ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ಹೆತ್ತವರ ಕಾಳಜಿ ಅಗತ್ಯ: ಸ್ಪೀಕರ್ ಯು.ಟಿ. ಖಾದರ್

ಮಂಗಳೂರು: ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ಹೆತ್ತವರು ಕಾಳಜಿವಹಿಸಬೇಕು. ಯುವಜನರು ದ್ವೇಷ, ದುಶ್ಚಟದಿಂದ ದೂರವಾಗಿ ಬಲಿಷ್ಠವಾದರೆ ಸಮುದಾಯ, ದೇಶ ಬಲಿಷ್ಠವಾಗಲು ಸಾಧ್ಯ ಎಂದು ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.
ದೂದ್ನಾನಾ ಕಲ್ಚರಲ್ ಫೌಂಡೇಶನ್ ಹಾಗೂ ಅಲ್ ಸಲಾಮ ಕೌನ್ಸಿಲಿಂಗ್ ಸೆಂಟರ್ ವತಿಯಿಂದ ಶನಿವಾರ ನಗರದ ಪುರಭವನದಲ್ಲಿ ನಡೆದ ʼಡ್ರಗ್ಸ್ ವಿರುದ್ಧ ಜಾಗೃತಿ ಮಹಾ ಸಂಗಮ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಾದಕ ವ್ಯಸನವು ಕೇವಲ ಆ ಚಟಕ್ಕೆ ಬಿದ್ದವನ ವೈಯಕ್ತಿಕ ಸಮಸ್ಯೆಯಲ್ಲ. ಇದು ಕುಟುಂಬಗಳು ಮತ್ತು ಸಮುದಾಯಗಳ ಮೇಲೆ ಪರಿಣಾಮ ಬೀರುವ ಸಾಮಾಜಿಕ ಸಮಸ್ಯೆಯಾಗಿದೆದುಶ್ಚಟ, ದ್ವೇಷಮುಕ್ತ ಸಮಾಜವನ್ನು ನಿರ್ಮಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ನಮ್ಮ ವೈರಿಗಳು ಹೊರಗಿನವರು ಅಲ್ಲ. ನಮ್ಮ ಶತ್ರುಗಳು ಮನಸ್ಸು ಮತ್ತು ಹೃದಯದೊಳಗೆ , ನಮ್ಮೊಂದಿಗೆ ಇದ್ದಾರೆ ಎಂದರು.
ತಪ್ಪು ಮಾಡುವವರ ವಿರುದ್ಧ ಮಾತನಾಡುವ ಧೈರ್ಯ ನಮ್ಮಲ್ಲಿರಬೇಕು ಕಾರ್ಯಕ್ರಮದಲ್ಲಿ ಅಂತರ್ರಾಷ್ಟ್ರೀಯ ವಾಗ್ಮಿ ಸಿಂಸಾರುಲ್ ಹಖ್ ಹುದವಿ ಮುಖ್ಯ ಭಾಷಣ ಮಾಡಿದರು.
ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಿಎಚ್ ಮಾತನಾಡಿ ಡ್ರಗ್ಸ್ ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಂದು ಜಮಾಅತ್ ಮಟ್ಟದಲ್ಲಿ ಅಭಿಯಾನ ನಡೆಯಬೇಕು ಎಂದು ಹೇಳಿದರು.
ಒಬ್ಬ ಡ್ರಗ್ಸ್ ಸೇವನೆಯ ಚಟವನ್ನು ಅಂಟಿಸಿಕೊಂಡರೆ ಆತನ ಬದುಕು ನಾಶವಾಗುವುದು ಮಾತ್ರವಲ್ಲದೆ , ಇಡೀ ಕುಟುಂಬದ ಮೇಲೆ ಅದರ ಪರಿಣಾಮವಾಗುತ್ತದೆ. ಆತನ ಮನೆಯಲ್ಲಿ ಯಾರಿಗೂ ಶಾಂತಿ, ನೆಮ್ಮದಿ ಇರುವುದಿಲ್ಲ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಶರೀಫ್ ಹಾಜಿ ವೈಟ್ ಸ್ಟೋನ್ ವಹಿಸಿದ್ದರು. ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಸಂದೇಶ ನೀಡಿದರು.
ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಉಸ್ಮಾನ್ ಫೈಝಿ ತೋಡಾರ್ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ಸ್ವೀಕರ್ ಯು.ಟಿ.ಖಾದರ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಝಕರಿಯಾ ಜೋಕಟ್ಟೆ ಹಾಗೂ ದೂದ್ ನಾನಾ ಫೌಂಡೇಶನ್ ಅಧ್ಯಕ್ಷ ಝೈನುಲ್ ಆಬಿದ್ ಬಿ.ಕೆ. ಇವರನ್ನು ಸನ್ಮಾನಿಸಲಾಯಿತು.
ವಿಧಾನ ಪರಿಷತ್ ಮಾಜಿ ಸದಸ್ಯ ಬಿ.ಎಂ.ಫಾರೂಕ್ , ಮಾಜಿ ಶಾಸಕ ಮೊಯ್ದೀನ್ ಬಾವಾ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಸದಸ್ಯ ಜಮಾಲ್ ಉದ್ಯಮಿ ಮುಸ್ತಫಾ ಭಾರತ್ , ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಸ್ತಫಾ ಸುಳ್ಯ, ಪ್ರಮುಖರಾದ ಹೈದರ್ ಪರ್ತಿಪ್ಪಾಡಿ, ನೂರುದ್ದೀನ್ ಸಾಲ್ಮರ ಉಪಸ್ಥಿತರಿದ್ದರು.
ಫಕೀರಬ್ಬ ಮಾಸ್ಟರ್ ಸ್ವಾಗತಿಸಿದರು. ಅಲ್ ಸಲಾಮ ಕೌನ್ಸಿಲಿಂಗ್ ಸೆಂಟರ್ ಸಂಚಾಲಕ ಶೇಖ್ ಮುಹಮ್ಮದ್ ಇರ್ಫಾನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಬಾಳಿಲ ನೌಫಲ್ ಕೆಬಿಎಸ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.







