ಬೆಳ್ತಂಗಡಿ : ಎಂಡಿಎಂಎ ಮಾರಾಟ ಯತ್ನ; ಆರೋಪಿ ಬಂಧನ

ಬೆಳ್ತಂಗಡಿ : ಅಕ್ರಮವಾಗಿ ಮಾರಾಟ ಮಾಡಲು ಕಾರಿನಲ್ಲಿ ಮಾದಕವಸ್ತು ಎಮ್.ಡಿ.ಎಮ್.ಎ ಸಂಗ್ರಹಿಸಿಟ್ಟದ್ದನ್ನು ಬೆಳ್ತಂಗಡಿ ಪೊಲೀಸರು ಪತ್ತೆಹಚ್ಚಿ ಓರ್ವ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾದಕವಸ್ತು ಮಾರಾಟ ಮಾಡಲು ಕಾರಿನಲ್ಲಿ ಸಂಗ್ರಹಿಸಿಟ್ಟಿದ್ದ ಮಂಗಳೂರು ನಗರದ ದೇರಳಕಟ್ಟೆಯ ಕೋಟೆಕಾರು ನಿವಾಸಿ ಉಮರ್ ಶರೀಫ್(42) ಬಂಧಿತ ಆರೋಪಿಯಾಗಿದ್ದು. ಈತನು ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮದಡ್ಕದಲ್ಲಿ ಎಫ್.ಎ ಜ್ಯೂಸ್ ಹೌಸ್ ಅಂಗಡಿ ಹೊಂದಿದ್ದಾನೆ.
ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮದಡ್ಕ ರಸ್ತೆಯಲ್ಲಿ ಜ.3 ರಂದು ಸಂಜೆ 5:45 ಕ್ಕೆ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಆನಂದ್.ಎಮ್ ನೇತೃತ್ವದ ತಂಡ ರೌಡ್ಸ್ ನಲ್ಲಿರುವಾಗ ಅನುಮಾನಾಸ್ಪದವಾಗಿ ರಸ್ತೆ ಪಕ್ಕದಲ್ಲಿ ನಿಂತಿದ್ದ KA-19-MG-4669 ನಂಬರಿನ ಐ20 ಕಾರನ್ನು ಪರಿಶೀಲನೆ ಮಾಡಿದಾಗ ಸದ್ರಿ ಕಾರಿನ ಒಳಗಡೆ ಮಾದಕ ವಸ್ತು ಎಮ್.ಡಿ.ಎಮ್.ಎ ಪತ್ತೆಯಾಗಿದೆ.
ಆರೋಪಿಯು ಕಾರಿನೊಳಗೆ ಇದ್ದ ಖಾಲಿ ಸಿಗರೇಟ್ ಪ್ಯಾಕ್ ನಲ್ಲಿ ಮಾದಕ ಎಮ್.ಡಿ.ಎಮ್.ಎ ಯನ್ನು ಸಣ್ಣಸಣ್ಣ ಪ್ಯಾಕ್ಗಳಾಗಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ. 5,54,800 ರೂ ಮೌಲ್ಯದ 55.48 ಗ್ರಾಂ ಎಮ್.ಡಿ.ಎಮ್.ಎ ಹಾಗೂ 6 ಲಕ್ಷ ರೂಪಾಯಿ ಮೌಲ್ಯದ ಐ20 ಕಾರನ್ನು ವಶಪಡಿಸಿಕೊಂಡಿದ್ದು, ಕಾರು ಮತ್ತು ಮಾದಕವಸ್ತುವಿನ ಮೌಲ್ಯ 11,54,800 ರೂ ಎಂದು ತಿಳಿದು ಬಂದಿದೆ. ಇದು ಬೆಳ್ತಂಗಡಿ ಪೊಲೀಸರು ಎಮ್.ಡಿ.ಎಮ್.ಎ ಮಾದಕ ವಸ್ತುವನ್ನು ಪತ್ತೆಹಚ್ಚಿದ ಮೊದಲ ಪ್ರಕರಣವಾಗಿದ್ದು, ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿನಿ.ಸಿ.ಕೆ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಪೂರ್ ಮಠ ನೇತೃತ್ವದಲ್ಲಿ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಆನಂದ್.ಎಮ್ ತಂಡದ ಎಎಸ್ಐ ತಿಲಕ್ ರಾಜ್, ಪಂಪಾಪತಿ, ಶ್ರೀನಿವಾಸ , ಗಿರೀಶ್,ಪ್ರಕಾಶ್ ಪೂಜಾರಿ,ಜಗದೀಶ್,ಧರಿಶ್, ಯಮನಪ್ಪ, ದುಂಡಪ್ಪ ಹಾಗೂ ಎಫ್ಎಸ್ಎಲ್ ವಿಭಾಗದ ಸೊಕೊ ತಂಡದ ಅರ್ಪಿತಾ,ಕಾವ್ಯ ಶ್ರೀ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.







