ಅ.4: ಲೋಕಗೆಂದಿನ ಗಾಂಧಿಯೆರ್ ಕೃತಿ ಬಿಡುಗಡೆ

ಮಂಗಳೂರು, ಅ.1: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಪ್ರಕಟಿಸಿದ ಡಾ.ಉದಯ ಕುಮಾರ್ ಇರ್ವತ್ತೂರು ಬರೆದಿರುವ ಲೋಕಗೆಂದಿನ ಗಾಂಧಿಯೆರ್ ಕೃತಿ ಬಿಡುಗಡೆ ಕಾರ್ಯಕ್ರಮವು ಅ.4ರ ಶನಿವಾರ ಪೂ.11:30ಕ್ಕೆ ನಗರದ ತುಳು ಭವನದಲ್ಲಿ ನಡೆಯಲಿದೆ.
ತುಳು ಅಕಾಡಮಿಯು ಲೋಕದಾರ್ಶನಿಕರ ಹಾಗೂ ರಾಷ್ಟ್ರ ನಾಯಕರ ಬಗ್ಗೆ ತುಳು ಭಾಷೆಯಲ್ಲಿ ಕೃತಿ ಪ್ರಕಟಿಸುವ ಯೋಜನೆಯನ್ನು ರೂಪಿಸಿದ್ದು, ಈ ಸರಣಿಯ ಪ್ರಥಮ ಕೃತಿಯು ಮಹಾತ್ಮ ಗಾಂಧಿ ಅವರ ಕುರಿತಾಗಿ ರಚಿತವಾಗಿದೆ. ಈ ಕೃತಿಯನ್ನು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪಮೊಯಿಲಿ ಬಿಡುಗಡೆ ಮಾಡಲಿದ್ದಾರೆ. ತುಳು ಅಕಾಡಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಎನ್. ಇಸ್ಮಾಯಿಲ್ ಪುಸ್ತಕದ ಪರಿಚಯ ಮಾಡುವರು. ಕೈಮಗ್ಗ ಪುನರುತ್ಥಾನ ಪ್ರವರ್ತಕರಾದ ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ, ಗಾಂಧಿ ಚಿಂತನ ವೇದಿಕೆ ಸುಳ್ಯದ ಸಂಚಾಲಕ ಹರೀಶ್ ಬಂಟ್ವಾಳ ಮತ್ತಿತರರು ಭಾಗವಹಿಸಲಿದ್ದಾರೆ.
ಅಂದು ಬೆಳಗ್ಗೆ 10ಕ್ಕೆ ತುಳುವ ನೆಲದಲ್ಲಿ ಲೋಕಮಾನ್ಯರು ಎಂಬ ವಿಷಯದಲ್ಲಿ ವಿಚಾರಗೋಷ್ಠಿ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದೆ. ದ.ಕ. ಕೊರಗರ ಸಂಘದ ಜಿಲ್ಲಾ ಅಧ್ಯಕ್ಷ ಎಂ. ಸುಂದರ ಬೆಳುವಾಯಿ ಕಾರ್ಯಕ್ರಮ ಉದ್ಘಾಟಿಸುವರು. ಡಾ. ವಾಸುದೇವ ಬೆಳ್ಳೆ ಕುದ್ಮುಲ್ ರಂಗರಾವ್ ಅವರ ಆದರ್ಶ ಮತ್ತು ಕೊಡುಗೆಗಳು ವಿಷಯದ ಬಗ್ಗೆ ಮಾತನಾಡುವರು. ದ.ಕ. ಜಿಲ್ಲಾ ಗಾಂಧಿ ವಿಚಾರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಅರವಿಂದ ಚೊಕ್ಕಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ವರ್ತಮಾನದಲ್ಲಿ ಮಹಾತ್ಮ ಗಾಂಧಿ ವಿಚಾರವಾಗಿ ಸಂವಾದ ನಡೆಸುವರು. ಅಕಾಡಮಿಯ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ಗೋಷ್ಠಿಯನ್ನು ನಿರ್ವಹಿಸುವರು ಎಂದು ತುಳು ಅಕಾಡಮಿಯ ಪ್ರಕಟನೆ ತಿಳಿಸಿದೆ.







