ಅ.13: ಎಸ್ಸಿಡಿಸಿಸಿ ಬ್ಯಾಂಕ್ ಗುತ್ತಿಗಾರು ಶಾಖೆಯ ಸ್ಥಳಾಂತರ ,ಎಟಿಎಂ ಕೇಂದ್ರದ ಉದ್ಘಾಟನೆ

ರಾಜೇಂದ್ರ ಕುಮಾರ್
ಮಂಗಳೂರು , ಅ.8: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಸುಳ್ಯ ಗುತ್ತಿಗಾರು ಶಾಖೆಯು ಈಗ ಇರುವ ಕಟ್ಟಡದಿಂದ ಗುತ್ತಿಗಾರು ಮುಖ್ಯರಸ್ತೆಯಲ್ಲಿರುವ ರಾಘವೇಂದ್ರ ಕಾಂಪ್ಲೆಕ್ಸ್’ನ ಪ್ರಥಮ ಅಂತಸ್ತಿಗೆ ಸ್ಥಳಾಂತರಗೊಳ್ಳಲಿದ್ದು, ಸ್ಥಳಾಂತರ ಸಮಾರಂಭ ಹಾಗೂ ಹೊಸ ಎಟಿಎಂ ಕೇಂದ್ರದ ಉದ್ಘಾಟನೆ ಅ.13ರಂದು ಪೂರ್ವಾಹ್ನ 11 ಗಂಟೆಗೆ ನಡೆಯಲಿದೆ.
ಬ್ಯಾಂಕಿನ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸುವರು.
*16ನೇ ಎ.ಟಿ.ಎಂ. ಕೇಂದ್ರದ ಉದ್ಘಾಟನೆ ಪ್ರಸ್ತುತ ಗುತ್ತಿಗಾರು ಶಾಖೆಯಲ್ಲಿ ಉದ್ಘಾಟನೆಗೊಳ್ಳಲಿರುವ 16ನೇ ಎ.ಟಿ.ಎಂ. ಕೇಂದ್ರದ ಉದ್ಘಾಟನೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ನೆರವೇರಿಸಲಿರುವರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಗುತ್ತಿಗಾರು ಗಾ.ಪಂ. ಅಧ್ಯಕ್ಷೆ ಸುಮಿತ್ರ ಮೂಕಮಲೆ, ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಯಪ್ರಕಾಶ್ ಮೊಗ್ರ , ಗುತ್ತಿಗಾರು ಮಾಜಿ ಮಂಡಲ ಪ್ರಧಾನ ಮುಳಿಯ ತಿಮ್ಮಪ್ಪಯ್ಯ, ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹಾಗೂ ಕಟ್ಟಡ ಮಾಲಕ ಅನಿಲ್ ಕುಮಾರ್ ಭಾಗವಹಿಸಲಿರುವರು.
ಗ್ರಾಹಕರಿಗೆ ಉನ್ನತ ಸೇವೆಯನ್ನು ನೀಡುವುದರೊಂದಿಗೆ ಜನಮನ್ನಣೆ ಪಡೆದಿರುವ ಈ ಶಾಖೆ ಗ್ರಾಹಕರ ಅನುಕೂಲಕ್ಕಾಗಿ ಸಂಪೂರ್ಣ ಗಣಕೀಕೃತಗೊಂಡು, ಏಕಗವಾಕ್ಷಿ. ಕೋರ್ ಬ್ಯಾಂಕಿಂಗ್ ಹಾಗೂ ಆರ್ಟಿಜಿಎಸ್ ಮತ್ತು ನೆಪ್ಟ್ ಸೌಲಭ್ಯಗಳೊಂದಿಗೆ ಕಾರ್ಯಾರಂಭಗೊಳ್ಳಲಿದೆ
ಗಣನೀಯ ಪ್ರಗತಿ ಸಾಧಿಸಿರುವ ಜಿಲ್ಲಾ ಬ್ಯಾಂಕ್: ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗಣನೀಯ ಪ್ರಗತಿಯನ್ನು ಕಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 111 ವರ್ಷಗಳ ಸಾರ್ಥಕ ಸೇವೆಯ ಇತಿಹಾಸವನ್ನು ಹೊಂದಿದೆ. 1914ರಲ್ಲಿ ಪುತ್ತೂರಿನಲ್ಲಿ ದಿವಂಗತ ಮೊಳಹಳ್ಳಿ ಶಿವರಾವ್ ಅವರ ಮಾರ್ಗದರ್ಶನದಲ್ಲಿ ಸ್ಥಾಪನೆಯಾದ ಈ ಬ್ಯಾಂಕ್ ಪ್ರಸ್ತುತ 113 ಶಾಖೆಗಳನ್ನು ಹೊಂದಿದೆ. ಸದಾ ಗ್ರಾಹಕ ಸ್ನೇಹಿಯಾಗಿರುವ ಈ ಬ್ಯಾಂಕಿನಲ್ಲಿ ಈಗಾಗಲೇ 15 ಎಟಿಎಂಗಳು ಕಾರ್ಯನಿರ್ವಹಿಸುತ್ತಿದೆ.
ಸಹಕಾರ ರತ್ನ ಡಾ.ಎಂ. ಎನ್. ರಾಜೇಂದ್ರ ಕುಮಾರ್ ಅವರ ಸಮರ್ಥ ಅಧ್ಯಕ್ಷತೆಯಲ್ಲಿ ಸರ್ವಾಂಗೀಣ ಅಭಿವೃದ್ಧಿಯತ್ತ ಸಾಗುತ್ತಿರುವ ಎಸ್ಸಿಡಿಸಿಸಿ ಬ್ಯಾಂಕ್ ಗ್ರಾಹಕರ ಅವಶ್ಯಕತೆಗೆ ಸದಾ ಸ್ಪಂದಿಸುತ್ತಿದೆ ಎಂದು ಪ್ರಕಟನೆ ತಿಳಿಸಿದೆ.







