ಯೆನೆಪೋಯ ಆಸ್ಪತ್ರೆಯಲ್ಲಿ 7ರ ಬಾಲೆಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಕೊಣಾಜೆ: ದೇರಳಕಟ್ಟೆಯ ಝುಲೇಖ ಯೇನೆಪೋಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಂಡವು ಅರಿವಳಿಕೆ ತಜ್ಞರು ಹಾಗೂ ಮಕ್ಕಳ ಚಿಕಿತ್ಸಾ ವಿಭಾಗದ ತಜ್ಞರ ಸಹಕಾರದೊಂದಿಗೆ ಇತ್ತೀಚೆಗೆ ಗಂಟಲಿನಲ್ಲಿ ಥೈರಾಯಿಡ್ ಕ್ಯಾನ್ಸರ್ ಗೆ ಗುರಿಯಾಗಿದ್ದ 7ರ ಹರೆಯದ ಬಾಲೆಗೆ ಕ್ಲಿಷ್ಟಕರವಾದ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದು, ಬಾಲಕಿ ಸಂಪೂರ್ಣವಾಗಿ ಗುಣಮುಖಳಾಗಿದ್ದಾಳೆ ಎಂದು ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಹಬೀಬ್ ರೆಹಮಾನ್ ಹೇಳಿದರು.
ಅವರು ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ಮಗುವಿನ ಕತ್ತಿನ ಎರಡೂ ಬದಿಗಳಿಗೆ ಮತ್ತು ಕತ್ತಿನ ಮಧ್ಯ ಭಾಗಕ್ಕೆ ಕ್ಯಾನ್ಸರ್ ಹರಡಿದ್ದರಿಂದ ಅತ್ಯಂತ ಹೆಚ್ಚಿನ ಅಪಾಯ ಮತ್ತು ಸಂಕೀರ್ಣವಾದ ಶಸ್ತ್ರಚಿಕಿತ್ಸೆಯಾಗಿದ್ದು ಸುಮಾರು 9 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ತಜ್ಞ ವೈದ್ಯರ ಸಲಹೆಯಂತೆ ಬಾಲೆಯ ಪೋಷಕರು ದೇರಳಕಟ್ಟೆಯ ಯೆನೆಪೋಯ ಝುಲೇಖ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತಪಾಸಾಣೆಗೆ ಬಂದಿದ್ದರು. ಕ್ಯಾನ್ಸರ್ ಎರಡನೇ ಹಂತಕ್ಕೆ ಬಂದಿರುವುದನ್ನು ಪತ್ತೆ ಹಚ್ಚಿದ ತಂಡ ಕಾರ್ಯರೂಪಕ್ಕೆ ಬಂದಿತು. ಡಾ. ಅನಿತಾ ಪ್ರಭು ಮತ್ತು ಡಾ. ರಾಮನಾಥ್ ಮಹಾಲೆ ಅವರು ಮಗುವನ್ನು ನೋಡಿಕೊಳ್ಳುತ್ತಿದ್ದರು.
ಡಾ. ಜಲಾಲುದ್ದೀನ್ ಅಕ್ಬರ್ ನೇತೃತ್ವದಲ್ಲಿ ಡಾ. ಎಚ್. ಟಿ. ಅಮರ್ ರಾವ್ ಮತ್ತು ಡಾ. ನೂರ್ ಮೊಹಮ್ಮದ್, ಅರಿವಳಿಕೆ ತಜ್ಞರಾದ ಡಾ. ಪ್ರೀತಿ ಜೊತೆಗೂಡಿ ಥೈರಾಯ್ಡ್ ಗ್ರಂಥಿ ಮತ್ತು ಕತ್ತಿನ ಮಧ್ಯಭಾಗದಿಂದ ರೋಗ ಪೀಡಿತ ದುಗ್ಧರಸ ಗ್ರಂಥಿಗಳನ್ನು ತೆಗೆದುಹಾಕುವ ಮೂಲಕ ಪ್ರಮುಖ ಶಸ್ತ್ರ ಚಿಕಿತ್ಸೆಯನ್ನು ನಡೆಸಿ ಯಶಸ್ವಿಯಾದರು.
ಕ್ಯಾನ್ಸರ್ ಚಿಕಿತ್ಸಾ ವಿಭಾಗ ಮುಖ್ಯಸ್ಥರಾದ ಡಾ. ಜಲಾಲುದ್ದಿನ್ ಅಕ್ಬರ್ ಮಾತನಾಡಿ, ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಪ್ಯಾರಾಥೈರಾಯ್ಡ್ ಗ್ರಂಥಿಗಳನ್ನು ಗುರುತಿಸಲು ಮತ್ತು ಸಂರಕ್ಷಿಸಲು ಇಂಡೋಸೈನೈನ್ ಗ್ರೀನ್ ಎಂಬ ಹೊಸ ತಂತ್ರವನ್ನು ತಂಡ ಬಳಸಲಾಗಿದ್ದು ಶಸ್ತ್ರಚಿಕಿತ್ಸೆಯನ್ನು ಸುರಕ್ಷಿತ ಮತ್ತು ರೋಗಿಯ ದೀರ್ಘಕಾಲೀನ ಆರೋಗ್ಯವನ್ನು ಖಚಿತಪಡಿಸುತ್ತದೆ. ಒಂದು ವಾರದ ಹಿಂದೆ ನಡೆದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಮಗು ಈಗ ಚೇತರಿಸಿಕೊಳ್ಳುತ್ತಿದೆ ಎಂದರು.
ಸಹಾಯಕ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಮಾತನಾಡಿ, ಬಾಲೆಯ ಶಸ್ತ್ರಚಿಕಿತ್ಸೆ ಅಯುಷ್ಮಾನ್ ಮೂಲಕ ಸರಕಾರಿ ಉಚಿತ ಯೋಜನೆ ಮೂಲಕ ಸಂಪೂರ್ಣ ಉಚಿತವಾಗಿ ಮಾಡಿದ್ದೇವೆ. ಹಾಗೆಯೇ ಸುರಕ್ಷಾ, ಯಶಸ್ವಿನಿ, ಅಯುಷ್ಮಾನ್, ಬಿಪಿಎಲ್ ಮೊದಲಾದ ಎಲ್ಲ ಸರಕಾರಿ ಯೋಜನೆಯನ್ನು ಉಚಿತ ವಾಗಿ ಹಾಗೂ ಎಪಿಎಲ್ ಗೆ 40ಶೇ. ರಿಯಾಯಿತಿಯಲ್ಲಿ ಒಂದೇ ಸೂರಿನಡಿಯಲ್ಲಿ ನೀಡುವ ವ್ಯವಸ್ಥೆ ಇರೋದ್ರಿಂದ ಜುಲೇಖ ಆಸ್ಪತ್ರೆ ಆರಂಭವಾದ ಬಳಿಕ ಸಾವಿರಕ್ಕೂ ಅಧಿಕ ಅಂದ್ರೆ 95% ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದೇವೆ ಎಂದರು.
ಝುಲೇಖ ಯೆನೆಪೋಯ ಆಂಕೊಲಾಜಿ ಸಂಸ್ಥೆಯಲ್ಲಿ ವೈದ್ಯಕೀಯ ತಂಡವು ಒದಗಿಸಿದ ಆರೈಕೆಗಾಗಿ ರೋಗಿಯ ಕುಟುಂಬವು ಕೃತಜ್ಞತೆಯನ್ನು ಸಲ್ಲಿಸಿತು.
ಈ ಸಂದರ್ಭದಲ್ಲಿ ವೈದ್ಯರಾದ ಡಾ. ಎಚ್. ಟಿ. ಅಮರ್ ರಾವ್, ಡಾ. ನೂರ್ ಮೊಹಮ್ಮದ್, ಡಾ. ಪ್ರೀತಿ, ಡಾ. ಮೊಹಮ್ಮದ್ ಸಾಬೀತ್ , ವೈದ್ಯರಾದ ಡಾ. ಭುವನೀ ಪೌಲ್, ಡಾ. ಅನಿತಾ ಪ್ರಭು ಮತ್ತು ಡಾ. ರಾಮನಾಥ್ ಮಹಲೆ, ಡಾ. ಸತ್ಯವತಿ, ಮಾಧ್ಯಮ ಸಂಯೋಜಕ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
"ಹಲವು ವರ್ಷದ ಹಿಂದೆ ನಾನು ಎಸ್ ಎಸ್ ಎಲ್ ಸಿಯಲ್ಲಿ ಇರುವಾಗ ಇಂತಹ ಕ್ಲಿಷ್ಟಕರವಾದ ಸಮಸ್ಯೆ ಎದುರಾಗಿತ್ತು. ಆ ಅವಧಿಯಲ್ಲಿ ವೈದ್ಡಾಯರಾದ ಡಾ. ಜಲಾಲುದ್ದಿನ್ ನನ್ನ ಶಸ್ತ್ರ ಚಿಕಿತ್ಸೆ ಮಾಡಿದ್ದರು. ಇಂದಿಗೂ ಆರೋಗ್ಯ ಚೆನ್ನಾಗಿದೆ. ರೋಗಿ ಭಯ ಆತಂಕಕ್ಕೆ ಒಳಗಾಗದೆ ಸವಾಲು ಎದುರಿಸಬೇಕು. ಯಾರೂ ಭಯ ಪಡೋದು ಬೇಡ, ಕ್ಯಾನ್ಸರ್ ಗುಣಪಡಿಸಲು ಸಾಧ್ಯ ಇರುವ ರೋಗ".
-ಜೇಸಿಲ್ ಡಿಸೋಜ, ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ ರಾಜ್ಯ ಕಾರ್ಯದರ್ಶಿ