13ನೇ ವಯಸ್ಸಿಗೆ ಊರು ಬಿಟ್ಟು ಹೋದಾತ ವಾಪಸ್ ಬಂದಿದ್ದು 75ನೇ ವರ್ಷಕ್ಕೆ!
ಬಂಟ್ವಾಳ ತಾಲೂಕಿನ ನರಿಕೊಂಬುವಿನಲ್ಲಿ ಅಚ್ಚರಿಯ ಘಟನೆ

ಬಂಟ್ವಾಳ: ಊರು ಬಿಟ್ಟು ಹೋದ ವ್ಯಕ್ತಿಯೋರ್ವರು ಸುಮಾರು 62 ವರ್ಷಗಳ ಬಳಿಕ ತನ್ನ ಊರಿಗೆ ಹಿಂತಿರುಗಿದ ಆಶ್ಚರ್ಯಕರ ಘಟನೆಯೊಂದು ಬಂಟ್ವಾಳ ತಾಲೂಕಿನ ನರಿಕೊಂಬುವಿನಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ರಾಯಶ ನಿವಾಸಿ ದಿ. ಗುಡ್ಡಪ್ಪ ಪೂಜಾರಿ ಹಾಗೂ ನಾಗಮ್ಮ ಅವರ ಮೂರನೇ ಪುತ್ರ 75 ವರ್ಷ ಪ್ರಾಯದ ಸಂಜೀವ ಪೂಜಾರಿ ಮರಳಿ ಊರಿಗೆ ಹಿಂತಿರುಗಿದ ವ್ಯಕ್ತಿ.
ಅವರು ತನ್ನ 13ನೇ ವಯಸ್ಸಿನಲ್ಲಿ ಮನೆ ಬಿಟ್ಟು ಕೆಲಸಕ್ಕಾಗಿ ಮುಂಬೈ ನಗರಕ್ಕೆ ತೆರಳಿದ್ದರು. ಅದಾದ ಬಳಿಕ ಇಂದಿನವರೆಗೆ ಮನೆ ಮಂದಿಯ ಮುಖವನ್ನು ಒಮ್ಮೆಯೂ ತಿರುಗಿ ನೋಡಿದವರಲ್ಲ. ತಂದೆ ತಾಯಿಯ ಸುಖ ದುಃಖದಲ್ಲಾಗಲಿ, ಅಣ್ಣ ತಮ್ಮಂದಿರ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಬಂದಿರಲಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಯಾವುದೇ ಸಂಪರ್ಕ ಮನೆಯವರ ಜೊತೆ ಸಿಗಲಿಲ್ಲವಂತೆ.
ಅವರನ್ನು ಸ್ಥಳೀಯ ತನಿಯಪ್ಪ ಎಂಬವರು ಉದ್ಯೋಗ ನೀಡುವುದಾಗಿ ಮುಂಬೈಗೆ ಕರೆದುಕೊಂಡು ಹೋಗಿದ್ದರು ಎಂದಿದ್ದಾರೆ. ತಂದೆ ತಾಯಿಗೆ ಮಗನ ಬರುವಿಕೆ ಕಾದು ಕಾದು ಕೊನೆಯುಸಿರೆಳೆದರು. ಮಗ ಬದುಕಿ ಬರುವ ಆಸೆಯನ್ನು ತಂದೆ ತಾಯಿಯ ಜೊತೆ ಮನೆಯವರು ಕೂಡಾ ಕಳೆದುಕೊಂಡಿದ್ದರು.
ಇದೀಗ ಅವರು ತಮ್ಮ ಗಂಗಾಧರ ಪೂಜಾರಿ ಅವರ ಮನೆಗೆ ಬಂದಿದ್ದಾರೆ. 62 ವರ್ಷಗಳ ಬಳಿಕ ಊರಿಗೆ ಬಂದ ಅಣ್ಣನನ್ನು ಕಂಡು ತಮ್ಮನಿಗೆ ಬಹಳ ಸಂತೋಷವಾಗಿದೆ.
ಸಂಜೀವ ಪೂಜಾರಿ ಅವರು ಹಿಂದಿ, ಮರಾಠಿ, ಬಂಗಾಳಿ, ಮಲಯಾಳಂ, ತುಳು ಹಾಗೂ ಕನ್ನಡ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ಅವರಲ್ಲಿ ಯಾವುದೇ ದಾಖಲೆ ಪತ್ರಗಳು ಇಲ್ಲ ಎಂದು ಮನೆಯವರು ತಿಳಿಸುತ್ತಾರೆ.







