ಬೆಂಗಳೂರು: ಆ.19ರಂದು ನೂರುಲ್ ಹುದಾ ಎಜ್ಯು ಕಾನ್ಫರೆನ್ಸ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮಾಡನ್ನೂರು ಪ್ರದೇಶದಲ್ಲಿ ಧಾರ್ಮಿಕ-ಲೌಕಿಕ ಸಮನ್ವಯ ಶಿಕ್ಷಣ ಕ್ಷೇತ್ರದಲ್ಲಿ ಹತ್ತು ವರ್ಷಗಳಿಂದ ಶ್ರೇಷ್ಠ ಸೇವೆ ಸಲ್ಲಿಸುತ್ತಿರುವ ನೂರುಲ್ ಹುದಾ ಶಿಕ್ಷಣ ಸಂಸ್ಥೆ ತನ್ನ ದಶಮಾನೋತ್ಸವ ಹಾಗೂ ಪದವಿ ಪ್ರದಾನ ಸಮಾರಂಭದ ಹಿನ್ನೆಲೆಯಲ್ಲಿ ಸಂಸ್ಥೆಯ ಸ್ಥಾಪಕ ದಿನವಾದ ಆ.19ರಂದು ಬೆಂಗಳೂರಿನ ಪ್ರತಿಷ್ಠಿತ ಲಲಿತ್ ಅಶೋಕ್ ಹೋಟೆಲ್ ನಲ್ಲಿ “ಎಜ್ಯು ಕಾನ್ಫರೆನ್ಸ್” ಎಂಬ ಶೈಕ್ಷಣಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಸಂಜೆ 5 ಗಂಟೆಗೆ ಪ್ರಾರಂಭಗೊಳ್ಳುವ ಪ್ರಸ್ತುತ ಕಾರ್ಯಕ್ರಮದಲ್ಲಿ ಉದ್ಘಾಟನಾ ಸಮಾರಂಭ, ಯೋಜನೆಗಳ ಅನಾವರಣ, ಪ್ರಶಸ್ತಿ ಪ್ರದಾನ, ಸನ್ಮಾನ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ವಿವಿಧ ಚಟುವಟಿಕೆಗಳು ನಡೆಯಲಿವೆ ಎಂದು ಪ್ರಕಟನೆ ತಿಳಿಸಿದೆ.
ಕಾರ್ಯಕ್ರಮವನ್ನು ಪಾಣಕ್ಕಾಡ್ ಸೈಯದ್ ಮುನವ್ವರ್ ಅಲಿ ಶಿಹಾಬ್ ತಂಙಳ್ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರು ವಹಿಸಲಿದ್ದು, ವಕ್ಫ್ ಮತ್ತು ಅಲ್ಪಸಂಖ್ಯಾತ ಅಭಿವೃದ್ಧಿ ಸಚಿವರಾದ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಹೊಸ ಯೋಜನೆಗಳನ್ನು ಬಿಡುಗಡೆಗೊಳಿಸಲಿದ್ದಾರೆ.
ರಾಜ್ಯ ಸಚಿವರುಗಳಾದ ರಹೀಮ್ ಖಾನ್, ದಿನೇಶ್ ಗುಂಡೂರಾವ್, ಸತೀಶ್ ಜಾರಕಿಹೊಳಿ, ಡಾ. ಎಂ.ಸಿ. ಸುಧಾಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ. ನಸೀರ್ ಅಹ್ಮದ್, ವಿಧಾನ ಪರಿಷತ್ ಸದಸ್ಯರು, ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಅಶೋಕ್ ಕುಮಾರ್ ರೈ ಪುತ್ತೂರು, ತನ್ವೀರ್ ಶೇಠ್, ಎನ್.ಎ. ಹಾರಿಸ್ ಶಾಂತಿನಗರ, ರಿಝ್ವಾನ್ ಅರ್ಷದ್ ಶಿವಾಜಿನಗರ, ಎಚ್.ಎ. ಇಕ್ಬಾಲ್ ಹುಸೇನ್ ರಾಮನಗರ, ಯಾಸಿರ್ ಅಹ್ಮದ್ ಖಾನ್ ಶಿಗ್ಗಾಂವಿ, ವಿಧಾನ ಪರಿಷತ್ ಸದಸ್ಯರಾದ ಅಬ್ದುಲ್ ಜಬ್ಬಾರ್ , ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಬಿ.ಕೆ. ಅಲ್ತಾಫ್ ಖಾನ್, ಸುಪ್ರೀಂ ಕೋರ್ಟ್ ನ್ಯಾಯವಾದಿ ಡಾ. ಸಯೀದ್ ಮೊಹಿದ್ ಅಲ್ತಾಫ್, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ. ಬಾವ, ಬೆಂಗಳೂರು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಇನಾಯತ್ ಅಲಿ ಮುಲ್ಕಿ, ಕರ್ನಾಟಕ ರಾಜ್ಯ ಅಲೈಡ್ & ಹೆಲ್ತ್ಕೇರ್ ಕೌನ್ಸಿಲ್ ಅಧ್ಯಕ್ಷ ಯು.ಟಿ. ಇಫ್ತಿಖಾರ್ ಅಲಿ ಫರೀದ್ ಸೇರಿದಂತೆ ಉಲಮಾಗಳು, ರಾಜಕೀಯ ಮುಖಂಡರು, ಉದ್ಯಮಿಗಳು ಹಾಗೂ ಶಿಕ್ಷಣಾಸಕ್ತರು ಪಾಲ್ಗೊಳ್ಳಲಿದ್ದಾರೆ.
ಕೊಡಗು ಖಾಝಿ ಅಬ್ದುಲ್ಲಾ ಫೈಝಿ ಉಸ್ತಾದ್, ಸಮಸ್ತ ಉಲಮಾ ಒಕ್ಕೂಟದ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಶೈಖುನಾ ಉಸ್ಮಾನುಲ್ ಫೈಝಿ ತೋಡಾರು ಗೌರವ ಉಪಸ್ಥಿತರಿರಲಿದ್ದಾರೆ.
ಸಂಸ್ಥೆಯ ಪ್ರಾಂಶುಪಾಲರಾದ ಅಡ್ವ. ಹನೀಫ್ ಹುದವಿ ವಿಷಯ ಮಂಡಿಸಲಿದ್ದು, ವ್ಯವಸ್ಥಾಪಕರಾದ ಖಲೀಲುರ್ರಹ್ಮಾನ್ ಅರ್ಷದಿ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ. ನೂರುಲ್ ಹುದಾ ಸಂಸ್ಥೆಯ ಅಧ್ಯಕ್ಷರಾದ ಬುಶ್ರಾ ಅಬ್ದುಲ್ ಅಝೀಝ್ ಮುಸ್ಲಿಂ ಸಮುದಾಯದ ಶೈಕ್ಷಣಿಕ ಅಭಿವೃದ್ಧಿಯ ಬಗ್ಗೆ ಹಕ್ಕೊತ್ತಾಯ ಮಂಡಿಸಲಿದ್ದಾರೆ. ಬೆಂಗಳೂರಿನ ಫಾಲ್ಕನ್ ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಅಬ್ದುಲ್ ಸುಭಾನ್ ಅಲ್ಪಸಂಖ್ಯಾತ ಸಮುದಾಯದ ಶೈಕ್ಷಣಿಕ ಬೆಳವಣಿಗೆಗಳ ಕುರಿತು ವಿಷಯ ಮಂಡಿಸಲಿದ್ದಾರೆ.
ಯೆನೆಪೊಯ ವಿಶ್ವಿದ್ಯಾನಿಲಯದ ಕುಲಪತಿ ಡಾ. ವೈ. ಅಬ್ದುಲ್ಲಾ ಕುಂಞಿ, ಯುಎಇ ಗಲ್ಫ್ ವಿಶ್ವವಿದ್ಯಾನಿಲಯದ ಕುಲಪತಿ ಡಾ. ತುಂಬೆ ಮೊಯ್ದಿನ್, ಬೆಂಗಳೂರು ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದ ಕುಲಪತಿ ಡಾ. ನಿಸಾರ್ ಅಹ್ಮದ್, ಗುಲ್ಬರ್ಗಾ ಖ್ವಾಜಾ ಬಂದೇ ನವಾಝ್ ವಿಶ್ವಿದ್ಯಾನಿಲಯದ ಕುಲಪತಿ ಡಾ. ಸಯೀದ್ ಮುಹಮ್ಮದ್ ಅಲಿ ಅಲ್-ಹುಸೈನಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಶುಹದಾ ಸೋಶಿಯಲ್ ಎಕ್ಸಲೆನ್ಸ್ ಅವಾರ್ಡ್ ಪ್ರದಾನ
ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಸ್ಥಾಪಕ ದಿನದ ಅಂಗವಾಗಿ ಪ್ರತಿ ವರ್ಷ ನೀಡಲಾಗುವ “ಶುಹದಾ ಸೋಶಿಯಲ್ ಎಕ್ಸಲೆನ್ಸ್ ಅವಾರ್ಡ್ – 2025” ಗೆ ಈ ಬಾರಿ ಕರ್ನಾಟಕ ಸರ್ಕಾರದ ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವರಾದ ಬಿ.ಝಡ್. ಝಮೀರ್ ಅಹ್ಮದ್ ಖಾನ್ ಆಯ್ಕೆಯಾಗಿದ್ದು, ಪ್ರಸ್ತುತ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಮುಸ್ಲಿಂ ಸಮುದಾಯದ ಸಬಲೀಕರಣಕ್ಕಾಗಿ ನೀಡಿದ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆ, ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿಯಾಗಿ ಗಳಿಸಿದ ಸರ್ವಸಮ್ಮತ ವ್ಯಕ್ತಿತ್ವ, ಧಾರ್ಮಿಕ ಪ್ರಜ್ಞೆ, ಸೌಹಾರ್ದ ಮನೋಭಾವ, ರಾಷ್ಟ್ರೀಯ ಪ್ರಜ್ಞೆ ಹಾಗೂ ಸಮಾಜ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ನೀಡಿದ ಮಹತ್ತರ ಕೊಡುಗೆಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಎಜ್ಯು ಎಕ್ಸಲೆನ್ಸ್ ಅವಾರ್ಡ್ : ಇದೇ ಸಂದರ್ಭದಲ್ಲಿ ಶೈಕ್ಷಣಿಕ ರಂಗದಲ್ಲಿ ವಿಶಿಷ್ಟ ಸಾಧನೆಗೈದ ಗಣ್ಯರಿಗೆ ಎಜ್ಯು ಎಕ್ಸಲೆನ್ಸ್ ಅವಾರ್ಡ್ ಕೂಡ ಪ್ರದಾನಿಸಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.







