ಬಂಟ ಸಮುದಾಯಕ್ಕೂ ಮೀಸಲಾತಿ ಅಗತ್ಯವಿದ್ದು, ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ನಡೆಯಲಿ: ಉಡುಪಿ ಡಿಸಿ ಡಾ.ವಿದ್ಯಾಕುಮಾರಿ
ಮಂಗಳೂರು: ಬಂಟರ ಮಾತೃಸಂಘದ ಗಣೇಶೋತ್ಸವ ಧಾರ್ಮಿಕ ಸಭೆ

ಮಂಗಳೂರು, ಸೆ.20: ಹೆಣ್ಣುಮಕ್ಕಳು ತಮ್ಮ ಕಾಲ ಮೇಲೆ ನಿಲ್ಲಬೇಕು. ತನ್ನ ಸಾಮರ್ಥ್ಯವನ್ನು ಸಮಾಜಕ್ಕೆ ಧಾರೆ ಎರೆಯುವ ರೀತಿ ಅವಳಿಗೆ ವಿದ್ಯಾಭ್ಯಾಸ ದೊರೆಯಬೇಕು. ತಮ್ಮ ಮನೆಯ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಹೆತ್ತವರು ಮುಂದಾಗಬೇಕು. ಸರಕಾರಿ ಹುದ್ದೆಯಲ್ಲಿ ಬಂಟರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಐಎಎಸ್ ಪರೀಕ್ಷೆ ಬರೆಯಲು ಹಿಂದುಳಿದ ವರ್ಗಗಳ ಮೀಸಲಾತಿ ಕೇಂದ್ರ ಸರಕಾರದಿಂದ ಇದೆ. ಆದರೆ ಬಂಟ ಸಮುದಾಯಕ್ಕೆ ಲಭ್ಯವಿಲ್ಲ. ಇದು ಅಗತ್ಯವಾಗಿ ಬೇಕಾಗಿದೆ. ಅದಕ್ಕಾಗಿ ನಮ್ಮ ಬಂಟ ಸಮಾಜ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಹೇಳಿದ್ದಾರೆ.
ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ದ.ಕ., ಉಡುಪಿ ಹಾಗೂ ಕಾಸರಗೋಡಿನ ವಿವಿಧ ಬಂಟರ ಸಂಘಗಳ ಸಹಭಾಗಿತ್ವದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಬಂಟ್ಸ್ ಹಾಸ್ಟೆಲ್ ನ ಓಂಕಾರ ನಗರದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ’ಬಂಟ ಸಮುದಾಯ ಇಂದು ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳ ಅದೆಷ್ಟೋ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಶ್ರಮಿಸುತ್ತಿದೆ. ಕೇವಲ ಸಮುದಾಯದ ಹಿತವನ್ನು ಕಾಯದೆ ಸಮಾಜದ ಎಲ್ಲಾ ವರ್ಗಗಳ ಜನರನ್ನು ಒಂದೇ ರೀತಿ ನೋಡುವ ಬಂಟರು ಇದೇ ಕಾರಣಕ್ಕೆ ಸಮಾಜದಲ್ಲಿ ಗುರುತಿಸಲ್ಪಡುತ್ತಿದ್ದಾರೆ. ಬಂಟರ ಸಂಘವು ಮುಂದೆಯೂ ಇದೇ ರೀತಿ ಸಮಾಜವನ್ನು ಒಗ್ಗೂಡಿಸಿಕೊಂಡು ಗಣೇಶೋತ್ಸವ ಆಚರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಹಿರಿಯ ವೈದ್ಯ ಡಾ.ಯು.ಮಾಧವ ಶೆಟ್ಟಿ, ಯಕ್ಷಗಾನ ಕ್ಷೇತ್ರದ ಕಿಶನ್ ಹೆಗ್ಡೆ, ಸಂಗೀತ ಕ್ಷೇತ್ರದ ವಿದ್ವಾನ್ ಬಾಬು ರೈಯವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತಾಡಿದ ಕಿಶನ್ ಹೆಗ್ಡೆ, ಗೌರವ ಸನ್ಮಾನದಿಂದ ನಮ್ಮ ಜವಾಬ್ದಾರಿಗಳು ಇನ್ನಷ್ಟು ಹೆಚ್ಚಾಗುತ್ತವೆ. ನಮ್ಮ ಶ್ರಮವನ್ನು ನೀವು ಗುರುತಿಸಿದ್ದೀರಿ, ಇನ್ನಷ್ಟು ಸಾಧನೆ ಮಾಡಲು ಪ್ರೆರೇಪಣೆ ನೀಡಿದ್ದೀರಿ. ಯಕ್ಷಗಾನ ರಂಗದಲ್ಲಿ ಇನ್ನಷ್ಟು ದುಡಿಯಲು ಇಂತಹ ಸಾರ್ವಜನಿಕ ಸನ್ಮಾನಗಳು ಉತ್ತೇಜನ ನೀಡುತ್ತವೆ ಎಂದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ, ಸಿದ್ಧಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮಂಗಳೂರು ಯುನಿವರ್ಸಿಟಿ ಪ್ರೊ ಚಾನ್ಸೆಲರ್ ಡಾ.ಎ.ಶ್ರೀನಿವಾಸ್ ರಾವ್, ಕೆನರಾ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ರಂಗನಾಥ್ ಭಟ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಝೋನಲ್ ಹೆಡ್ ರೇಣು ಕೆ. ನಾಯರ್, ರಾಷ್ಟ್ರೀಯ ಕೃಷಿ ಪ್ರಶಸ್ತಿ ಪುರಸ್ಕೃತ ಕಡಮಜಲು ಸುಭಾಸ್ ರೈ, ಬಂಟರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಕೆ.ಎಮ್ ಶೆಟ್ಟಿ, ಕೋಶಾಧಿಕಾರಿ ರಾಮಮೋಹನ್ ರೈ, ಶ್ರೀ ಸಿದ್ದಿ ವಿನಾಯಕ ಪ್ರತಿಷ್ಠಾನದ ಟ್ರಸ್ಟಿಗಳಾದ ಕೃಷ್ಣ ಪ್ರಸಾದ್ ರೈ, ನಿಟ್ಟೆಗುತ್ತು ರವಿರಾಜ ಶೆಟ್ಟಿ, ಜಿಲ್ಲಾ ಸಂಚಾಲಕ ಬಿ.ನಾಗರಾಜ ಶೆಟ್ಟಿ, ಎಂ.ಸಂಜೀವ ಶೆಟ್ಟಿ ಕಾಸರಗೋಡು, ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಸಂಚಾಲಕ ಬಿ.ನಾಗರಾಜ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.
ಅಭಿಷೇಕ್ ಶೆಟ್ಟಿ, ಕವಿತಾ ಪಕ್ಕಳ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣಪ್ರಸಾದ್ ರೈ ಬೆಳ್ಳಿಪಾಡಿ ವಂದಿಸಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.