‘ಎಐ-ಚಾಲಿತ ಸುರಕ್ಷಿತ ನಿರ್ಣಾಯಕ ಮೂಲಸೌಕರ್ಯ’: ಎನ್ಐಟಿಕೆಯಲ್ಲಿ 5 ದಿನಗಳ ಕಾರ್ಯಾಗಾರಕ್ಕೆ ಚಾಲನೆ

ಮಂಗಳೂರು, ಜು.7: ಕರ್ನಾಟಕದ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಸೈಬರ್ ಸೆಕ್ಯುರಿಟಿ ರಿಸರ್ಚ್ ಲ್ಯಾಬ್ (ಸಿಎಸ್ಆರ್ಎಲ್) ವತಿಯಿಂದ ಎನ್ಐಟಿಕೆ ಕ್ಯಾಂಪಸ್ನ ಡಿಜಿಟಲ್ ಲರ್ನಿಂಗ್ ಸೆಂಟರ್ನಲ್ಲಿ ಎಐ-ಚಾಲಿತ ಸುರಕ್ಷಿತ ನಿರ್ಣಾಯಕ ಮೂಲಸೌಕರ್ಯ ಕುರಿತು ಐದು ದಿನಗಳ ಕಾರ್ಯಾಗಾರ ಸೋಮವಾರ ಉದ್ಘಾಟನೆಗೊಂಡಿತು. ಸಿಎಸ್ಆರ್ಎಲ್ ಮತ್ತು ಸಿಎಸ್ಇ ವಿಭಾಗದ ಐಎಸ್ಇಎ ಲ್ಯಾಬ್ ಜಂಟಿಯಾಗಿ ಆಯೋಜಿಸಿರುವ ಈ ಕಾರ್ಯಾಗಾರವು ಜು.11ರವರೆಗೆ ನಡೆಯಲಿದೆ.
ಉದ್ಘಾಟನಾ ಸಮಾರಂಭದಲ್ಲಿ ಅಮೆರಿಕದ ಟೆನ್ನೆಸ್ಸೀ ಟೆಕ್ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ವಿಭಾಗದ ಅಧ್ಯಾಪಕ ಸದಸ್ಯ ಡಾ. ಮಾನಕ್ ಗುಪ್ತಾ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮುಂದಿನ ಪೀಳಿಗೆಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರನ್ನು ತಾಂತ್ರಿಕ ಪ್ರಗತಿಗೆ ಸಿದ್ಧಪಡಿಸುವ ಮಹತ್ವದ ಬಗ್ಗೆ ಒತ್ತು ನೀಡಿದ ಅವರು, ನಾವು ಸ್ಮಾರ್ಟ್ ಸಿಟಿ ಮತ್ತು ಸಮುದಾಯಗಳತ್ತ ಮುನ್ನಡೆಯು ತ್ತಿದ್ದಂತೆ, ಪರಮಾಣು ಶಕ್ತಿ, ಆಸ್ಪತ್ರೆಗಳು, ಸಾರಿಗೆ ಮತ್ತು ಪರಸ್ಪರ ಸಂಪರ್ಕ ಹೊಂದಿದ ಪರಿಸರ ವ್ಯವಸ್ಥೆಗಳಂತಹ ನಿರ್ಣಾಯಕ ಮೂಲಸೌಕರ್ಯಗಳು ಸುರಕ್ಷಿತವಾಗಿರಬೇಕು ಎಂದು ಹೇಳಿದರು.
ಕಾರ್ಯಾಗಾರವು ಉದ್ಯಮ ಮತ್ತು ಶೈಕ್ಷಣಿಕ ಮಿಶ್ರಣವು ಸಂಶೋಧನೆ, ನವೀನ ಶೈಕ್ಷಣಿಕ ವೇದಿಕೆಗಳು ಮತ್ತು ಪ್ರಾಯೋಗಿಕ ಚಟುವಟಿಕೆಗಳನ್ನು ಬೆಳೆಸುತ್ತದೆ. ಇದು ಭವಿಷ್ಯದ ಕಾರ್ಯಪಡೆಯ ಮೇಲೆ ಗಮ ನಾರ್ಹ ಪರಿಣಾಮ ಬೀರುತ್ತದೆ. ದೃಢವಾದ, ಪರಸ್ಪರ ಸಂಪರ್ಕ ಹೊಂದಿದ ವ್ಯವಸ್ಥೆಗಳನ್ನು ಖಚಿತಪಡಿಸಿ ಕೊಳ್ಳಲು ವಲಯಗಳಾದ್ಯಂತ ಸುರಕ್ಷಿತ ಎಐ ಮತ್ತು ಸೈಬರ್ ಭದ್ರತಾ ಏಕೀಕರಣದ ಅಗತ್ಯತೆಯನ್ನು ಅವರು ಪ್ರತಿಪಾದಿಸಿದರು.
ಎನ್ಐಟಿಕೆ ಸುರತ್ಕಲ್ನ ಡೀನ್ (ಸಂಶೋಧನೆ ಮತ್ತು ಸಲಹಾ) ಪ್ರೊ. ಉದಯ್ ಭಟ್ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಭಾರತದ ವಿವಿಧೆಡೆಯ 52 ಮಂದಿ ತಂತ್ರಜ್ಞರು ಕಾರ್ಯಾಗಾರದಲ್ಲಿ ಭಾಗವಹಿಸುತ್ತಿದ್ದಾರೆ.
ಎನ್ಐಟಿಕೆ ಸುರತ್ಕಲ್ನ ಸಿಇಎಸ್ ವ ವಿಭಾಗದ ಪ್ರೊ. ಆಲ್ವಿನ್ ಆರ್. ಪಾಯ್ಸ್, ಪ್ರೊ. ಪಿ. ಶಾಂತಿ ತಿಲಗಂ, ಡಾ. ಮಹೇಂದ್ರ ಪ್ರತಾಪ್ ಸಿಂಗ್ ಮತ್ತು ಡಾ. ಶ್ಯಾಮ್ ಲಾಲ್ ಅವರು ಸಂಯೋಜಿಸಿದ ಕಾರ್ಯಾಗಾರದಲ್ಲಿ 18 ತಾಂತ್ರಿಕ ಅವಧಿಗಳು, 13 ತಜ್ಞರ ಭಾಷಣಗಳು ಮತ್ತು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳ ಪ್ರತಿಷ್ಠಿತ ಶಿಕ್ಷಣ ತಜ್ಞರು ಮತ್ತು ಉದ್ಯಮ ತಜ್ಞರು ನೀಡಿದ 5 ಪ್ರಾಯೋಗಿಕ ತರಬೇತಿ ಅವಧಿಗಳು ಸೇರಿವೆ.
ಈ ಕಾರ್ಯಾಗಾರಕ್ಕೆ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಐಎಸ್ಇಎ ಯೋಜನೆ (ಹಂತ ಮೂರು); ಸಿಎಸ್ಐ ಹಬ್ - ಐಐಟಿ ಕಾನ್ಪುರ; ಮತ್ತು ಒಎನ್ಜಿಸಿ- ಎಂಆರ್ಪಿಎಲ್ ಬೆಂಬಲ ನೀಡಿವೆ.







