ಸೆ.14ರಂದು ಎನ್ಇಪಿ ರದ್ದುಗೊಳಿಸದಿರಲು ಆಗ್ರಹಿಸಿ ತಜ್ಞರ ಸಭೆ

ಮಂಗಳೂರು, ಸೆ.12: ರಾಜ್ಯದಲ್ಲಿ ಚಾಲ್ತಿಯಲ್ಲಿರುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ರದ್ದುಗೊಳಿಸದಿರಲು ಆಗ್ರಹಿಸಿ ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಶನ್ ಸಂಸ್ಥೆ ವತಿಯಿಂದ ಸೆ.14ರಂದು ಸಂಜೆ 4ಕ್ಕೆ ನಗರದ ಡೊಂಗರಕೇರಿ ಕೆನರಾ ಹೈಸ್ಕೂಲ್ ಭುವನೇಂದ್ರ ಸಭಾಭವನದಲ್ಲಿ ಶಿಕ್ಷಣ ತಜ್ಞರ ಸಭೆ ಆಯೋಜಿಸಲಾಗಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಕೇಶನ್ ಸಂಚಾಲಕರಾದ ಮಂಗಳೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ರಮೇಶ ಕೆ. ಅವರು, ಸರಕಾರ ಕೇವಲ ತನ್ನ ಪ್ರತಿಷ್ಠೆಗಾಗಿ ಎನ್ಇಪಿಯನ್ನು ರದ್ದುಪಡಿಸಲು ಹೊರಟಿದೆ. ಶಿಕ್ಷಣ ವಿರೋಧಿ, ವಿದ್ಯಾರ್ಥಿ ವಿರೋಧಿ ಸರಕಾರದ ವಿರುದ್ಧ ಶಿಕ್ಷಣ ತಜ್ಞರ ಸಭೆ ನಡೆಸುವ ಮೂಲಕ ಎಚ್ಚರಿಸಲಿದ್ದೇವೆ. ಸಭೆಗೆ ಮುಖ್ಯ ವಕ್ತಾರರಾಗಿ ಬೆಂಗಳೂರಿನ ಹಿರಿಯ ಪತ್ರಕರ್ತ ರವೀಂದ್ರ ರೇಷ್ಮೆ, ವಿಟಿಯು ಬೆಳಗಾವಿಯ ವಿಶ್ರಾಂತ ಕುಲಪತಿ ಪ್ರೊ. ಕರಿಸಿದ್ದಪ್ಪ, ಸೆಸ್ ಬೆಂಗಳೂರಿನ ನಿರ್ದೇಶಕ ಗೌರೀಶ ಆಗಮಿಸಲಿದ್ದಾರೆ. ಶಿಕ್ಷಣ ತಜ್ಞರ ಅಭಿಪ್ರಾಯವನ್ನು ಅಲಿಸಲು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ನಳಿನ್ಕುಮಾರ್ ಕಟೀಲು, ಮಾಜಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಭಾಗವಹಿಸುವರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಾಲಿ ಮತ್ತು ಮಾಜಿ ಶಾಸಕರು, ವಿಶ್ರಾಂತ ಕುಲಪತಿಗಳು, ಅಕಾಡೆಮಿಕ್ ಕೌನ್ಸಿಲ್, ಸಿಂಡಿಕೇಟ್ನ ಹಾಲಿ, ಮಾಜಿ ಸದಸ್ಯರು, ಶಿಕ್ಷಣ ತಜ್ಞರು, ಪ್ರಾಂಶುಪಾಲರು, ಪ್ರಾಧ್ಯಾಪಕರು, ಉಪನ್ಯಾಸಕರು, ಮುಖ್ಯೋಪಾಧ್ಯಾಯರು, ಶಿಕ್ಷಕರು, ಆಡಳಿತ ಮಂಡಳಿ, ಬರಹಗಾರರು, ಪತ್ರಕರ್ತರು, ಅಂಕಣಗಾರರು, ಸಾಹಿತಿಗಳು ಮತ್ತು ಚಿಂತಕರು ಭಾಗವಹಿಸಬೇಕಾಗಿ ವಿನಂತಿಸುತ್ತಿದ್ದೇವೆ ಎಂದರು.
ಕೇಂದ್ರ ಸರಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಿದ್ದು, ಪ್ರಶಂಸಾರ್ಹವಾಗಿದೆ. ಇಡೀ ದೇಶದಲ್ಲಿ ಕರ್ನಾಟಕ ಎನ್ಇಪಿ ಮೊದಲ ಬಾರಿಗೆ 2020-21ರಲ್ಲಿ ಜಾರಿಗೊಳಿಸಿದ ರಾಜ್ಯವಾಗಿದೆ. ಹೊಸ ಶಿಕ್ಷಣ ನೀತಿ ಜಾರಿಯಾಗುತ್ತಿರುವ ಹಂತದಲ್ಲಿಯೇ ರದ್ದುಗೊಳಿಸಲು ಹೊರಟಿರುವುದು ರಾಜಕೀಯ ಪ್ರೇರಿತವಾದುದು. ಎನ್ಇಪಿಯನ್ನು ರದ್ದುಗೊಳಿಸುವ ಪ್ರಯತ್ನವನ್ನು ರಾಜ್ಯ ಸರಕಾರ ಮಾಡಿದರೆ ಸಮಸ್ತ ವಿದ್ಯಾರ್ಥಿ ಸಮುದಾಯ ಹಾಗೂ ಶಿಕ್ಷಣಾಸಕ್ತ ಜನಸಮುದಾಯ ಬಲವಾಗಿ ಪ್ರತಿಭಟಿಸಬೇಕೆಂದು ಪೀಪಲ್ಸ್ ಫೋರಮ್ ಫಾರ್ ಕರ್ನಾಟಕ, ಮಂಗಳೂರು ಶಾಖೆ ಕರೆ ನೀಡುತ್ತದೆ ಎಂದರು.
ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಹೆಚ್ಚುವರಿ ನಿರ್ದೇಶಕ ಪ್ರೊ. ರಾಜಶೇಖರ್ ಹೆಬ್ಬಾರ್, ಮಂಗಳೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ರವಿಚಂದ್ರ ಪಿ.ಎಂ. ಉಪಸ್ಥಿತರಿದ್ದರು.







