ಪಂಚ ಗ್ಯಾರಂಟಿ ಯೋಜನೆ: ಫೆ.6ರಿಂದ ನೋಂದಾವಣೆ, ತಿರಸ್ಕೃತ ಅರ್ಜಿಗಳ ವಿಲೇವಾರಿಗೆ ಗ್ರಾಮ ಮಟ್ಟದಲ್ಲಿ ಶಿಬಿರ

ಮಂಗಳೂರು, ಫೆ. 5: ಮಂಗಳೂರು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ವತಿಯಿಂದ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳ ನೋಂದಾವಣೆಗೆ ಬಾಕಿ ಇರುವ ಹಾಗೂ ತಿರಸ್ಕೃತ ಅರ್ಜಿಗಳ ವಿಲೇವಾರಿಗೆ ಫೆ.6 ರಿಂದ 18ರ ವರೆಗೆ ಮಂಗಳೂರು ತಾಲೂಕಿನಲ್ಲಿ ಗ್ರಾಮ ಮಟ್ಟದಲ್ಲಿ ಶಿಬಿರ ನಡೆಯಲಿದೆ ಎಂದು ಮಂಗಳೂರು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ ತಿಳಿಸಿದ್ದಾರೆ.
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಫೆ. 6ರಂದು ನೀರುಮಾರ್ಗದ ಸೇವಾ ಸಹಕಾರಿ ಬ್ಯಾಂಕಿನ ಅಮೃತ ಸೌಧದಲ್ಲಿ ಬೆಳಗ್ಗೆ 10:30ಕ್ಕೆ ಉದ್ಘಾಟನೆ ನಡೆಯಲಿದೆ. ಬಳಿಕ ಅರ್ಜಿಗಳ ಕುಂದುಕೊರತೆ ಸ್ವೀಕರಿಸಲಾಗುವುದು. ಅಂದೇಉಳಾಯಿಬೆಟ್ಟು, ಮಲ್ಲೂರು ಗ್ರಾಮ ಪಂಚಾಯತ್ಗಳ ಶಿಬಿರವೂ ಅಲ್ಲೇ ನಡೆಯಲಿದೆ ಎಂದರು.
ಫೆ.10ರಂದು ಗಂಜಿಮಠ ಗ್ರಾ.ಪಂ ಸಭಾಭವನದಲ್ಲಿ ಗಂಜಿಮಠ, ಬಡಗ ಎಡಪದವು,ಮುಚ್ಚೂರು ಗ್ರಾ.ಪಂ. ವ್ಯಾಪ್ತಿಗೆ, ಫೆ.11ರಂದು ಅಡ್ಯಾರು ಗ್ರಾ.ಪಂ. ಸಭಾಭವನದಲ್ಲಿ ಅಡ್ಯಾರು ಗ್ರಾ.ಪಂ, ಫೆ.12ರಂದು ಪಡುಪೆರಾರ, ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸಂಬಂಧಿಸಿ ಕಂದಾವರ ಗ್ರಾ.ಪಂ. ಸಭಾಭವನ, ಫೆ.13ರಂದು ಗುರುಪುರ, ಮೂಡುಶೆಡ್ಡೆ ಗ್ರಾ.ಪಂ.ಗೆ ಗುರುಪುರ ಗ್ರಾ.ಪಂ. ಸಭಾಭವನದಲ್ಲಿ, ಫೆ.17ರಂದು ಜೋಕಟ್ಟೆ, ಚೆಳ್ಯಾರು, ಬಾಳ ಗ್ರಾ.ಪಂ.ಗೆ ಜೋಕಟ್ಟೆ ಗ್ರಾ.ಪಂ.ನಲ್ಲಿ, ಫೆ.18ರಂದು ಸೂರಿಂಜೆ, ಎಕ್ಕಾರು, ಪೆರ್ಮುದೆ ಗ್ರಾ.ಪಂ.ಗೆ ಸೂರಿಂಜೆ ಗ್ರಾ.ಪಂ.ನಲ್ಲಿ, ಫೆ.19ರಂದು ಎಡಪದವು, ಕುಪ್ಪೆಪದವು, ಮುತ್ತೂರು ಗ್ರಾ.ಪಂ.ಗೆ ಕುಪ್ಪೆಪದವು ಗ್ರಾ.ಪಂ. ಸಭಾಭವನದಲ್ಲಿ ಶಿಬಿರ ನಡೆಯಲಿದೆ. ಪ್ರತಿ ದಿನ ಬೆಳಗ್ಗೆ 10:30ರಿಂದ ಶಿಬಿರ ಆರಂಭವಾಗಲಿದೆ ಎಂದರು.
ಗೃಹಲಕ್ಷ್ಮೀ ಯೋಜನೆಯಲ್ಲಿ ಶೇ.84 ಪ್ರಗತಿ
ಮಂಗಳೂರು ತಾಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆಯಲ್ಲಿ 99,104 ಗುರಿ ಹೊಂದಿದ್ದು,83,395 ಮಂದಿ ನೋಂದಣಿ ಮಾಡಿದ್ದು ಶೇ.84 ಪ್ರಗತಿ ಸಾಧಿಸಲಾಗಿದೆ. ಗೃಹ ಜ್ಯೋತಿ ಯೋಜನೆಯಲ್ಲಿ 2,35,485 ಗುರಿಯಲ್ಲಿ 1,77,406 ಮಂದಿ ನೋಂದಾಯಿಸಿದ್ದಾರೆ. ಇದರಲ್ಲಿ 1,80,925 ಮಂದಿ ಫಲಾನುಭವಿಗಳಿದ್ದು ಶೇ.98 ಪ್ರಗತಿ ಸಾಧಿಸಲಾಗಿದೆ. ಅನ್ನಭಾಗ್ಯದಲ್ಲಿ 38,95,684 ಗುರಿಯಲ್ಲಿ 35,28,180 ಮಂದಿ ನೋಂದಾಯಿಸಿದ್ದಾರೆ. 3,19,40,620 ರೂ. ಮೊತ್ತ ಅವರ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದರು.
*ಯುವನಿಧಿ 1,143 ಮಂದಿಗೆ ಆರ್ಥಿಕ ನೆರವು: ಯುವನಿಧಿ ಯೋಜನೆಯಲ್ಲಿ 1,484 ಮಂದಿ ಅರ್ಜಿದಾರರಲ್ಲಿ 1,143 ಮಂದಿಗೆ ಆರ್ಥಿಕ ನೆರವು ದೊರೆತಿದೆ. ಶಕ್ತಿ ಯೋಜನೆಯಲ್ಲಿ ಎಲ್ಲ ಕಡೆಗಳಲ್ಲೂ ಉತ್ತಮ ಸ್ಪಂದನೆ ದೊರೆತಿದೆ .ಯುವನಿಧಿ ಯೋಜನೆಗೆ ಅರ್ಹ ನಿರುದ್ಯೋಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಅಧ್ಯಕ್ಷ ಸುರೇಂದ್ರ ಕಂಬಳಿ ತಿಳಿಸಿದರು.
ಸಮಿತಿ ಸದಸ್ಯರಾದ ಆಲಸ್ಟನ್ ಡಿಕುನ್ನಾ, ಶ್ರೀಧರ ಪಂಜ, ನವಾಜ್, ವಿದ್ಯಾ, ಮುಸ್ತಫಾ, ಶಾಂತಲಾ ಗಟ್ಟಿ, ಆಶಾ, ಕಾರ್ಯದರ್ಶಿ ಮಹೇಶ್ ಹೊಳ್ಳ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.