ನಾವೂರು: 40 ವರ್ಷಗಳ ಹಿಂದಿನ ಸಹಪಾಠಿಗಳ ಪುನರ್ಮಿಲನ

ಮಂಗಳೂರು, ಆ.11: ಬೆಳ್ತಂಗಡಿ ತಾಲೂಕಿನ ನಾವೂರು ಹಿ.ಪ್ರಾ. ಶಾಲೆಯ 1985ನೇ ವರ್ಷದ ಏಳನೇ ತರಗತಿಯ ವಿದ್ಯಾರ್ಥಿಗಳ ʼಮರು ಸಂಗಮ-ರಿಯೂನಿಯನ್-25ʼ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ನಗರದ ಪಂಪ್ವೆಲ್ನಲ್ಲಿರುವ ಕುಡ್ಲ ಹಿಲ್ಸ್ನ ದಾಹ್ ಮಾನ್ಶನ್ ಸಭಾಂಗಣದಲ್ಲಿ 40 ವರ್ಷಗಳ ಬಳಿಕದ ಈ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಯಿತು. ದೇಶ ವಿದೇಶದ ಬೇರೆ ಬೇರೆ ಕಡೆ ಇದ್ದ ಸಹಪಾಠಿಗಳು ಭಾಗವಹಿಸಿ ಬಾಲ್ಯದ ಶಾಲಾ ದಿನಗಳ ರಸ ನಿಮಿಷಗಳನ್ನು ಮೆಲುಕು ಹಾಕಿದರಲ್ಲದೆ ಅಧ್ಯಾಪಕರನ್ನು ಗೌರವದಿಂದ ಸ್ಮರಿಸಿ ದರು. ಹಲವು ವರ್ಷಗಳ ನಂತರ ಬಾಲ್ಯದ ಸ್ನೇಹಿತರು ಪರಸ್ಪರ ಭೇಟಿಯಾಗಿ ಭಾವುಕಗೊಳ್ಳುವ ರೋಮಾಂಚನ ಕ್ಷಣಕ್ಕೆ ಈ ಸಂಗಮ ಸಾಕ್ಷಿಯಾಯಿತು. ದುಬೈಯಲ್ಲಿ ಇಂಜಿನಿಯರ್ ಆಗಿರುವ ಸಹಪಾಠಿ ಅಬ್ದುಲ್ ರಝಾಕ್ ಈ ಸಂಗಮವನ್ನು ಆಯೋಜಿಸಿದ್ದರು. ಅದರಂತೆ ಊರು ಹಾಗೂ ಬೆಂಗಳೂರು, ಗೋವಾ, ದುಬೈ ಹಾಗೂ ಕುವೈತ್ ನಲ್ಲಿ ನೆಲೆಸಿರುವ ಗೆಳೆಯರೂ ಬಿಡುವು ಮಾಡಿಕೊಂಡು ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಪ್ರೇರಕ ತರಬೇತುದಾರ ರಫೀಕ್ ಮಾಸ್ಟರ್ ಸ್ಫೂರ್ತಿದಾಯಕ ಮಾತುಗಳನ್ನಾಡಿದರು. ಸಹಪಾಠಿ ಮಿತ್ರರು ಹಾಡು ಹಾಗೂ ಮಾತಿನ ಮೂಲಕ ನೆರೆದವರನ್ನು ರಂಜಿಸಿದರು. ಕೆಲವು ಸಹಪಾಠಿಗಳು ಕುಟುಂಬ ಸಮೇತ ಭಾಗವಹಿಸಿದ್ದರು.
ಸಿಒಡಿಪಿ ಮಂಗಳೂರು ಫಾ.ವಿನ್ಸೆಂಟ್, ಪೊಲೀಸ್ ಅಧಿಕಾರಿ ವರ್ಗೀಸ್ ಪಿ.,ಉದ್ಯಮಿ, ಪೊಲಿಕಾರ್ಪ್ ಡಿಸೋಜ, ಮುಹಮ್ಮದ್ ನೂರುದ್ದೀನ್ ಕುವೈಟ್, ವಿಜಯ ಲೋಬೋ, ವಿಶ್ವನಾಥ, ಡೀಕಯ್ಯ, ರಾಜೇಂದ್ರ, ಕೇಶವ, ಉಮಾವತಿ, ದೀಪಿಕ, ಜೆಸಿಂತ, ವಿನ್ನಿ, ಸೇವರಿನ್, ಜೋಹರಾ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಅಬ್ದುಲ್ ರಝಾಕ್ ನಾವೂರು ಸ್ವಾಗತಿಸಿದರು. ಕಾರ್ಯಕ್ರಮದ ಆಯೋಜನೆಗಾಗಿ ಇಂಜಿನಿಯರ್ ಅಬ್ದುಲ್ ರಝಾಕ್ ಹಾಗೂ ಸಹಪಾಠಿಗಳ ವಾಟ್ಸಾಪ್ ಗ್ರೂಪ್ ರಚನೆ ಮತ್ತು ಸಂಯೋಜನೆಗಾಗಿ ಜೊಹರಾ ಅವರನ್ನು ಸನ್ಮಾನಿಸಲಾಯಿತು. ಹಮೀದ್ ಎನ್.ಎಸ್. ಕಾರ್ಯಕ್ರಮ ನಿರೂಪಿಸಿದರು. ಫಾ. ವಿನ್ಸೆಂಟ್ ವಂದಿಸಿದರು.







