ಬೆಳ್ತಂಗಡಿ | ಸೌಜನ್ಯ ಪರ ಹೋರಾಟಗಾರ ಜಯಂತ್ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ; SIT ವರದಿ ನೀಡಲು ಸಮ್ಮತಿ

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದಲ್ಲಿ ಎಸ್.ಐ.ಟಿಯು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿರುವ ಪ್ರಾಥಮಿಕ ವರದಿಯನ್ನು ಕೇಳಿ ಸೌಜನ್ಯ ಪರ ಹೋರಾಟಗಾರ ಜಯಂತ್. ಟಿ ಅವರು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಿದ್ದು, 3923 ಪುಟಗಳ ದಾಖಲೆ ನೀಡಲು ಸಮ್ಮತಿಸಿರುವುದಾಗಿ ಜಯಂತ್. ಟಿ ಪರವಾಗಿ ವಾದ ಮಂಡಿಸಿದ್ದ ಬೆಂಗಳೂರಿನ ಹಿರಿಯ ನ್ಯಾಯವಾದಿಗಳು ಮಾಹಿತಿ ನೀಡಿದ್ದಾರೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್.ಐ.ಟಿಯು ಜಯಂತ್ ಟಿ, ಗಿರೀಶ್ ಮಟ್ಟಣ್ಣವರ್ ಹಾಗೂ ಇತರರಿಗೆ ನಿರಂತರವಾಗಿ ನೋಟೀಸ್ ನೀಡುತ್ತಾ ಬಂದಿತ್ತು. ಹಾಜರಾಗದಿದ್ದರೆ ಬಂಧಿಸುವುದಾಗಿ ನೋಟೀಸ್ ನೀಡಿತ್ತು. ಇದಾದ ಬಳಿಕ ಎಸ್.ಐ.ಟಿಯು ನ್ಯಾಯಾಲಯದ ಮುಂದೆ ಪ್ರಾಥಮಿಕ ವರದಿಯನ್ನು ಸಲ್ಲಿಸಿತ್ತು.
ತಾನು ಆರೋಪಿ ಎಂದು ನೋಟೀಸ್ ನೀಡಿರುವ ಹಿನ್ನಲೆಯಲ್ಲಿ ಎಸ್.ಐ.ಟಿ ಸಲ್ಲಿಸಿರುವ ವರದಿಯನ್ನು ತನಗೆ ನೀಡುವಂತೆ ಆಗ್ರಹಿಸಿ ಜಯಂತ್ ಅವರು ಬೆಳ್ತಂಗಡಿ ನ್ಯಾಯಾಲಯಕ್ಕೆ ತನ್ನ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಅದನ್ನು ನೀಡಲು ನಿರಾಕರಿಸಿತ್ತು. ಎಸ್.ಐ.ಟಿಯು ವರದಿಯನ್ನು ಬಹಿರಂಗಪಡಿಸದಂತೆ ಕೇಳಿಕೊಂಡಿರುವ ಕಾರಣದಿಂದ ಈ ವರದಿಯನ್ನು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿತ್ತು.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹಿರಿಯ ನ್ಯಾಯವಾದಿಯೊಬ್ಬರು ಪ್ರಕರಣದ ಬಗ್ಗೆ ಬೆಳ್ತಂಗಡಿಯ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ಮುಂದೆ ಜಯಂತ್ ಟಿ ಪರವಾಗಿ ವಕಾಲತು ವಹಿಸಿ, ಎಸ್.ಐ.ಟಿ ಸಲ್ಲಿಸಿದ್ದ ವರದಿಯನ್ನು ನೀಡುವಂತೆ ವಿನಂತಿಸಿದ್ದರು.
ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದ ಜಯಂತ್ ಪರ ನ್ಯಾಯವಾದಿಗಳು, ʼಎಸ್.ಐ.ಟಿ ಪ್ರಕರಣದ ತನಿಖೆಯನ್ನು ಸಮರ್ಪಕವಾಗಿ ನಡೆಸುತ್ತಿಲ್ಲ, ಚಿನ್ನಯ್ಯ ಹಾಗೂ ಜಯಂತ್ ತಲೆ ಬುರುಡೆಯನ್ನು ನ್ಯಾಯಾಲಯಕ್ಕೆ ತಂದಿರುವುದು ಯಾವುದೋ ದುರುದ್ದೇಶದಿಂದ ಅಲ್ಲ. ಸದುದ್ದೇಶದಿಂದಲೇ ಇಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಗಮನಸೆಳೆಯಲು ಬಂಗ್ಲೆ ಗುಡ್ಡದ ಕಾಡಿನಿಂದ ಈ ತಲೆ ಬುರುಡೆಯನ್ನು ತಂದಿದ್ದಾರೆ. ಅದಕ್ಕಾಗಿ ಅವರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಜಯಂತ್ ಅವರಿಗೆ 9 ನೋಟೀಸ್ ಗಳನ್ನು ನೀಡಲಾಗಿದ್ದು, ವಿಚಾರಣೆಗೆ ಹಾಜರಾಗದಿದ್ದರೆ ಬಂಧಿಸುವುದಾಗಿ ಹೇಳಿದ್ದಾರೆ. ಹೀಗಿರುವಾಗ ಅವರ ವಿರುದ್ದ ಸಲ್ಲಿಕೆಯಾಗಿರುವ ವರದಿಯನ್ನು ಪಡೆಯುವುದು ಅವರ ಮೂಲಭೂತ ಹಕ್ಕಾಗಿದೆ, ಇದು ಯಾವುದೇ ರೀತಿಯಲ್ಲಿ ದೇಶದ ಭದ್ರತೆಯ ವಿಚಾರ ಅಥವಾ ಇನ್ಯಾವುದೇ ಗುಪ್ತ ವಿಚಾರವಾಗಿರುವುದಿಲ್ಲʼ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು. ಇದಲ್ಲದೆ ಸುಪ್ರೀಂಕೋರ್ಟ್ ಹಾಗೂ ವಿವಿಧ ಹೈಕೋರ್ಟ್ ಗಳು ಈ ಬಗ್ಗೆ ನೀಡಿರುವ ತೀರ್ಪು ಗಳನ್ನು ನ್ಯಾಯಾಲಯದ ಗಮನಕ್ಕೆ ತಂದು, ತಮ್ಮ ಕಕ್ಷಿದಾರರಿಗೆ ಕಾನೂನಿನ ರಕ್ಷಣೆ ಪಡೆಯಲು ಈ ದಾಖಲೆಗಳು ಅಗತ್ಯವಾಗಿದೆ ಎಂಬ ವಾದವನ್ನು ಮಂಡಿಸಿದ್ದಾರೆ. ಈ ವಾದವನ್ನು ಪುರಸ್ಕರಿಸಿದ ನ್ಯಾಯಾಲಯ ಎಸ್.ಐ.ಟಿ ಅಪರಾಧ ಸಂಖ್ಯೆ 30/2025ಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯನ್ನು ಕಕ್ಷಿದಾರರಿಗೆ ನೀಡುವಂತೆ ಆದೇಶ ನೀಡಿದೆ.







