ಪುನೀತ್ ಕೆರೆಹಳ್ಳಿ ವಿರುದ್ಧ ಮಂಗಳೂರಿನಲ್ಲಿ ಪ್ರಕರಣ ದಾಖಲು

ಪುನೀತ್ ಕೆರೆಹಳ್ಳಿ
ಮಂಗಳೂರು: ಬೆಂಗಳೂರಿನ ಕೆಲವು ಪ್ರದೇಶಗಳ ಹೆಸರುಗಳನ್ನು ಉಲ್ಲೇಖಿಸಿ ಪುನೀತ್ ಕೆರೆಹಳ್ಳಿ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ನೀಡಿದ್ದ ಹೇಳಿಕೆಯ ವಿರುದ್ಧ ನಗರದ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉರ್ವ ಪೊಲೀಸ್ ಠಾಣೆಯಲ್ಲಿ ಸೋಶಿಯಲ್ ಮೀಡಿಯಾ ಮೊನಿಟರಿಂಗ್ ಕರ್ತವ್ಯ ನಿರ್ವಹಿಸಿಕೊಂಡಿದ್ದ ಸಿಬ್ಬಂದಿ ಜೂ.3ರಂದು ರಾತ್ರಿ 8ಕ್ಕೆ ಫೇಸ್ಬುಕ್ ಪರಿಶೀಲಿಸುತ್ತಿರುವಾಗ Puneeth Kerehalli ಎಂಬಾತ ತನ್ನ ಫೇಸ್ಬುಕ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದ ರೀಲ್ಸ್ನ ವಿರುದ್ಧ ದೂರು ನೀಡಿದ್ದಾರೆ.
ಬೆಂಗಳೂರಿನ ಕೆಲವು ಪ್ರದೇಶಗಳನ್ನು ಉದ್ದೇಶಿಸಿ "ಒಂದು ಮುಸ್ಲಿಂ ಏರಿಯಾದೊಳಗಡೆ ಹೋಗಿ ಆಚೆ ಬರಕ್ಕೆ ಆಗುತ್ತಾ? ಒಂದು ಪಕ್ಷ ಪಾಕಿಸ್ತಾನದ ಬಾರ್ಡರ್ ದಾಟಿ ಹೋಗಿ ಬರಬಹುದೇನೋ? ಆದರೆ ಇವತ್ತು ಬೆಂಗಳೂರಿನ ಕೆಲವು ಏರಿಯಾಗಳ ಒಳಗಡೆ ಹೋಗಿ ಹೊರಗಡೆ ಬರಕ್ಕೆ ಆಗಲ್ಲ. ಅಂತಹಾ ಪರಿಸ್ಥಿತಿ ಇದೆ. ಮುಸಲ್ಮಾನರು ಇರುವ ಏರಿಯಾಗಳು ಮಿನಿ ಪಾಕಿಸ್ತಾನ ಆಗಿ ಹೋಗಿವೆ. ಅಲ್ಲಿ ಗೋಹತ್ಯೆಯಂತಹ ಕಾನೂನುಬಾಹಿರ ಚಟುವಟಿಕೆಗಳು ನಡೀತಾ ಇವೆ. ಇದೇ ರೀತಿ ಮುಂದೊಂದು ದಿನ ಇದೊಂದೆ ಅಲ್ಲ ಎಲ್ಲಾ ರೀತಿಯ ಕಾನೂನುಬಾಹಿರ ಚಟುವಟಿಕೆಗಳನ್ನು ಅವರು ಮಾಡ್ತಾರೆ. ನಾವು ಷಂಡರಂತೆ, ನಪುಂಸಕರಂತೆ ನೋಡಿಕೊಂಡು ಇರ್ತೀವಿ" ಇತ್ಯಾದಿಯಾಗಿ ಹೇಳಿ ಎರಡು ಸಮುದಾಯಗಳ ನಡುವೆ ಕೋಮು ಪ್ರಚೋದನೆ ಉಂಟು ಮಾಡುವಂತೆ ರೀಲ್ಸ್ ಮಾಡಿ ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡಲು ಪ್ರಯತ್ನಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.





