ಕಾರಿಗೆ ಇನ್ನೊಂದು ಕಾರು ಢಿಕ್ಕಿ: ಮಾತಿನ ಚಕಮಕಿ, ಪರಸ್ಪರ ಹಲ್ಲೆ; ದೂರು, ಪ್ರತಿ ದೂರು ದಾಖಲು

ಉಳ್ಳಾಲ: ಕಾರು ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದಿರುವ ಕಾರಣಕ್ಕಾಗಿ ಮಾತಿನ ಚಕಮಕಿ, ಹೊಡೆದಾಟ ನಡೆದಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ತಲಪಾಡಿ ಬಳಿ ಶನಿವಾರ ರಾತ್ರಿ ಸಂಭವಿಸಿರುವುದು ವರದಿಯಾಗಿದೆ.
ತಲಪಾಡಿಯ ಟೋಲ್ಗೇಟ್ ಬಳಿ ಸೈಯದ್ ತ್ವಾಹ ಎಂಬವರು ಪ್ರಯಾಣಿಸುತ್ತಿದ್ದ ಕಾರನ್ನು ಹಿಂದಿಕ್ಕಿ ಇನ್ನೊಂದು ಕಾರಿನ ಚಾಲಕ ಮನ್ವಿತ್ ಎಂಬವರು ಅಪಾಯಕಾರಿಯಾಗಿ ಮುಂದೆ ನುಗ್ಗಿಸಲು ಯತ್ನಿಸಿದ ಎನ್ನಲಾಗಿದೆ.
ಆಗ ತ್ವಾಹ ಕಾರಿಗೆ ಇನ್ನೊಂದು ಕಾರು ಸ್ಪರ್ಶಿಸಿದೆ ಎಂದು ತಿಳಿದು ಬಂದಿದೆ. ಬಳಿಕ ಇದೇ ವಿಚಾರದಲ್ಲಿ ಎರಡು ಕಾರಿನ ಚಾಲಕರ ನಡುವೆ ಮಾತಿನ ಚಕಮಕಿ ಉಂಟಾಗಿದ್ದು, ಪರಸ್ಪರ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ.
ಘಟನೆಯ ವಿವರ: ಸೈಯದ್ ತ್ವಾಹ ಎಂಬವರು ತನ್ನ ತಾಯಿಯೊಂದಿಗೆ ಕಾರಿನಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಕುಂಜತ್ತೂರು ನಿಂದ ಕಲ್ಲಾಪುವಿಗೆ ಹೋಗುತ್ತಿದ್ದ ಈ ಘಟನೆ ನಡೆದಿದ್ದು ಈ ಬಗ್ಗೆ ಅವರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ.
ಸೆಯ್ಯದ್ ತ್ವಾಹ ಅವರು ತನ್ನ ತಾಯಿಯೊಂದಿಗೆ ಮಾರುತಿ ಕಾರ್ ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಟೋಲ್ ಗೇಟ್ ಬಳಿ ಒಮ್ಮೆಲೇ ದಾಟಿ ಬಂದ ಶಿಫ್ಟ್ ಕಾರು ಮಾರುತಿ ಕಾರ್ ಗೆ ಹಿಂದಿನಿಂದ ಢಿಕ್ಕಿ ಹೊಡೆದು ಮುಂದಕೆ ಸಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ತಾನು ಸ್ವಲ್ಪ ಮುಂದೆ ಹೋಗುವಷ್ಟರಲ್ಲಿ ಆ ಕಾರಿನವರು ತನ್ನ ಕಾರನ್ನು ನಿಲ್ಲಿಸಲು ಸೂಚಿಸಿದರು. ಕಾರಲ್ಲಿದ್ದ ಇಬ್ಬರು ಗಂಡಸರು ಹಾಗೂ ಇಬ್ಬರು ಹೆಂಗಸರು ಇಳಿದು ನನಗೆ ಹಾಗೂ ನನ್ನ ಕಾರಲ್ಲಿದ್ದ ನನ್ನ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಸಿ, ಕೊಲೆ ಬೆದರಿಕೆಯೊಡ್ಡಿದ್ದಾರೆ. ಇದರ ಬಳಿಕ ಕೊಲ್ಯ ಎಂಬಲ್ಲಿ ವಾಹನದ ಮೇಲೆ ದಾಳಿ ಮಾಡಿ ನನಗೆ ಅವಾಚ್ಯ ಶಬ್ದಗಳಿಂದ ಬೈದು ನನ್ನ ಹಾಗೂ ನನ್ನ ತಾಯಿಯ ಮೇಲೆ ಹಲ್ಲೆಗೈದಿದ್ದಾರೆ ಎಂದು ತ್ವಾಹ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಶಿಫ್ಟ್ ಕಾರ್ ನಲ್ಲಿ ಪ್ರಯಾಣಿಸುತ್ತಿದ್ದ ಶಕ್ತಿನಗರದ ಬಿಂದ್ಯಾ ದೂರು ನೀಡಿದ್ದು, ಕಾರಿನಲ್ಲಿ ತಾನು, ರಕ್ಷಾ, ರೀಷ್ಮಾ ಜೀವನ್, ಮನ್ವಿತ್ ಪ್ರಯಾಣಿಸುತ್ತಿದ್ದೆವು. ಟೋಲ್ ಗೇಟ್ ಬಳಿ ಹಠಾತ್ತನೆ ಬ್ರೇಕ್ ಹೊಡೆದು ನಿಂತಿದ್ದ ಮಾರುತಿ 800 ಕಾರಿನ ಹಿಂಬಂದಿಗೆ ನಮ್ಮ ಕಾರು ಢಿಕ್ಕಿ ಹೊಡೆದಿದೆ . ಬಳಿಕ ನಮ್ಮನ್ನು ಬೆನ್ನಟ್ಟಿ ಬಂದ ಮಾರುತಿ 800ನ ಚಾಲಕನು ತಲಪಾಡಿಯ ಮರೋಳಿ ಬಾರ್ ಬಳಿ ನಮ್ಮ ಕಾರನ್ನ ಅಡ್ಡ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ರುವುದಾಗಿ ಆರೋಪಿಸಿದ್ದಾರೆ. ಈ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ಅಪರಿಚಿತರು ಹಲ್ಲೆ ನಡೆಸಿ ರುವುದಾಗಿ ಪ್ರತಿದೂರಿ ನಲ್ಲಿ ತಿಳಿಸಿದ್ದಾರೆ ಎರಡೂ ಕಡೆಯವರು ನೀಡಿರುವ ದೂರಿನಂತೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.







