ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಆಯ್ಕೆ

ಅಬ್ದುಲ್ ರಹ್ಮಾನ್ ಕುತ್ತೆತ್ತೂರು
ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಗುರುಪುರ ಕೈಕಂಬದ ಮೇಘಾ ಪ್ಲಾಝಾ ಸಭಾಂಗಣದಲ್ಲಿ 2026ರ ಜ.4ರಂದು ಹಮ್ಮಿಕೊಂಡಿರುವ ಮಂಗಳೂರು ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಕವಿ ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಅಕಾಡಮಿಯ ಸರ್ವ ಸದಸ್ಯರ ಸಭೆ ಮತ್ತು ಸಮ್ಮೇಳನ ಸ್ವಾಗತ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಉಮರ್ ಯು.ಎಚ್.ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಅವರ ಮಹಾಕವಿ ಸರ್ವಜ್ಞನ ವಚನಗಳ ಭಾಷಾಂತರವನ್ನೊಳಗೊಂಡ ʼಜೀಯಸೆಲೆʼ ಬ್ಯಾರಿ ಕವನ ಸಂಕಲನ, ʼಬ್ಯಾರಿ ಪಂಚತಂತ್ರʼ (ಕನ್ನಡದಿಂದ ಬ್ಯಾರಿಗೆ ಅನುವಾದಿಸಿದ ಪಂಚತಂತ್ರ ಕತೆಗಳ ಅನುವಾದ ಗ್ರಂಥ) ಮತ್ತು ʼಸಾಧನೆಡೊ ಸರದಾರ ಅಭಿವೃದ್ಧಿರೊ ಕಿನಾವುಗಾರ ಸರ್.ಎಂ. ವಿಶ್ವೇಶ್ವರಯ್ಯʼ ಬ್ಯಾರಿ ಕೃತಿಗಳನ್ನು ಬ್ಯಾರಿ ಸಾಹಿತ್ಯ ಅಕಾಡಮಿಯು ಪ್ರಕಟಿಸಿದೆ.
ಕಾದಂಬರಿಗಾರ ನಿಯಾಝ್ ಪಡೀಲ್ರ ʼಯತೀಮ್ʼ ಕನ್ನಡ ಕಾದಂಬರಿಯನ್ನು ಬ್ಯಾರಿಗೆ ಅನುವಾದಿಸಿದ್ದರು. ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಸಂತ ಕವಿ ಕನಕದಾಸರ ಮುಂಡಿಗೆ ಮತ್ತು ಕೀರ್ತನೆಗಳನ್ನು ಕನ್ನಡದಿಂದ ಬ್ಯಾರಿಗೆ ಅನುವಾದಿಸಿದ್ದು, ಪ್ರಕಟನೆಯ ಹಂತದಲ್ಲಿದೆ.
ಸಂಶೋಧಕ, ಸಾಹಿತಿ ಪ್ರೊ.ಬಿ.ಎಂ. ಇಚ್ಚಂಗೋಡು ಅವರ ʼಬ್ಯಾರಿ ದ್ರಾವಿಡ ಭಾಷೆಯೇ?ʼ ಎಂಬ ಸಂಶೋಧನಾ ಗ್ರಂಥವನ್ನು ಕನ್ನಡದಿಂದ ಬ್ಯಾರಿಗೆ ಅನುವಾದಿಸಿದ್ದಾರೆ. ʼಬ್ಯಾರಿ ವಾರ್ತೆʼ ಮಾಸಿಕದಲ್ಲಿ ಅಂಕಣ ಪ್ರಕಟವಾಗುತ್ತಿದೆ. ಬ್ಯಾರಿ ಸಾಹಿತ್ಯ ಅಕಾಡಮಿಯು ಹೊರತಂದ ʼಬ್ಯಾರಿ-ಕನ್ನಡ-ಇಂಗ್ಲೀಷ್ʼ ನಿಘಂಟಿನ ಸಹ ಸಂಪಾದಕರಾಗಿ, ಬ್ಯಾರಿ-ಇಂಗ್ಲಿಷ್-ಕನ್ನಡ-ಹಿಂದಿ ಪದಕೋಶದ ಬ್ಯಾರಿ ಪದಗಳ ಸಂಗ್ರಾಹಕರಲ್ಲಿ ಓರ್ವರಾಗಿ, ಬ್ಯಾರಿ ವ್ಯಾಕರಣ ಗ್ರಂಥದ ಇಬ್ಬರು ಸಂಪಾದಕರಲ್ಲಿ ಓರ್ವರಾಗಿ, ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಹೊರತಂದ ʼಬ್ಯಾರಿ-ಕನ್ನಡ ಗಾದೆ-ನುಡಿಗಟ್ಟು-ಒಗಟುಗಳ ಕೋಶʼದ ಸಂಪಾದಕರಲ್ಲಿ ಓರ್ವರಾಗಿ ಕೆಲಸ ಮಾಡಿದ್ದಾರೆ.
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ʼಬ್ಯಾರಿ ಅಧ್ಯಯನ ಪೀಠʼದ ಸದಸ್ಯರಾಗಿದ್ದ ಇವರ ಬ್ಯಾರಿ ಸಾಹಿತ್ಯ ಕ್ಷೇತ್ರದ ಸೇವೆಗೆ ಬ್ಯಾರಿ ಸಾಹಿತ್ಯ ಅಕಾಡಮಿಯ 2019ನೇ ಸಾಲಿನ ಗೌರವ ಪ್ರಶಸ್ತಿ ನೀಡಿದೆ.
ʼಲೋಕಾನುಗ್ರಹಿ ಹಝ್ರತ್ ಮುಹಮ್ಮದ್ ಪೈಗಂಬರ್ ಮತ್ತು ’ಬಕ್ರೀದ್’ ಇವರ ಪ್ರಕಟಿತ ಕನ್ನಡ ಕೃತಿಗಳು. ಕನ್ನಡ, ಬ್ಯಾರಿ ಮತ್ತು ತುಳು ಭಾಷೆಯಲ್ಲಿ ಬರೆದ ಲೇಖನ, ಕವನ, ವಿಮರ್ಶೆ, ಕಥೆಗಳು ನಾಡಿನ ಪ್ರಮುಖ ಪತ್ರಿಕೆಗಳು, ಸ್ಮರಣ ಸಂಚಿಕೆಗಳಲ್ಲಿ ಪ್ರಕಟವಾಗಿವೆ. ಮಂಗಳೂರು ಆಕಾಶವಾಣಿಯಲ್ಲಿ ಸುಮಾರು ಇನ್ನೂರಕ್ಕೂ ಮಿಕ್ಕಿದ ಚಿಂತನಗಳು ಪ್ರಸಾರವಾಗಿವೆ. ಬ್ಯಾರಿ ಭಾಷೆಯ ಅನೇಕ ಕಾರ್ಯಕ್ರಮಗಳು ಮಂಗಳೂರಿನ ́ರೇಡಿಯೊ ಸಾರಂಗ್’ ಸಮುದಾಯ ಬಾನುಲಿಯಲ್ಲಿ ಪ್ರಸಾರವಾಗಿವೆ.







