"ಗಂಭೀರ ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡುವಾಗ ಇರಲಿ ಎಚ್ಚರ"

ಸುಧೀರ್ ಕುಮಾರ್ ರೆಡ್ಡಿ
ಮಂಗಳೂರು, ಜ.24: ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಆರೋಪಿಗಳಿಗೆ ಜಾಮೀನು ಸಂದರ್ಭ ಭದ್ರತೆ (ಶ್ಯೂರಿಟಿ)ಯನ್ನು ಒದಗಿಸುವವರು ಎಚ್ಚರಿಕೆ ವಹಿಸದಿದ್ದರೆ ಗಂಭೀರವಾದ ಪರಿಣಾಮವನ್ನು ಎದುರಿಸಬೇಕಾ ಗಬಹುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಾರ್ವಜನಿಕರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡುವ ವೇಳೆ, ನಗರದಲ್ಲಿ ಕಳೆದ 6 ತಿಂಗಳಿನಿಂದ ದೀರ್ಘಾವಧಿಯ ಗಂಭೀರ ಪ್ರಕರಣಗಳಾದ ಕೊಲೆ, ಮತೀಯ ಗಲಭೆ ವೇಳೆ ಕಲ್ಲು ತೂರಾಟ, ಮತೀಯ ಕೊಲೆ ಯತ್ನ, ಅತ್ಯಾಚಾರ, ಗುಂಪು ಅತ್ಯಾಚಾರ ಮೊದಲಾದ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿ ಕೊಂಡಿರುವ ರೌಡಿ ಶೀಟರ್ಗಳನ್ನು ಹಿಡಿಯುವ ಉದ್ದೇಶದಿಂದ ಪೊಲೀಸರಿಂದ ಪ್ರತ್ಯೇಕ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.
ಆರೋಪಿಗಳನ್ನು ಬಂಧಿಸುವುದು ಒಂದು ಕಡೆಯಾದರೆ, ಆರೋಪಿಗಳು ಸಿಗದಿದ್ದಾಗ ಅವರಿಗೆ ಜಾಮೀನು ನೀಡಿದ ವರ ಮೇಲೆ ಕ್ರಮ ವಹಿಸುವಂತೆ ಪ್ರತಿ ಠಾಣೆಗಳಿಗೂ ಸೂಚನೆ ನೀಡಲಾಗಿತ್ತು. ಅದರಂತೆ 15 ಮಂದಿ ರೌಡಿಗಳನ್ನು ಬಂಧಿಸಿ ಪ್ರಕರಣಗಳ ವಿಚಾರಣೆ ಆರಂಭಿಸಲಾಗಿದೆ. ಅದಲ್ಲದೆ, ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕುವ ಕಾರ್ಯಾಚರಣೆ ಆರಂಭಿಸಲಾಗಿದೆ. ಒಬ್ಬ ಆರೋಪಿಯ ಮನೆಯನ್ನು ಈಗಾಗಲೇ ಕೋರ್ಟ್ ಮೂಲಕ ಮುಟ್ಟು ಗೋಲು ಹಾಕುವ ಪ್ರಕ್ರಿಯೆ ನಡೆದಿದೆ. ಬಾಕಿಯವರಿಗೆ ಶ್ಯೂರಿಟಿ ನೀಡಿ ಜಾಮೀನು ಒದಗಿಸಿದವರ ವಿರುದ್ಧ ಕೋರ್ಟ್ ಮೂಲಕ ಕ್ರಮಕ್ಕೆ ಮನವಿ ಸಲ್ಲಿಕೆಯಾಗಿದೆ. ಅದರಂತೆ 11 ಮಂದಿಯ ವಿರುದ್ಧ 10 ಸಾವಿರದಿಂದ 1 ಲಕ್ಷ ರೂ.ವರೆಗೆ ದಂಡ ವಿಧಿಸಲಾಗಿದೆ. ಶ್ಯೂರಿಟಿ ಒದಗಿಸಿದವರು ದಂಡ ಕಟ್ಟಿದ್ದಾರೆ. ಪ್ರಮುಖ ಪ್ರಕರಣಗಳಲ್ಲಿಯ 17 ಆರೋಪಿಗಳಿಗೆ ಶ್ಯೂರಿಟಿ ನೀಡಿದವವರ ಆಸ್ತಿಪಾಸ್ತಿ ಜಾಮೀನಿಗೆ ಲಗತ್ತಿಸಲಾಗಿದ್ದು, ಈ ಆಸ್ತಿಯನ್ನು ಶ್ಯೂರಿಟಿ ಒದಗಿಸಿದವರು ವ್ಯವಹ ರಿಸುವಂತಿಲ್ಲ. ಅದು ಕೋರ್ಟ್ ಆಸ್ತಿಯಾಗಿದ್ದು, ಆರೋಪಿ ಸಿಕ್ಕಿದ ಬಳಿಕ ಕೋರ್ಟ್ನಿಂದ ಆಸ್ತಿ ಮಟ್ಟುಗೋಲು ತೆರವು ಕಾರ್ಯಾಚರಣೆ ನಡೆಯಲಿದೆ. ಹಾಗಾಗಿ ಗಂಭೀರವಾದ ಪ್ರಕರಣಗಳಲ್ಲಿ ಯಾರಾದರೂ ಜಾಮೀನು ನೀಡುವವರು ಆರೋಪಿ ಕೋರ್ಟ್ಗೆ ಬರುವ ಹಾಗೆ ಮಾಡಿ ಆತ ವಿಚಾರಣೆ ಎದುರಿಸುವಂತೆ ಮಾಡುವುದು ಶ್ಯೂರಿಟಿ ಒದಗಿಸಿದ ವರ ಜವಾಬ್ಧಾರಿಯಾಗಿರುತ್ತದೆ. ಇಲ್ಲವಾದಲ್ಲಿ ಶ್ಯೂರಿಟಿ ನೀಡಿದವರು ಸಮಸ್ಯೆಗೆ ಸಿಲುಕಬೇಕಾಗುತ್ತದೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿಕೊಂಡು 1990ರಿಂದ 2023ರವರೆಗಿನ ಪ್ರಕರಣಗಳಡಿ ಕಳೆದ ಆರು ತಿಂಗಳಲ್ಲಿ 48 ಪ್ರಕರಣಗಳಲ್ಲಿ 38 ರೌಡಿಶೀಟರ್ಗಳನ್ನು ಗುರುತಿಸಿ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ನಕಲಿ ಶ್ಯೂರಿಟಿ ಒದಗಿಸಿದ ಪ್ರಕರಣಗಳೂ ಪತ್ತೆಯಾಗಿದ್ದು, ಅವರ ಮೇಲೆ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ರೌಡಿ ಶೀಟರ್ಗಳಿಗೆ ನಕಲಿ ಶ್ಯೂರಿಟಿಯಡಿ ಎರಡು ಪ್ರಕರಣಗಳು ದಾಖಲಾಗಿವೆ ಎಂದು ಅವರು ಹೇಳಿದರು.







