ಜ.18ರಂದು ನಾಟ್ಯಾರಾಧನಾ ಕಲಾ ಕೇಂದ್ರದ ತ್ರಿಂಶೋತ್ಸವ ಉದ್ಘಾಟನೆ

ಮಂಗಳೂರು, ಜ.16: ಭರತನಾಟ್ಯ ಕಲೆಯನ್ನು ಅಕಾಡೆಮಿಕ್ ಆಗಿ ಬೋಧಿಸುತ್ತಿರುವ ಕಲಾ ಸಂಸ್ಥೆಗಳಲ್ಲಿ ಒಂದಾಗಿರುವ ನಾಟ್ಯಾರಾಧನಾ ಕಲಾ ಕೇಂದ್ರ(ಟ್ರಸ್ಟ್) ಉರ್ವ ಮಾರ್ಕೆಟ್ ಇದೀಗ 30ನೇ ವರ್ಷಾಚರಣೆಯ ಸಂಭ್ರಮದಲ್ಲಿದ್ದು, ನಾಟ್ಯಾರಾಧನಾ ತ್ರಿಂಶೋತ್ಸವ ಸಂಭ್ರಮದ ಉದ್ಘಾಟನಾ ಸಮಾರಂಭ ಜ.18ರಂದು ಸಂಜೆ 4:45ಕ್ಕೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ ಸಂಸ್ಥೆಯ ಅಧ್ಯಕ್ಷ ಡಾ.ಗಣೇಶ್ ಅಮೀನ್ ಸಂಕಮಾರು ತಿಳಿಸಿದ್ದಾರೆ.
ಮಂಗಳೂರು ಪ್ರೆಸ್ಕ್ಲಬ್ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾಟ್ಯಾರಾಧನಾ ತ್ರಿಂಶೋತ್ಸವ ಸಮಿತಿ ಮತ್ತು ತ್ರಿಂಶೋತ್ಸವ ವಿದ್ಯಾರ್ಥಿ ಸಮಿತಿಯ ಆಶ್ರಯದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಉದ್ಘಾಟಿಸಲಿರುವರು. ಭರತನಾಟ್ಯ ಗುರು ಉಳ್ಳಾಲ ಮೋಹನ್ ಕುಮಾರ್, ಭರತನಾಟ್ಯ ಗುರು ಉಳ್ಳಾಲ ಮೋಹನ್ ಕುಮಾರ್, ವಿದ್ವಾನ್ ಚಂದ್ರಶೇಖರ ನಾವಡ, ವಿದುಷಿಯರಾದ ಶಾರದಾಮಣಿ ಶೇಖರ್, ಗೀತಾ ಸರಳಾಯ,ಕಾವ್ಯ ಭಟ್ ಪೆರ್ಲ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಂಜೆ 5.30 ರಿಂದ 7.30 ರವರೆಗೆ ನಾಟ್ಯಾರಾಧನಾ ಕಲಾ ಕೇಂದ್ರದ ಪ್ರತಿಭೆಗಳಾದ ಶೋಧನ್ ಕುಮಾರ್, ಸತ್ಯನುಶ್ರೀ ಗುರುರಾಜ, ಜಾಹ್ನವಿ ಶೆಟ್ಟಿ, ಸಾನ್ವಿ ರಾವ್, ವೃಂದಾ ಜಿ. ರಾವ್, ಸಮನ್ವಿತಾ ರಾವ್, ಧರಿತ್ರಿ ಭಿಡೆ, ತನ್ವಿ ಬೋಳೂರು ಅವರಿಂದ ಗುರು ಸುಮಂಗಲಾ ರತ್ನಾಕರ್ ರಾವ್ ನಿರ್ದೇಶನದಲ್ಲಿ ನೃತ್ಯ ವಂದನಾ ಕಾರ್ಯಕ್ರಮ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು, ಕಾರ್ಯದರ್ಶಿ ಸುಮಂಗಲಾ ರತ್ನಾಕರ್ ರಾವ್, ಕೋಶಾಧಿಕಾರಿ ರತ್ನಾಕರ್ ರಾವ್ ಹಾಗೂ ಸಂಘಟನಾ ಕಾರ್ಯದರ್ಶಿ ಶಶಿರಾಜ ರಾವ್ ಕಾವೂರು ಉಪಸ್ಥಿತರಿದ್ದರು.







