ಆ.10: ದುಬೈ ಬಿಸಿಎಫ್ ವತಿಯಿಂದ ವಿದ್ಯಾರ್ಥಿ ವೇತನ, ಹೊಲಿಗೆ ಯಂತ್ರ ವಿತರಣೆ

ಮಂಗಳೂರು: ಬ್ಯಾರೀಸ್ ಕಲ್ಚರಲ್ ಫೋರಂ (ಬಿಸಿಎಫ್) ವತಿಯಿಂದ ವಿದ್ಯಾರ್ಥಿ ವೇತನ ಮತ್ತು ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮವು ಆ.10ರಂದು ಪೂ.11ಕ್ಕೆ ನಗರದ ಜೆಪ್ಪಿನಮೊಗರಿನಲ್ಲಿರುವ ಪ್ರೆಸ್ಟಿಜ್ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ನಡೆಯಲಿದೆ ಎಂದು ಬಿಸಿಎಫ್ ಸ್ಕಾಲರ್ಶಿಪ್ ಕಮಿಟಿಯ ಚೇರ್ಮ್ಯಾನ್ ಎಂ.ಇ. ಮೂಳೂರು ತಿಳಿಸಿದ್ದಾರೆ.
ನಗರದ ಖಾಸಗಿ ಹೊಟೇಲಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ವರ್ಷ ಪಿಯುಸಿಯಿಂದ ಸ್ನಾತಕೋತ್ತರ ಪದವಿ ತನಕದ 300ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ 15 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದರು.
ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ. ಯೂಸುಫ್ ಮಾತನಾಡಿ ಯುಎಇ ಲಂಡನ್ ಅಮೇರಿಕನ್ ಸಿಟಿ ಕಾಲೇಜಿನ ನಿರ್ದೇಶಕ ಡಾ. ಪ್ರೊ. ಕಾಪು ಮುಹಮ್ಮದ್ ಹಾಗೂ ಮನಾಲ್ ಕಾಪು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಾಗಾರ ನಡೆಸಿಕೊಡಲಿ ದ್ದಾರೆ. ರಾಜ್ಯ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ದ.ಕ.ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ದುಆಗೈಯಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ನಸೀರ್ ಅಹ್ಮದ್, ಐವನ್ ಡಿಸೋಜ, ಮಾಜಿ ಸಚಿವ ರಮಾನಾಥ ರೈ, ಸಂಸದ ಬ್ರಿಜೇಶ್ ಚೌಟ, ದ.ಕ.ಜಿಲ್ಲಾಧಿಕಾರಿ ಎಚ್.ವಿ. ದರ್ಶನ್, ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, ತುಂಬೆ ಗ್ರೂಪ್ನ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದಿನ್, ಯೆನೆಪೋಯ ವಿವಿಯ ಕುಲಾಧಿಪತಿ ಯೆನೆಪೋಯ ಅಬ್ದುಲ್ಲಾ ಕುಂಞಿ, ಮಂಗಳೂರು ವಿವಿ ಕುಲಪತಿ ಡಾ.ಪಿ.ಎಲ್.ಧರ್ಮ, ಅಎನ್.ಆರ್.ಫೋರಂ ಯುಎಇ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಮಾಜಿ ಶಾಸಕರಾದ ಬಿ.ಎಂ.ಫಾರೂಕ್, ಬಿ.ಎ. ಮೊಯ್ದಿನ್ ಬಾವ, ಡಾ. ಯು.ಟಿ. ಇಫ್ತಿಕಾರ್, ಹಾಜಿ ಎಸ್.ಎಂ.ರಶೀದ್, ಕೆ.ಮುಹಮ್ಮದ್ ಹಾರಿಸ್. ಶೇಖ್ ಮೊಯ್ದಿನ್ ಕರ್ನಿರೆ, ಅಬ್ದುಲ್ಲಾ ಮಾದುಮೂಲೆ, ಇಬ್ರಾಹೀಂ ಗಡಿಯಾರ್, ಅಬೂಸಾಲಿಹ್, ಕೌಸರ್ ನಿಸಾರ್, ಝಾಹಿದಾ ಜಲೀಲ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಬಿಸಿಎಫ್ ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮುಹಮ್ಮದ್ ಮಾತನಾಡಿ ಬಿಎಸಿಎಫ್ ಅಧ್ಯಕ್ಷ ಡಾ.ಬಿ.ಕೆ. ಯೂಸುಫ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ದ.ಕ.ಮತ್ತು ಉಡುಪಿ ಜಿಲ್ಲೆಯ ಸುಮಾರು 100 ಮಹಿಳೆ ಯರಿಗೆ ಹೊಲಿಗೆ ಯಂತ್ರ ವಿತರಿಸಲಾಗುತ್ತದೆ. ಅಲ್ಲದೆ ಎಂಬಿಬಿಎಸ್ ವ್ಯಾಸಂಗ ಮಾಡಲು ಇಬ್ಬರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ನೀಡಲಾಗುವುದು. ಮರ್ಹೂಂ ಬಿ.ಎಂ. ಮುಮ್ತಾಝ್ ಅಲಿ ನೆನಪಿನಲ್ಲಿ ಪ್ರತೀ ವರ್ಷ ಐವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು. ಬಿ.ಎಂ ಮುಮ್ತಾಝ್ ಅಲಿ ಕುಟುಂಬಕ್ಕೆ ಲೈಫ್ಟೈಮ್ ಅಚೀವ್ಮೆಂಟ್ ಪ್ರಶಸ್ತಿ ನೀಡಲಾಗುವುದು. ಪ್ರೆಸಿಡೆನ್ಸಿ ಗ್ರೂಪ್ನ ನಿರ್ದೇಶಕಿ ಕೌಸರ್ ನಿಸಾರ್, ಪ್ರೆಸ್ಟೀಜ್ ಇಂಟರ್ ನ್ಯಾಶನಲ್ ಸ್ಕೂಲ್ನ ಹೈದರ್, ಆಯಿಶಾ ಇಬ್ರಾಹೀಂ ಗಡಿಯಾರ್ ಅವರನ್ನು ಗೌರವಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ, ಬಿಸಿಎಫ್ ಪೋಷಕ್ ಬಿ.ಎ.ಮೊಯ್ದಿನ್ ಬಾವ, ಬಿಸಿಎಫ್ ಉಪಾಧ್ಯಕ್ಷ ಅಬ್ದುಲ್ ಲತೀಫ್ ಮುಲ್ಕಿ, ಮುಖ್ಯ ಸಲಹೆಗಾರರಾದ ಇಬ್ರಾಹೀಂ ಗಡಿಯಾರ್, ಅಬೂಸ್ವಾಲಿಹ್ ಹುಸೈನ್, ಹನೀಫ್, ಯಾಕೂಬ್ ದೇವ, ಹಫೀಕ್ ಉಪಸ್ಥಿತರಿದ್ದರು.







