ಬಜ್ಪೆ| ಪೊಲೀಸರನ್ನು ಅವಹೇಳನಕಾರಿಯಾಗಿ ನಿಂದಿಸಿದ ಆರೋಪ: ಯುವಕ ಸೆರೆ

ಅಭಿಷೇಕ್
ಬಜ್ಪೆ: ಸಾಮಾಜಿಕ ಜಾಲತಾಣದಲ್ಲಿ ಬಜ್ಪೆ ಪೊಲೀಸರನ್ನು ಅವಹೇಳನಕಾರಿಯಾಗಿ ನಿಂದಿಸಿರುವ ಆರೋಪದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಸುರತ್ಕಲ್ ಕಾಟಿಪಳ್ಳ ನಿವಾಸಿ ಅಭಿಷೇಕ್ ಎಂ. (23) ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯು mr_a_titude 22 ಎಂಬ Instagram ಪೇಜ್ ನಲ್ಲಿ ಬಜ್ಪೆ ನಿಸರ್ಗ ಹೋಟೆಲ್ನ ಫೋಟೊ ಬಳಸಿಕೊಂಡು ಅದರ ಮೇಲೆ "ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಕೊಲೆ ಪ್ರಕರಣದ ಆರೋಪಿತರಿಗೆ ಬಜ್ಪೆ ಪೊಲೀಸರಿಂದ ರಾಜ ಅತಿಥ್ಯ, ದಿನಾಲೂ ನಿಸರ್ಗ ಹೋಟೆಲ್ ಬಜ್ಪೆ ಇಂದ ಬೀಫ್ ಊಟವನ್ನು ನೀಡುತ್ತಿದ್ದಾರೆ. ಜನರನ್ನು ರಕ್ಷಣೆ ಮಾಡಬೇಕಾದ ಪೊಲೀಸ್ ಅಪರಾಧಿಗಳೊಟ್ಟಿಗೆ ಸೇರಿಕೊಂಡು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡುತ್ತಿದ್ದಾರೆ. ಇಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿದೆ. ಇಲ್ಲಿ ಪೊಲೀಸ್ ನವರ ಮೇಲೆ ಇಟ್ಟಿರುವ ಭರವಸೆ ಸುಳ್ಳಾಗುತ್ತಿದೆ" ಎಂದು ಪೊಲೀಸರನ್ನು ನಿಂದಿಸಿ ಪೋಸ್ಟ್ ಮಾಡಿರುವುದಾಗಿ ದೂರಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬಜ್ಪೆ ಪೊಲೀಸರು ಆರೋಪಿ ಅಭಿಷೇಕ್ ನನ್ನು ಬಂಧಿಸಿದ್ದಾರೆ.
ಅಭಿಷೇಕ್ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮಂಗಳಪೇಟೆ ನಿವಾಸಿ ಫಾಝಿಲ್ ಕೊಲೆ, ಕೊಲೆಯತ್ನ, ಹಲ್ಲೆ ಪ್ರಕರಣ, ಕಾಪು ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣಗಳು ದಾಖಲಾಗಿವೆ.
ಆರೋಪಿಯನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆಗಾಗಿ ಸೆನ್ ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.





