ಜು.10: ದ.ಕ.ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್
ಮಂಗಳೂರು, ಜು.9: ದ.ಕ.ಜಿಲ್ಲೆಯಲ್ಲಿ ಮಂಗಳವಾರ ಮಧ್ಯಾಹ್ನ ಮಧ್ಯಾಹ್ನದವರೆಗೆ ಮಳೆ ಬಿಡುವು ಪಡೆದುಕೊಂಡಿದ್ದರೆ ಸಂಜೆಯ ಬಳಿಕ ಬಿರುಸು ಪಡೆದುಗೊಂಡಿತು. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗಿತ್ತು. ಮಂಗಳವಾರ ಮಧ್ಯಾಹ್ನವರೆಗೆ ಬಿಸಿಲು ಸಹಿತ ಮೋಡ ಕವಿದ ವಾತಾವರಣ ಮತ್ತು ಅಲ್ಲಲ್ಲಿ ತುಂತುರು ಹನಿಯಾಗಿತ್ತು.
ಹವಾಮಾನ ಇಲಾಖೆಯು ಜು.10ರಂದು ಕರಾವಳಿಯಲ್ಲಿ ಅರೆಂಜ್ ಅಲರ್ಟ್ ಘೋಷಿಸಿದೆ. ಜಿಲ್ಲೆಯಲ್ಲಿ ಗಂಟೆಗೆ 40ಕಿ.ಮೀ.ನಿಂದ 48 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹಾಗಾಗಿ ಮೀನುಗಾರರು ಸಮುದ್ರಕ್ಕೆ ತೆರಳ ದಂತೆ ಸೂಚಿಸಲಾಗಿದೆ.
ಜಿಲ್ಲೆಯಲ್ಲಿ ಸಂಭವಿಸಬಹುದಾದ ಹಾನಿ ತಪ್ಪಿಸಲು ಎನ್ಡಿಆರ್ಎಫ್ ತಂಡವು ಸನ್ನದ್ದವಾಗಿದೆ. ಉಪ್ಪಿನಂಗಡಿ ನೇತ್ರಾವತಿ ನದಿ 25.9 ಮೀಟರ್ ಹಾಗೂ ತುಂಬೆ ನೇತ್ರಾವತಿ ನದಿ 3.4 ಮೀಟರ್ನಲ್ಲಿ ಹರಿಯುತ್ತಿದೆ.
ಜಿಲ್ಲೆಯಲ್ಲಿ ಮಂಗಳವಾರ 29.6 ಡಿ.ಸೆ ಗರಿಷ್ಟ, 22.9 ಡಿ.ಸೆ ಕನಿಷ್ಟ ಉಷ್ಟಾಂಶ ದಾಖಲಾಗಿದೆ. ಸೋಮವಾರ ಬೆಳಗ್ಗೆ 8ರಿಂದ ಮಂಗಳವಾರ ಬೆಳಗ್ಗೆ 8ರವರೆಗೆ ಜಿಲ್ಲೆಯಲ್ಲಿ 52.3 ಮಿ.ಮೀ ಮಳೆಯಾಗಿದೆ. ಬೆಳ್ತಂಗಡಿಯಲ್ಲಿ 57 ಮಿ.ಮೀ, ಬಂಟ್ವಾಳದಲ್ಲಿ 68.1 ಮಿ.ಮೀ, ಮಂಗಳೂರು 80.7 ಮಿ.ಮೀ, ಪುತ್ತೂರು 41.8 ಮಿ.ಮೀ, ಸುಳ್ಯದಲ್ಲಿ 27.6 ಮಿ.ಮೀ, ಮೂಡುಬಿದಿರೆಯಲ್ಲಿ 52.7 ಮಿ.ಮೀ, ಕಡಬದಲ್ಲಿ 39.8 ಮಿ.ಮೀ, ಮೂಲ್ಕಿಯಲ್ಲಿ 78.8 ಮಿ.ಮೀ ಹಾಗೂ ಉಳ್ಳಾಲದಲ್ಲಿ 63.7 ಮಿ.ಮೀ ಮಳೆಯಾಗಿದೆ.
*ಮನೆಗೆ ಹಾನಿ : ಸೋಮವಾರ ರಾತ್ರಿ ನಗರದಲ್ಲಿ ಸುರಿದ ಭಾರಿ ಮಳೆಯಿಂದ ಕುಲಶೇಖರದ ಸಿಲ್ವರ್ ಗೇಟಿನ ವೀರ ನಾರಾಯಣ ಕಟ್ಟೆ ಬಳಿಯ ಮನೋಹರ ಅಂಚನ್ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಸ್ಥಳಕ್ಕೆ ಶಾಸಕ ವೇದವ್ಯಾಸ ಕಾಮತ್ ಭೇಟಿ ನೀಡಿ ಪರಿಹಾರದ ಬಗ್ಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.