ಬಿಜೆಪಿ ಸರಕಾರ ದೇಶದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕಾರ್ಯಾಚರಣೆ ನಡೆಸುತ್ತಿದೆ: ಸಚಿವ ಸಂತೋಷ್ ಲಾಡ್

ಬಂಟ್ವಾಳ : ಹಿಂದೂ, ಹಿಂದುತ್ವ ಬೊಬ್ಬಿಡುವ ಬಿಜೆಪಿಗರು ತಾಕತ್ತಿದ್ದರೆ ಮೇಲ್ವರ್ಗದವರು ಕೆಳ ವರ್ಗದವರೊಂದಿಗೆ ವೈವಾಹಿಕ ಸಂಬಂಧ ಬೆಳೆಸಿಕೊಳ್ಳುವಂತೆ ವ್ಯವಸ್ಥೆ ರೂಪಿಸಲಿ. ಕೆಳವರ್ಗದ ಸ್ವಾಮಿಗಳನ್ನು ಕರೆಸಿ ಪೂಜೆ-ಹವನ ಮಾಡಿಸಲಿ, ಈ ಮೂಲಕ ಅವರು ತಮ್ಮ ಹಿಂದುತ್ವದ ನೈಜ ರೂಪ ಅನಾವರಣಗೊಳ್ಳಲಿ ಎಂದು ರಾಜ್ಯ ಕಾರ್ಮಿಕ ಇಲಾಖಾ ಸಚಿವ ಸಂತೋಷ್ ಲಾಡ್ ಸವಾಲೆಸೆದರು.
ಯುವ ಕಾಂಗ್ರೆಸ್ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ, ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಮತಗಳ್ಳತನ ವಿರುದ್ಧ ಜನಜಾಗೃತಿ ಹೋರಾಟಕ್ಕೆ ಬೆಂಬಲವಾಗಿ ಕೈಕಂಬ ಪೊಳಲಿ ದ್ವಾರದ ಬಳಿಯಿಂದ ಬಿ.ಸಿ.ರೋಡ್ ತನಕ ನಡೆದ ಪಂಜಿನ ಮೆರವಣಿಗೆ ಬಳಿಕ ಆಡಳಿತ ಸೌಧದ ಬಳಿ ನಡೆದ ಸಭಾ ಕಾರ್ಯಕ್ರಮ ವನ್ನುದ್ದೇಶಿಸಿ ಮಾತನಾಡಿದ ಅವರು, ನಾಚಿಕೆ ಮಾನ ಮರ್ಯಾದೆ ಇಲ್ಲದ ಬಿಜೆಪಿ ಸರಕಾರ ದೇಶದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಮತಗಳ್ಳತನದ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ.
ಮುಸಲ್ಮಾನ, ಪಾಕಿಸ್ತಾನ, ಅಫಘಾನಿಸ್ತಾನ ಈ ಮೂರು ಪದಗಳನ್ನು ಬಿಟ್ರೆ ಬಿಜೆಪಿಗರಿಗೆ ರಾಜಕೀಯ ನಡೆಸಲು ಬೇರೆ ಯಾವುದೇ ವಿಷಯಗಳು ಇಲ್ಲ ಎಂದು ಆರೋಪಿಸಿದರು.
ಮುಂಬರುವ ಬಿಹಾರ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಬೀತಿಯಲ್ಲಿ ಪ್ರಧಾನಿ ವ್ಯಾಪಕ ಅನುದಾನ ನೀಡುವ ಭರವಸೆ ನೀಡುತ್ತಿದ್ದಾರೆ. ಪಹಲ್ಗಾಂ ದಾಳಿ ಸಂದರ್ಭ ಮೋದಿ ನೇತೃತ್ವದ ಕೇಂದ್ರ ಸರಕಾರ ಒಂದೇ ಒಂದು ಏರ್ ಕ್ರಾಫ್ಟ್ ಮಾಡಿಲ್ಲ. ವಿಮಾನಗಳ ಟಿಕೆಟ್ ಬೆಲೆಯನ್ನೂ ಕಡಿಮೆ ಮಾಡಿಲ್ಲ. ತೊಂಭತ್ತು ಶೇಕಡಾ ಹಿಂದುಗಳೇ ಇದ್ದರೂ ಹಿಂದುಗಳ ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನಾವು ಸ್ವಂತ ಹಣದಿಂದ ವಿಮಾನ ಗೊತ್ತುಪಡಿಸಿ ಸಂತ್ರಸ್ತರನ್ನು ಕರೆ ತಂದಿದ್ದೇವೆ ಎಂದ ಅವರು ಮೋದಿ ಅಧಿಕಾರಕ್ಕೇರಿದ ಬಳಿಕ ದೇಶದಲ್ಲಿ ಯಾವುದೇ ರೀತಿಯ ಅಭಿವೃದ್ದಿ ಪರ ಚರ್ಚೆಗಳೇ ನಡೀತಿಲ್ಲ. ದೇಶದ ಜನತೆಯನ್ನು ಲೂಟಿ ಹೊಡೆದು ದೇಶವನ್ನು ವಿನಾಶದತ್ತ ಕೊಂಡೊಯ್ಯುತ್ತಿದೆ ಎಂದು ಆರೋಪಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಮಾತನಾಡಿ, ಮನಮೋಹನ್ ಸಿಂಗ್ ಸರಕಾರ ದೇಶದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಮೋದಿ ಯಾವ ಭರವಸೆಯನ್ನೂ ಈಡೇರಿಸಿಲ್ಲ, ಮನಮೋಹನ್ ಸಿಂಗ್ ಆಡಳಿತಾವಧಿಯಲ್ಲಿ ಜಗತ್ತಿನಾದ್ಯಂತ ಆರ್ಥಿಕ ಸ್ಥಿತಿ ಹದಗೆಟ್ಟಿದ್ದಾಗಳಲೂ ದೇಶದ ಒಂದೇ ಒಂದು ಬ್ಯಾಂಕ್ ಕೂಡಾ ದಿವಾಳಿಯಾಗಿರಲಿಲ್ಲ ಎಂಬುದು ಗಮನಾರ್ಹ ಎಂದ ಅವರು ದೇಶದ ವಿವಿಧೆಡೆ ನಡೆದಿರುವ ಮತ ಕಳ್ಳತನ ಪ್ರಕರಣದಂತೆ ಬಂಟ್ವಾಳದ ಅಜ್ಜಿಬೆಟ್ಟು ಬೂತ್ ಸಹಿತ ಹಲವೆಡೆ ಇಂತಹ ಪ್ರಕರಣ ನಡೆದಿರುವುದು ತಿಳಿದುಬಂದಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮುಹಮ್ಮದ್, ಕರಾವಳಿ ಅಭಿವೃದ್ದಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ರಾಜ್ಯ ಬೀಜ ಮತ್ತು ಸಾವಯವ ದೃಢೀಕರಣ ಸಂಸ್ಥೆಯ ಅಧ್ಯಕ್ಷೆ ಲಾವಣ್ಯ ಬಲ್ಲಾಳ್ ಅತಿಥಿಗಳಾಗಿ ಭಾಗವಹಿಸಿದ್ದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಅಂಚನ್, ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಿಯೂಷ್ ರೋಡ್ರಿಗಸ್, ಬಿ.ಎಂ.ಅಬ್ಬಾಸ್ ಅಲಿ, ಸುದೀಪ್ ಕುಮಾರ್ ಶೆಟ್ಟಿ, ಪದ್ಮಶೇಖರ ಜೈನ್, ಬೇಬಿ ಕುಂದರ್, ಫಾರೂಕ್ ಬಯಬೆ, ವಿನಯಕುಮಾರ್ ಸಿಂಧ್ಯಾ, ಪ್ರಜ್ವಲ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲು ಸ್ವಾಗತಿಸಿ, ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.







