ಫೆ.3-4: ಮಂಗಳೂರು ವಿವಿ ಮಹಿಳಾ ಅಧ್ಯಯನ ಕೇಂದ್ರದಿಂದ ರಾಷ್ಟ್ರೀಯ ಸಮ್ಮೇಳನ

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಯುಜಿಸಿ ಮಹಿಳಾ ಅಧ್ಯಯನ ಕೇಂದ್ರ ವತಿಯಿಂದ ಆಯೋಜಿಸಲ್ಪಡುವ 'ಲಿಂಗ ಸಮಾನತೆ: ಸುಸ್ಥಿರ ಅಭಿವೃದ್ಧಿಯ ಅಗತ್ಯತೆ' ಎಂಬ ವಿಷಯದಲ್ಲಿ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವು ಫೆ.3, 4ರಂದು ಡಾ. ಯು. ಆರ್ ರಾವ್ ಸಭಾಂಗಣದಲ್ಲಿ ನಡೆಯಲಿದೆ.
ಮಂಗಳೂರು ವಿವಿ ಕುಲಪತಿ ಪ್ರೊ. ಪಿ ಎಲ್ ಧರ್ಮ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ವಿಜಯಪುರದ ಅಕ್ಕ ಮಹಾದೇವಿ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾಗಿರುವ ಪ್ರೊ. ಸಬಿಹಾ ಭೂಮಿಗೌಡ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನಜ್ಮಾ ಫಾರೂಕ್, ಎಸಿಪಿ, ಟ್ರಾಫಿಕ್, ಮಂಗಳೂರು ಇವರು ಉಪಸ್ಥಿತರಿರುತ್ತಾರೆ.
ಬಳಿಕ 'ಲಿಂಗತ್ವದ ಸಮಸ್ಯೆಗಳ ಬಗೆಗೆ ಅರಿವು ಮೂಡಿಸುವಲ್ಲಿ ಮಾಧ್ಯಮದ ಪಾತ್ರ' ಎಂಬ ವಿಷಯದ ಬಗೆಗೆ ಡಾ. ಪದ್ಮ ರಾಣಿ; 'ಪಠ್ಯಕ್ರಮ ಮತ್ತು ಶಿಕ್ಷಣಕ್ಷೇತ್ರದಲ್ಲಿ ಲಿಂಗತ್ವ ಪರಿಕಲ್ಪನೆಯ ಒಳಗೊಳ್ಳುವಿಕೆ' ಎಂಬ ವಿಷಯದ ಬಗೆಗೆ ಡಾ. ಪುಷ್ಪ; 'ಲಿಂಗತ್ವದ ಬಗೆಗಿನ ದೌರ್ಜನ್ಯ ಮತ್ತು ತಾರತಮ್ಯದ ಸವಾಲುಗಳನ್ನು ಎದುರಿಸಲು ಕಾನೂನಿನ ಚೌಕಟ್ಟು' ಎಂಬ ವಿಷಯದ ಕುರಿತಾಗಿ ರಾಜು ಮೊಗವೀರ ಕೆ ಎ ಎಸ್ ಮಾತನಾಡಲಿದ್ದಾರೆ. ದೇವದಾಸಿ ಪದ್ಧತಿಯ ಕುರಿತಾದ ಒಂದು ಸಾಕ್ಷ್ಯಚಿತ್ರ ಪ್ರದರ್ಶನವೂ ನಡೆಯಲಿದೆ.
ಎರಡನೆಯ ದಿನ 'ಕಾರ್ಪೊರೇಟ್ ಕ್ಷೇತ್ರದಲ್ಲಿ ಮಹಿಳೆಯರ ಮುಂದಾಳತ್ವ: ಸವಾಲುಗಳು ಮತ್ತು ಸಾಗಿ ಬಂದ ಹಾದಿ' ಎಂಬ ವಿಷಯದ ಬಗೆಗೆ ಡಾ. ಬೆಕ್ಕಿ ಥಾಮಸ್; 'ಮಾನಸಿಕ ಆರೋಗ್ಯ ಮತ್ತು ಯೋಗ ಕ್ಷೇಮ - ಲಿಂಗ ಸೂಕ್ಷ್ಮ ವಿಧಾನ' ಎಂಬ ವಿಷಯದ ಬಗೆಗೆ ಪ್ರೊ. ಸೋಜನ್ ಆ್ಯಂಟನಿ; 'ಕಾರ್ಯನೀತಿ ಮತ್ತು ಆಡಳಿತ: ಸುಸ್ಥಿರ ಅಭಿವೃದ್ಧಿ ಗೆ ಲಿಂಗ ಸಮಾನತೆ ಮತ್ತು ಸಾರ್ವಜನಿಕ ನೀತಿಯನ್ನು ಸಂಯೋಜಿಸುವುದು' ಎಂಬ ವಿಷಯದ ಬಗೆಗೆ ಡಾ. ಮಂಜುಳಾ ವಿ; 'ಮಹಿಳೆಯರ ಆರೋಗ್ಯದ ಅರಿವು-ಸ್ತನ ಕ್ಯಾನ್ಸರ್' ಎಂಬ ವಿಷಯದ ಬಗೆಗೆ ಡಾ. ಮರಿಯಮ್ ಅಂಜುಮ್ ಇಫ್ತಿಕಾರ್ ಇವರು ಮಾತನಾಡಲಿದ್ದಾರೆ. ನಂತರ ನಡೆಯುವ 'ಸುಸ್ಥಿರ ಅಭಿವೃದ್ಧಿಗಾಗಿ ಲಿಂಗ ಸಮಾನತೆ: ಬಹುಮುಖೀ ವಿಧಾನ' ಎಂಬ ವಿಷಯದ ಬಗೆಗಿನ ಸಂವಾದ ಗೋಷ್ಠಿಯಲ್ಲಿ ಡಾ. ರಮೀಳಾ ಶೇಖರ್, ಉಸ್ಮಾನ್, ರಕ್ಷಾ ಭಟ್, ಪ್ರೊ. ಎಚ್ ಎಲ್ ಶಶಿರೇಖಾ ಇವರು ಭಾಗವಹಿಸಲಿದ್ದಾರೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಯುಜಿಸಿ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ. ಬಿ. ಕೆ. ಸರೋಜಿನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







