ಫೆ.16ರಿಂದ ತಣ್ಣೀರುಬಾವಿ ಬೀಚ್ನಲ್ಲಿ ತಪಸ್ಯ ಬೀಚ್ ಉತ್ಸವ, ಟ್ರಯತ್ಲಾನ್

ಮಂಗಳೂರು: ತಣ್ಣೀರುಬಾವಿ ಬೀಚ್ನಲ್ಲಿ ಫೆಬ್ರವರಿ 16ರಿಂದ 18ರವರೆಗೆ ಮಂಗಳೂರು ಟ್ರಯತ್ಲಾನ್ ಮತ್ತು ತಪಸ್ಯ ಬೀಚ್ ಫೆಸ್ಟಿವಲ್ ನಡೆಯಲಿದೆ ಎಂದು ಸಂಸ್ಥೆಯ ಟ್ರಸ್ಟಿ ಡಾ. ಆಶಾಜ್ಯೋತಿ ರೈ ತಿಳಿಸಿದ್ದಾರೆ.
ಶನಿವಾರ ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾಹಿತಿ ನೀಡಿದ ಅವರು ಮಂಗಳೂರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವ ಉದ್ದೇಶದಿಂದ ಮತ್ತು ಕ್ಯಾನ್ಸರ್ ರೋಗಿಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ತಪಸ್ಯ ಸಂಸ್ಥೆಯು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಎಂದರು.
ಫೆ.16ರಂದು ತಪಸ್ಯ ಬೀಚ್ ಉತ್ಸವದ ಉದ್ಘಾಟನಾ ಕಾರ್ಯಕ್ರಮವು ತಣ್ಣೀರುಬಾವಿ ಸರ್ಫ್ಕ್ಲಬ್ನಲ್ಲಿ ನಡೆಯಲಿದೆ. ಸೈಕ್ಲಿಂಗ್, ವಾಲಿಬಾಲ್ ಪಂದ್ಯಾಟ, ಕುಸ್ತಿ ಪಂದ್ಯಾಟ, ಮಲ್ಲಗಂಬ ಪಂದ್ಯಾಟ, 21ಕೆ ರನ್, ಗಾಳಿಪಟ, ಆಹಾರ ಉತ್ಸವ, ಕೃಷಿ ಮೇಳ, ಕ್ಯಾನ್ಸರ್ ಜಾಗೃತಿ ಅಭಿಯಾನ, ಸಂಜೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಂಗಳೂರಿ ನಲ್ಲಿ ವೈದ್ಯಕೀಯ ಮತ್ತು ಶೈಕ್ಷಣಿಕ ಕ್ಷೇತ್ರಗಳು ಅಭಿವೃದ್ಧಿ ಹೊಂದಿದ್ದು ವೈದ್ಯಕೀಯ ಪ್ರವಾಸ ಹಾಗೂ ಶೈಕ್ಷಣಿಕ ಪ್ರವಾಸವನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ತಪಸ್ಯ ಬೀಚ್ ಉತ್ಸವವನ್ನು ಸುಸೂತ್ರವಾಗಿ ನಡೆಸಲು ಮೂಲಭೂತ ಸೌಕರ್ಯಗಳು, ಪಾರ್ಕಿಂಗ್, ಭದ್ರತೆ, ಸ್ವಚ್ಛತೆ, ವೈದ್ಯಕೀಯ ಸಹಾಯ, ವಿದ್ಯುತ್, ಸಂಚಾರ ನಿರ್ವಹಣೆಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಜಿ. ಸಂತೋಷ್ ಕುಮಾರ್, ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಆನಂದ್, ಎಸಿಪಿ ಗೀತಾ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.





