ಜು.14: ಪ್ರಸಾದ್ ನೇತ್ರಾಲಯದಲ್ಲಿ ನೂತನ ರೋಬೋಟಿಕ್ ಕಣ್ಣಿನ ಪೊರೆ ಚಿಕಿತ್ಸಾ ವ್ಯವಸ್ಥೆಗಳ ಉದ್ಘಾಟನೆ
ಮಂಗಳೂರು, ಜು.11:ಮಂಗಳೂರಿನ ಪ್ರಸಾದ್ ನೇತ್ರಾಲಯ ಸಮೂಹ ಆಸ್ಪತ್ರೆಯಲ್ಲಿ ರೋಬೋಟಿಕ್ ಕಣ್ಣಿನ ಪೊರೆ ಚಿಕಿತ್ಸಾ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಕರಾವಳಿ ಕರ್ನಾಟಕದಲ್ಲೇ ನೂತನವಾಗಿ ಆರಂಭವಾಗಲಿರುವ ಚಿಕಿತ್ಸಾ ಸೌಲಭ್ಯದ ಉದ್ಘಾಟನೆ ಜು.14ರಂದು ಉಜ್ಜೋಡಿಯ ಪ್ರಸಾದ ನೇತ್ರಾಲಯದಲ್ಲಿ ನಡೆಯಲಿದೆ.
ಮಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರು ಅತ್ಯಂತ ನೂತನ ತಂತ್ರಜ್ಞಾನ ಹೊಂದಿದ ಈ ಪೊರೆ ಶಸ್ತ್ರಚಿಕಿತ್ಸಾ ಯಂತ್ರವು ಪೊರೆ ಚಿಕಿತ್ಸೆಗೆ ಮಾಡಬೇಕಾದ ಇನ್ಸಿಷನ್, ಕಣ್ಣಿನ ಪೊರೆ ಹೊರ ತೆಗೆಯುವುದು, ಲೆನ್ಸ್ ಅಳವಡಿಕೆ ಮುಂತಾದ ಎಲ್ಲಾ ಕಾರ್ಯಗಳನ್ನು ತಾನೇ ನಿರ್ವಹಿಸುತ್ತದೆ ಎಂದು ಮಾಹಿತಿ ನೀಡಿದರು.
ರೋಬೋಟಿಕ್ ಮೂಲಕ ಮಾಡಿದ ಪೊರೆ ಚಿಕಿತ್ಸೆಯು ಮಾನವ ಕೈಗಳಲ್ಲಿ ಮಾಡುವ ಶಸ್ತ್ರ ಚಿಕಿತ್ಸೆಗಳಿಗಿಂತ ಅತೀ ನಿಖರವಾಗಿರುತ್ತದೆ. ಅಲ್ಲದೇ ಕಣ್ಣಿನ ಒಳಗಡೆ ಲೆನ್ಸ್ ಅಳವಡಿಕೆ ಹಾಗೂ ನಿಯೋಜನೆ ಅತ್ಯಂತ ನಿಖರವಾಗಿದ್ದು ಲೇಸರ್ ಮುಖಾಂತರ ಕರಿಗುಡ್ಡೆಯ ದೃಷ್ಟಿ ಸರಿಪಡಿಸುವುದು ಮುಂತಾದುವುಗಳನ್ನು ಮಾಡಬಹುದು ಎಂದರು.
ಶಸ್ತ್ರ ಚಿಕಿತ್ಸಾ ನಂತರದ ಪಡೆಯುವ ದೃಷ್ಟಿಯು ಅತೀ ಹೆಚ್ಚಿನ ಸ್ಪಷ್ಟತೆ ಹೊಂದಿರುತ್ತದೆ ಮತ್ತು ಶಸ್ತ್ರ ಚಿಕಿತ್ಸಾ ನಂತರ ಚೇತರಿಕೆಯು ಅತೀ ಶೀಘ್ರದಲ್ಲಿ ಆಗುತ್ತದೆ.
ರೋಬೋಟಿಕ್ ಕಣ್ಣಿನ ಪೊರೆ ಚಿಕಿತ್ಸಾ ವ್ಯವಸ್ಥೆಯ ಉದ್ಘಾಟನೆ ಜು. 14ರಂದು ಸಂಜೆ 6 ಗಂಟೆಗೆ ನಡೆಯಲಿದ್ದು , ಕೇಂದ್ರ ಶಕ್ತಿ , ಹೊಸ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಶ್ರೀಪಾದ ನಾಯಕ್ ಉದ್ಘಾಟಿಸಲಿರುವರು. ರಾಜ್ಯ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಕ್ರಮದಲ್ಲಿ ಸಂಸತ್ ಸದಸ್ಯ ಬೃಜೇಶ್ ಚೌಟ, ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಸದಸ್ಯ ಡಿ.ವೇದವ್ಯಾಸ್ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ, ಲೆನ್ಸಾರ್ ವಿಷನ್ ಪ್ರೈ. ಲಿಮಿಟೆಡ್ನ ಭಾರತ ಮತ್ತು ದಕ್ಷಿಣ ಏಶ್ಯದ ಸ್ಥಾಪಕ ನಿರ್ದೇಶಕ ಸುಧೀರ್ ಕೌಲ್, ಮಂಗಳೂರು ನಗರಪಾಲಿಕೆ ಸದಸ್ಯ ಸಂದೀಪ್ ಗರೋಡಿ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿ ರಘುರಾಮ್ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.
ಸುದ್ದಿ ಗೋಷ್ಠಿಯಲ್ಲಿ ಆಡಳಿತ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್, ನಿರ್ದೇಶಕರಾದ ಡಾ. ವಿಕ್ರಮ್ ಜೈನ್, ಡಾ. ಹರೀಶ್ ಶೆಟ್ಟಿ ಹಾಗೂ ಡಾ. ಜಾಕೋಬ್ ಚಾಕೊ ಉಪಸ್ಥಿತರಿದ್ದರು.