ್ದಾರೆ. ಇದಕ್ಕೆ ನಾನು ಅಭಾರಿಯಾಗಿದ್ದು, ಕೋಟಿ, ಕೋಟಿ ನಮಸ್ಕಾರ ಸಲ್ಲಿಸುತ್ತೇನೆ. ಭಾರತೀಯರಾದ ನಮ್ಮ ದೇಶ ರಕ್ಷಣೆ ಆಗಬೇಕಾಗಿದೆ. ರಕ್ಷಣೆ ಮಾಡಬೇಕಾದುದು ನಮ್ಮ ಜವಾಬ್ದಾರಿ ಆಗಿದೆ ಎಂದು ಹೇಳಿದರು.
ಸಂಸ್ಥೆಗೆ ಹಣ ಕೊಡುವುದು ಮುಖ್ಯ ಅಲ್ಲ. ಸಂಸ್ಥೆಯು ಸಾಮಾಜಿಕ, ಶೈಕ್ಷಣಿಕವಾಗಿ ಎಷ್ಟು ಜನರನ್ನು ಪರಿವರ್ತನೆ ಮಾಡುತ್ತದೆ ಎಂಬುದು ಮುಖ್ಯ ಆಗಿರುತ್ತದೆ. ಈ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ದರ್ಗಾ ಸಮಿತಿ ನೀಡಬೇಕು ಎಂದು ಕರೆ ನೀಡಿದರು.
ರಾತ್ರಿ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಹಂಝ ಮಿಸ್ಬಾಹಿ ಓಟ್ಟಪ್ಪದವ್, ಅಬ್ದುಲ್ ಖಾದರ್ ಸಖಾಫಿ ಮುದುಗುಡ ಮುಖ್ಯ ಭಾಷಣ ಮಾಡಿದರು.ಅಬ್ದುಲ್ ಖಾದರ್ ಹಾಜಿ ಬೆಂಗಳೂರು ದುಆ ನೆರವೇರಿಸಿದರು.
ಈಕಾರ್ಯಕ್ರಮ ದಲ್ಲಿ ಸ್ಪೀಕರ್ ಯುಟಿ ಖಾದರ್, ಪುತ್ತೂರು ಶಾಸಕ ಅಶೋಕ್ ರೈ, ಸಹ್ಯಾದ್ರಿ ಕಾಲೇಜು ಅಧ್ಯಕ್ಷ ,ಶಾಸಕ ಮಂಜುನಾಥ ಭಂಡಾರಿ, ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ರಕ್ಷಿತ್ ಶಿವರಾಮ್, ಇನಾಯತ್ ಅಲಿ, ಪದ್ಮರಾಜ್, ತಹಶೀಲ್ದಾರ್ ಪುಟ್ಟರಾಜು , ರಾಜ್ಯ ವಕ್ಫ್ ಮಂಡಳಿ ಮೈಸೂರು ವಿಭಾಗದ ವಕೀಲ ನೂರು ಇಬ್ರಾಹಿಮ್ ಖಾನ್, ಜಿಲ್ಲಾ ಅಧಿಕಾರಿ ಅಬೂಬಕ್ಕರ್, ರಾಜ್ಯ ವಕ್ಫ್ ಸಲಹಾ ಸಮಿತಿ ಸದಸ್ಯ ರಹ್ಮಾನ್ ಕೋಡಿಜಾಲ್, ಹಳೆ ಕೋಟೆ ಮಸೀದಿ ಅಧ್ಯಕ್ಷ ಮುಹಮ್ಮದ್ ಹಾಜಿ ಕುತ್ತಾರ್, ಖತೀಬ್ ಸಿರಾಜುದ್ದೀನ್ ಹಿಮಮಿ, ಸದ್ ರ್ ಮುಅಲ್ಲಿಂ ಇರ್ಫಾನ್ ಮದನಿ, ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕಾರ್ಯದರ್ಶಿ ಮುಸ್ತಫಾ ಮದನಿನಗರ, ಇಸ್ಹಾಕ್, ಕೋಶಾಧಿಕಾರಿ ನಾಝೀಮ್ ಮುಕಚೇರಿ, ಸದಸ್ಯ ಅಬ್ದುಲ್ ಖಾದರ್ ಕೋಡಿ, ಇಮ್ತಿಯಾಝ್, ಅಬೂಬಕ್ಕರ್ ಹೈದರಲಿ ನಗರ, ಅರೆಬಿಕ್ ಕಾಲೇಜು ಪ್ರೊಫೆಸರ್ ಇಬ್ರಾಹಿಂ ಅಹ್ಸನಿ, ಆಝಾದ್ ಇಸ್ಮಾಯಿಲ್ , ಕೇಂದ್ರ ಜುಮ್ಮಾ ಮಸೀದಿ ಖತೀಬ್ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲಿ ಮತ್ತಿತರರು ಉಪಸ್ಥಿತರಿದ್ದರು.
ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.