ಮಾ.20-23: ಮಂಗಳೂರು ಕೆಥೋಲಿಕ್ ಧರ್ಮಕ್ಷೇತ್ರದಿಂದ ಮಹಾ ಬೈಬಲ್ ಸಮ್ಮೇಳನ

ಮಂಗಳೂರು: ಕ್ರಿಸ್ತ ಜಯಂತಿ-2025 ಜುಬಿಲಿ ವರ್ಷ ಹಾಗೂ ಕ್ಯಾರಿಸ್ಮಾತಿಕ್ ಸೇವಾ ಸಂಚಲನದ ಸುವರ್ಣ ಮಹೋತ್ಸವ ಹಿನ್ನೆಲೆ ಮಂಗಳೂರು ಕೆಥೋಲಿಕ್ ಧರ್ಮಕ್ಷೇತ್ರದ ವತಿಯಿಂದ ಮಹಾ ಬೈಬಲ್ ಸಮ್ಮೇಳನ ಮಾ.20ರಿಂದ 23ರವರೆಗೆ ಸಂಜೆ 4ರಿಂದ ರಾತ್ರಿ 8:30ರ ತನಕ ನಗರದ ಕುಲಶೇಖರ ಕೋರ್ಡೆಲ್ ಪವಿತ್ರ ಶಿಲುಬೆಯ ಚರ್ಚ್ನಲ್ಲಿ ಆಯೋಜಿಸಲಾಗಿದೆ ಎಂದು ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅ.ವಂ.ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಹೇಳಿದ್ದಾರೆ.
ಧರ್ಮಾಧ್ಯಕ್ಷರ ನಿವಾಸದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಧರ್ಮ ಕ್ಷೇತ್ರದ ಬೈಬಲ್ ಆಯೋಗ ಮತ್ತು ಕಥೋಲಿಕ್ ಕ್ಯಾರಿಸ್ಮಾತಿಕ್ ಸೇವಾ ಸಂಚಲನದಿಂದ ‘ವಿಶ್ವಾಸದ ಯಾತ್ರಿಕರು’ ಎಂಬ ಧ್ಯೇಯ ವಾಕ್ಯದೊಂದಿಗೆ ಸಮ್ಮೇಳನ ಆಯೋಜಿಸಲಾಗಿದೆ. ಸಮ್ಮೇಳನದಲ್ಲಿ ಬಲಿಪೂಜೆ, ಪರಮ ಪ್ರಸಾದದ ಆರಾಧನೆ, ಪ್ರವಚನ ಹಾಗೂ ವಿಶೇಷ ಪ್ರಾರ್ಥನಾ ವಿಧಿ ಇರಲಿದೆ. ಕುಟುಂಬ ಕಲ್ಯಾಣ, ಜಾಗತಿಕ ಶಾಂತಿ ಹಾಗೂ ಜನರ ಒಳಿತಿಗಾಗಿ, ದೇವರ ಕೃಪಾ, ವರದಾನ, ಆಶೀರ್ವಾದಗಳಿಗಾಗಿ ವಿಶೇಷ ಪ್ರಾರ್ಥನೆ ನಡೆಯಲಿದೆ. ಅನಕ್ಕರ ಮೇರಿಯನ್ ರಿಟ್ರಿಟ್ ಸೆಂಟರಿನ ನಿರ್ದೇಶಕ, ಧರ್ಮಗುರು ವಂ.ಡೊಮಿನಿಕ್ ವಲಮನಲ್ ವಿಶೇಷ ಪ್ರಭೋದನೆ ನೀಡಲಿದ್ದಾರೆ ಎಂದರು.
ಮಹಾ ಬೈಬಲ್ ಸಮ್ಮೇಳನದಲ್ಲಿ ಮಂಗಳೂರು ಹಾಗೂ ಸುತ್ತಮುತ್ತಲಿನ ಸುಮಾರು 15 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಕಳೆದ ವರ್ಷ ಕ್ರಿಸ್ತ ಜಯಂತಿ-2025 ಜುಬಿಲಿ ವರುಷದ ಪೂರ್ವ ಸಿದ್ಧತೆಯಾಗಿ ನಡೆಸಿದ ಮಹಾ ಬೈಬಲ್ ಸಮ್ಮೇಳನವು ಅಭೂತಪೂರ್ವ ಯಶಸ್ಸು ಕಂಡಿತ್ತು ಎಂದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ಧರ್ಮಕ್ಷೇತ್ರದ ವಿಕಾರ್ ಜೆರಾಲ್ ವಂ. ಮ್ಯಾಕ್ಸಿಂ ಎಲ್. ನೊರೊನ್ಹಾ, ರಾಕ್ಣೊದ ವ್ಯವಸ್ಥಾಪಕ ವಂ. ರೂಪೇಶ್ ಮಾಡ್ತಾ, ಕುಲಶೇಖರ ಚರ್ಚ್ನ ಪ್ರಧಾನ ಧರ್ಮಗುರು ವಂ. ಕ್ಲಿಫರ್ಡ್ ಫೆರ್ನಾಂಡಿಸ್, ಧರ್ಮಕ್ಷೇತ್ರದ ಪಿಆರ್ಒ ರೋಯ್ ಕ್ಯಾಸ್ತಲಿನೊ, ಸಮ್ಮೇಳನದ ಅಧ್ಯಕ್ಷ ಕೇವನ್ ಡಿಸೋಜ ಉಪಸ್ಥಿತರಿದ್ದರು.







