ಬೆಳ್ತಂಗಡಿ | ಸೌಜನ್ಯಾ ಪರ ಸಹಿತ ಎಲ್ಲ ಅನಧಿಕೃತ ಬ್ಯಾನರ್- ಫ್ಲೆಕ್ಸ್ ಗಳ ತೆರವಿಗೆ ತಾಪಂ ಇಒ ಸೂಚನೆ

ಬೆಳ್ತಂಗಡಿ, ಆ.6: ತಾಲೂಕಿನಲ್ಲಿ ಅನಧಿಕೃತವಾಗಿ ಹಾಕಲಾಗಿರುವ ಫ್ಲೆಕ್ಸ್ ಗಳಿಂದಾಗಿ ಸಮಾಜದಲ್ಲಿ ಅಶಾಂತಿಯುಂಟಾಗುವ ಅಪಾಯವಿದ್ದು, ಈ ಹಿನ್ನೆಲೆಯಲ್ಲಿ ಅಳವಡಿಸಲಾಗಿರುವ ರಾಜಕೀಯ, ಧಾರ್ಮಿಕ ಹಾಗೂ ಸೌಜನ್ಯಾ ಪ್ರಕರಣಗಳಿಗೆ ಸಂಬಂಧಿಸಿದ ಬ್ಯಾನರ್ ಗಳನ್ನು ಹಾಗೂ ಫ್ಲೆಕ್ಸ್ ಗಳನ್ನು ತೆರವುಗೊಳಿಸುವಂತೆ ಪಿಡಿಒಗಳಿಗೆ ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸೂಚಿಸಿದ್ದಾರೆ.
ಈ ಬಗ್ಗೆ ಪೊಲೀಸ್ ವೃತ್ತ ನಿರೀಕ್ಷಕರು ಬರೆದಿರುವ ಪತ್ರದ ಆಧಾರದಲ್ಲಿ ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಈ ಸೂಚನೆ ನೀಡಿದ್ದಾರೆ.
'ಬೆಳ್ತಂಗಡಿ ತಾಲೂಕಿನ ಪ್ರಜ್ಞಾವಂತ ನಾಗರಿಕರು' ಎಂಬ ಹೆಸರಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆಯಲಾಗಿದ್ದು, ಅದರಲ್ಲಿ ತಾಲೂಕಿನಲ್ಲಿ ತನಿಖಾ ಸಂಸ್ಥೆಗಳನ್ನು ಹಾಗೂ ಸೌಜನ್ಯ ಪ್ರಕರಣದ ತೀರ್ಪನ್ನು ಟೀಕಿಸುವ, ಯಾರನ್ನೋ ಅಪರಾಧಿಗಳಾಗಿ ಬಿಂಬಿಸಿಕೊಂಡು ಅಲ್ಲಲ್ಲಿ ರಸ್ತೆ ಬದಿಗಳಲ್ಲಿ ಬ್ಯಾನರ್, ಫ್ಲೆಕ್ಸ್ ಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಸಮಾಜದಲ್ಲಿ ಅಶಾಂತಿಯುಂಟಾಗುವ ಸಾಧ್ಯತೆಯಿದ್ದು, ಅವುಗಳನ್ನು ತೆರವುಗೊಳಿಸುವಂತೆ ಮನವು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಬೆಳ್ತಂಗಡಿ ವೃತ್ತ ನಿರೀಕ್ಷಕರಿಗೆ ಎಸ್ಪಿ ಸೂಚಿಸಿದ್ದಾರೆ. ಅದರ ಆಧಾರದಲ್ಲಿ ವೃತ್ತ ನಿರೀಕ್ಷಕರು ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗೆ ಪತ್ರ ಬರೆದಿದ್ದರು.
ಇದೀಗ ತಾಪಂ ಕಾರ್ಯನಿರ್ವಹಣಾಧಿಕಾರಿಯವರು ಎಲ್ಲ ಗ್ರಾಮಗಳ ಅಭಿವೃದ್ಧಿ ಅಧಿಕಾರಿಗಳಿಗೆ ಅನಧಿಕೃತ ಬ್ಯಾನರ್ ಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದಾರೆ.
ತಾಲೂಕಿನ ಮೂಲೆಮೂಲೆಗಳಲ್ಲಿ ಸೌಜನ್ಯಾಳ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಬ್ಯಾನರ್ ಗಳನ್ನು ಅಳವಡಿಸಲಾಗಿದೆ. ಮತ್ತೊಂದೆಡೆಯಿಂದ ಆ.28ರಂದು ಬೆಳ್ತಂಗಡಿಯಲ್ಲಿ ಬೃಹತ್ ಪ್ರತಿಭಟನೆಗೆ ಸಂಘಟನೆಗಳು ಸಿದ್ಧವಾಗುತ್ತಿದ್ದು ಅದರ ಬ್ಯಾನರ್ ಗಳೂ ಕಾಣಿಸಲಾರಂಭಿಸಿವೆ.
ಸೌಜನ್ಯ ತಾಯಿಯ ಮೇಲೆ ಹಲ್ಲೆ ಯತ್ನದ ಬಳಿಕವಂತೂ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಸೌಜನ್ಯಾ ಪರ ಬ್ಯಾನರ್ ಗಳು ಪ್ರತ್ಯಕ್ಷವಾಗಿವೆ. ಇದೀಗ ಬ್ಯಾನರ್ ತೆರವಿನ ಆದೇಶವನ್ನು ಗ್ರಾಪಂ ಆಡಳಿತಗಳು ಹೇಗೆ ನಿರ್ವಹಿಸಲಿವೆ ಎಂದು ಕಾದು ನೋಡಬೇಕಾಗಿದೆ.







