ವಿಶ್ವ ಕೊಂಕಣಿ ಕೇಂದ್ರದಿಂದ 5 ಪ್ರಶಸ್ತಿಗಳಿಗೆ ಅರ್ಜಿ ಅಹ್ವಾನ

ಮಂಗಳೂರು, ಆ.18: ಪ್ರಸಕ್ತ (2025ನೇ) ಸಾಲಿನ ಬಸ್ತಿ ವಾಮನ್ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ್ 1, 2 ಹಾಗೂ ವಿಮಲಾ ವಿ. ಪೈ ವಿಶ್ವ ಕೊಂಕಣಿ, ಜೀವನ ಸಿದ್ದಿ ಸಮ್ಮಾನ್, ಸಾಹಿತ್ಯ ಕೃತಿ, ಕವಿತಾ ಕೃತಿ ಹೀಗೆ 5 ಪ್ರಶಸ್ತಿಗಳಿಗೆ ಅರ್ಜಿ ಅಹ್ವಾನಿಸಿದೆ.
*ಬಸ್ತಿ ವಾಮನ್ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ್ಗೆ ಮೂಲತ ಕೊಂಕಣಿ ಭಾಷಿಕರಾಗಿದ್ದು ಶಿಕ್ಷಣ, ಆಡಳಿತ, ಕೊಂಕಣಿಯೇತರ ಸಾಹಿತ್ಯ, ಪ್ರದರ್ಶನ ಕಲೆ, ಆರೊಗ್ಯ-ವೈದ್ಯಕೀಯ, ವಿಜ್ಞಾನ-ತಂತ್ರಜ್ಞಾನ, ಪತ್ರಿಕೋದ್ಯಮ, ಲೆಕ್ಕಪರಿಶೋಧನೆ, ಬ್ಯಾಂಕಿಂಗ್, ವಾಣಿಜ್ಯೋದ್ಯಮ, ರಕ್ಷಣಾ ಪಡೆ, ಕ್ರೀಡೆ, ಹಿರಿಯರ-ಮಕ್ಕಳ-ಮಹಿಳೆಯರ-ನೊಂದವರ ಸೇವೆ, ಜನ-ಸಮಾಜ-ದೇಶಸೇವೆ ಇತ್ಯಾದಿ ಕ್ಷೇತ್ರದಲ್ಲಿ ಉನ್ನತ ಪ್ರಮಾಣದ ಪ್ರಾಮಾಣಿಕ ಸೇವೆ ನೀಡಿರುವ ವ್ಯಕ್ತಿ ಅಥವಾ ಸಂಘ ಸಂಸ್ಥೆ-ಸಂಘಟನೆಗಳೂ ಸೇರಿ ತಲಾ ಒರ್ವ ಪುರುಷ ಹಾಗೂ ಓರ್ವ ಮಹಿಳೆಗೆ ಪ್ರತ್ಯೇಕವಾಗಿ ನೀಡಲಾಗುವುದು.
*ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ದಿ ಸಮ್ಮಾನ್ ಪ್ರಶಸ್ತಿಗೆ ಕೊಂಕಣಿ ಭಾಷೆ, ಶಿಕ್ಷಣ, ಕಲೆ, ಸಂಸ್ಕೃತಿಯ ಬೆಳವಣಿಗಾಗಿ ಜೀವನವನ್ನೇ ಮುಡಿಪಾಗಿಟ್ಟ ಓರ್ವ ಕೊಂಕಣಿ ಹಿರಿಯ ನಾಗರಿಕರಿಗೆ ನೀಡಲಾಗುವುದು.
*ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಕೃತಿ ಮತ್ತು ಕವಿತಾ ಕೃತಿ ಪುರಸ್ಕಾರಕ್ಕೆ 2022ರ ಜನವರಿ 1ರಿಂದ 2024ರ ಡಿ.31ರೊಳಗೆ ಪ್ರಕಟಗೊಂಡ ಉತ್ತಮ ಸಾಹಿತ್ಯ ಕೃತಿ (ಗದ್ಯ) ಮತ್ತು ಕವಿತಾ ಕೃತಿಗೆ ತಲಾ ಒಂದು ಪ್ರಶಸ್ತಿ ನೀಡಲಾಗುವುದು. ಕೃತಿಗಳು ಅನುವಾದಿತ ಅಥವಾ ಶಿಕ್ಷಣ ಅಧ್ಯಯನಕ್ಕೆ ಸಂಬಂಧಿಸಿದ್ದಾಗಿರಬಾರದು.
ಈ ಐದು ಪ್ರಶಸ್ತಿಯು ತಲಾ ಒಂದು ಲಕ್ಷ ರೂ.ನಗದು ಹಾಗೂ ಸನ್ಮಾನ ಪತ್ರ ಫಲಕಗಳನ್ನು ಒಳಗೊಂಡಿದ್ದು, ವಿಶ್ವ ಕೊಂಕಣಿ ಕೇಂದ್ರದ ಮಹಾಪೋಷಕ ಟಿ.ವಿ. ಮೋಹನದಾಸ್ ಪೈಯ ತಾಯಿ ವಿಮಲಾ ವಿ. ಪೈಯ ಸ್ಮರಣಾರ್ಥ ಕೊಡಲಾಗುತ್ತಿದೆ.
ಆಸಕ್ತ ವ್ಯಕ್ತಿಗಳು ಅಥವಾ ಸಂಘ ಸಂಸ್ಥೆಗಳು ವಿಶ್ವ ಕೊಂಕಣಿ ಕೇಂದ್ರದ ವೆಬ್ ಸೈಟ್ www.vishwakonkani.org ನಿಂದ ಮಾಹಿತಿ ಪಡೆದು, ಸೆಪ್ಟಂಬರ್ 30ರೊಳಗೆ ಆನ್ಲೈನ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬೇಕು. ಈ ಬಗ್ಗೆ ಸಲ್ಲಿಸುವ ಭಾವಚಿತ್ರ, ಪ್ರಶಂಸಾ ಪತ್ರ ಹಾಗೂ ಸಾಹಿತ್ಯ ಕೃತಿ ಮತ್ತು ಕವಿತಾ ಕೃತಿಗಳು ಇತ್ಯಾದಿ ಎಲ್ಲಾ ದಾಖಲೆಗಳನ್ನು ನೇರವಾಗಿ ಅಂಚೆ ಮೂಲಕ ಅಧ್ಯಕ್ಷರು, ವಿಶ್ವ ಕೊಂಕಣಿ ಕೇಂದ್ರ, ಶಕ್ತಿನಗರ, ಮಂಗಳೂರು-575016ಕ್ಕೆ ಕಳುಹಿಸಿಕೊಡಬಹುದು ಎಂದು ಅಧ್ಯಕ್ಷ ಸಿ.ಎ. ನಂದಗೋಪಾಲ ಶೆಣೈ ತಿಳಿಸಿದ್ದಾರೆ.







