ಮೇ18 ರಂದು ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ 'ರಜತೋತ್ಸವ'
![ಮೇ18 ರಂದು ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ರಜತೋತ್ಸವ ಮೇ18 ರಂದು ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ರಜತೋತ್ಸವ](https://www.varthabharati.in/h-upload/2024/05/16/1266930-whatsapp-image-2024-05-16-at-70249-pm.webp)
ಕೊಣಾಜೆ: ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಘಟಕವಾಗಿರುವ ಫಾದರ್ ಮುಲ್ಲರ್ ಹೋಮಿಯೋಪಥಿ, ವೈದ್ಯಕೀಯ ಮಹಾವಿದ್ಯಾಲಯವು ಸ್ನಾತಕೋತ್ತರ ಕೋರ್ಸ್ 25 ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು ಇದರ ಅಂಗವಾಗಿ 'ರಜತೋತ್ಸವ' ರಾಷ್ಟ್ರೀಯ ಹೋಮಿಯೋಪಥಿ ಸ್ನಾತಕೋತ್ತರ ಸಮ್ಮೇಳನವು ಮೇ18 ರಂದು ಕಾಲೇಜಿನ ಸಭಾಂಗಣ ದಲ್ಲಿ ಆಯೋಜಿಸಿದೆ ಎಂದು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶಕರಾದ ರಿಚರ್ಡ್ ಆಲೋಶಿಯಸ್ ಕುವೆಲ್ಲೊ ಅವರು ಹೇಳಿದರು.
ಈ ಸಮ್ಮೇಳನದ ಉದ್ಘಾಟನಾ ಸಮಾರಂಭವು ಬೆಳಿಗ್ಗೆ 10.00 ಗಂಟೆಗೆ ನಡೆಯಲಿದ್ದು, ಹೋಮಿಯೋಪಥಿ ರಾಷ್ಟ್ರೀಯ ಆಯೋಗ, ಭಾರತ ಸರಕಾರ, ನವದೆಹಲಿ ಇದರ ಕಾರ್ಯದರ್ಶಿಯಾದ ಡಾ. ಸಂಜಯ್ ಗುಪ್ತಾ, ಬಿ.ಎಚ್.ಎಂ.ಎಸ್., ಎಂ.ಡಿ (ಹೋಮಿಯೋಪಥಿ) ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ನಿರ್ದೇಶಕರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿರುವರು. ಸ್ನಾತಕೋತ್ತರ ಕಾರ್ಯಕ್ರಮದ 25 ವರ್ಷಗಳನ್ನು ಸಂಕಲಿಸುವ ಸಮ್ಮೇಳನದ ಸ್ಮರಣಿಕೆಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು.
ಡಾ. ಜಸ್ವಂತ್ ಪಾಟೀಲ್, ಎಂ.ಬಿ.ಬಿ.ಎಸ್., ಎಂ.ಡಿ., ಬಿ.ಎಚ್.ಎಂ.ಎಸ್., ಎಂ. ಎ. (ಆಲ್ಟ್ ಥೆರಪಿ), ಫೆಲೋಶಿಪ್ ಇನ್ ಮೆಡಿಕಲ್ ಯೋಗ ಇವರು ಸಮ್ಮೇಳನದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದು, "ಸಾಕ್ಷ್ಯಾಧಾರಿತ ಹೋಮಿ ಯೋಪಥಿ ವಿಧಾನಗಳ ಮೂಲಕ ಕಷ್ಟಕರ ಪ್ರಕರಣಗಳನ್ನು ಪರಿಹರಿಸುವುದು" ಇದರ ಕುರಿತು ವಿವರಿಸಲಿದ್ದಾರೆ. ರಾಷ್ಟ್ರೀಯ ಸ್ನಾತಕೋತ್ತರ ಸಮ್ಮೇಳನವು ದೇಶದ ವಿವಿಧ ಭಾಗಗಳಿಂದ 250 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಭಾರತದಾದ್ಯಂತ ಹೋಮಿಯೋಪಥಿ ಸ್ನಾತಕೋತ್ತರ ವಿದ್ವಾಂಸರು ಮತ್ತು ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಹಳೆಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಪೇಪರ್ ಮತ್ತು ಪೋಸ್ಟರ್ ಪ್ರಸ್ತುತಿ ಹಾಗೂ ರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಹಾಗೂ ವಿಜೇತರಿಗೆ ನಗದು ಬಹುಮಾನವನ್ನು ಘೋಷಿಸಲಾಗಿದೆ.
ರಜತೋತ್ಸವ ಸಮಾರಂಭದ ಪ್ರಯುಕ್ತ 7 ಸ್ನಾತಕೋತ್ತರ ವಿಭಾಗಗಳಿಂದ ವರ್ಷವಿಡೀ ವಿವಿಧ ಸೆಮಿನಾರ್, ಕಲಿಕಾ ಕಾರ್ಯಕ್ರಮ ಹಾಗೂ ಸ್ಪರ್ಧೆಗಳನ್ನು ನಡೆಸಲಾಗಿದೆ ಎಂದರು.
'ಮುಲ್ಲರ್ ಕಾಂಪ್ಲೆಕ್ಸ್' ಶಂಕು ಸ್ಥಾಪನೆ
ಈ ಸಂದರ್ಭದಲ್ಲಿ 'ಮುಲ್ಲರ್ ಕಾಂಪ್ಲೆಕ್ಸ್'ಗೆ ಶಂಕು ಸ್ಥಾಪನೆ ಮಾಡುವುದರ ಮೂಲಕ ಫಾದರ್ ಮುಲ್ಲರ್ ಸಂಸ್ಥೆಯ ಇತಿಹಾಸಕ್ಕೆ ಮತ್ತೊಂದು ಪ್ರಗತಿಯನ್ನು ಸೇರ್ಪಡಿಸಲಾಗುವುದು.
ಶ್ರವಣ ಶಾಸ್ತ್ರ ಹಾಗೂ ವಾಕ್ ಚಿಕಿತ್ಸಾ ಸೇವೆಗಳು
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಶ್ರವಣ ಶಾಸ್ತ್ರ ವಾಕ್ ಚಿಕಿತ್ಸೆ (ಆಡಿಯೋಲಜಿ ಮತ್ತು ಸ್ಪೀಚ್ ಥೆರಪಿ) ಹೊರರೋಗಿ ವಿಭಾಗವನ್ನು ಉದ್ಘಾಟಿಸಲಾಗುವುದು. ಮಕ್ಕಳಿಗೆ ಮತ್ತು ವಯಸ್ಕರಿಗೆ ನುರಿತ ತಜ್ಞರಿಂದ ಸೇವೆ ಲಭ್ಯವಿದೆ. ಇದರಲ್ಲಿ ನವಜಾತ ಶಿಶುವಿನ ಶ್ರವಣ ಪರೀಕ್ಷೆ, ಮಕ್ಕಳಲ್ಲಿ ವಯಸ್ಕರಲ್ಲಿ ಹಾಗೂ ವಯೋ ವೃದ್ಧರಲ್ಲಿ ಕಂಡುಬರುವಂತಹ ಶ್ರವಣ ಶಕ್ತಿಯ ನ್ಯೂನ್ಯತೆಯ ಬಗ್ಗೆ ತಪಾಸಣೆ, ಶ್ರವಣ ಯಂತ್ರದ ಪರೀಕ್ಷಣೆ, ಶ್ರವಣ ಸಾಧನೆಯ ತಪಾಸಣೆ, ಮಕ್ಕಳಲ್ಲಿ ಮತ್ತು ವಯೋವೃದ್ಧರಲ್ಲಿ ಕಂಡುಬರುವಂತಹ ವಾಕ್ ದೋಷಗಳಾದಂತಹ ಉಚ್ಚಾರ ದೋಷ, ಉಗ್ಗುವಿಕೆ, ಸ್ವರದೋಷ, ಕಲಿಕಾ ನ್ಯೂನ್ಯತೆ ಇತ್ಯಾದಿಗಳ ಬಗ್ಗೆ ಸಮಗ್ರ ತಪಾಸಣೆ ಮತ್ತು ಮಾಹಿತಿ ನೀಡಲಾ ಗುವುದು. ವೈದ್ಯರು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9.00 ರಿಂದ 12.30 ರ ವರೆಗೆ ಲಭ್ಯವಿರುತ್ತಾರೆ ಅಡಿಯಾಲಜಿ ಸ್ಪೀಚ್ ಥೆರಪಿ ತಜ್ಞರನ್ನು 9459456633/ 0824 2203901 ಈ ನಂಬರ್ ಮೂಲಕ ಸಂಪ್ರಕಿಸಬಹುದು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ,ಫಾದರ್ ಮುಲ್ಲರ್ ಹೋಮಿಯೋಪಥಿ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯಕೀಯಾ ಡಳಿತಾಧಿಕಾರಿ ರೋಶನ್ ಕ್ರಾಸ್ತಾ, , ಸಹಾಯಕ ಆಡಳಿತಾಧಿಕಾರಿ ಆಶ್ವಿನ್ ಕ್ರಾಸ್ತಾ, ಪ್ರಾಂಶುಪಾಲ ಪ್ರಭುಕಿರಣ್, ಉಪಪ್ರಾಂಶುಪಾಲರಾದ ಡಾ. ವಿಲ್ಮಾ ಮೀರಾ ಡಿ'ಸೋಜ, ವೈದ್ಯಕೀಯ ಅಧೀಕ್ಷಕ ಡಾ. ಗಿರೀಶ್ ನಾವಡ ಯು. ಸಂಯೋಜಕರಾದ ಡಾ. ಜೋಶ್ನಾ ಶಿವಪ್ರಸಾದ್, ಸಂಘಟನಾ ಕಾರ್ಯದರ್ಶಿ ಡಾ. ಶ್ರೇಯಾಂಕ್ ಕೋಟ್ಯಾನ್, ಮಾಧ್ಯಮ ಸಮಿತಿ ಸಂಯೋಜಕಿ ಡಾ. ಅನುಷ ಜಿ.ಎಸ್ ಉಪಸ್ಥಿತರಿದ್ದರು.