ಚಮ್ಮನಾಡ್ ಮಾಹಿಂಕಾ ತರವಾಡ್ ಪ್ರತಿಷ್ಠಾನದಿಂದ 16ನೇ ಸಾಮಾನ್ಯ ಸಭೆ ಮತ್ತು ಸ್ಥಾಪನಾ ದಿನಾಚರಣೆ

ತಲಪ್ಪಾಡಿ : ಚಮ್ಮನಾಡ್ ಮಾಹಿಂಕಾ ತರವಾಡ್ ಪ್ರತಿಷ್ಠಾನದ 16ನೇ ಸಾಮಾನ್ಯ ಸಭೆ ಹಾಗೂ ಸ್ಥಾಪನಾ ದಿನಾಚರಣೆ ಜನವರಿ 26ರಂದು ತಲಪ್ಪಾಡಿಯ ಕಿಯಾಂಝಾ ಗಾರ್ಡನ್ ನಲ್ಲಿ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಸುಮಾರು 600 ಟ್ರಸ್ಟಿಗಳು ಹಾಗೂ ಅವರ ಕುಟುಂಬದ ಸದಸ್ಯರು ಭಾಗವಹಿಸಿದ್ದರು.
ಚಮ್ಮನಾಡ್ ಮಾಹಿಂಕಾ ತರವಾಡ್ ಕುಟುಂಬಕ್ಕೆ ಮೈಸೂರು ಆಡಳಿತಗಾರರ ಆಡಳಿತದ ಸಂದರ್ಭದಲ್ಲಿ ರಾಜ ಸಂಸ್ಥಾನದಿಂದ ವರ್ತಕರಾಗಿ ನೇಮಕಗೊಂಡಿದ್ದ ಚಮ್ಮನಾಡ್ ಮಾಹಿಂಕಾರ ಸುಮಾರು 250 ವರ್ಷಗಳ ಮೂಲವಿದೆ. 1750ರಲ್ಲಿ ಜನಿಸಿ, 1815ರಲ್ಲಿ ನಿಧನರಾದ ಚಮ್ಮನಾಡ್ ಮಾಹಿಂಕಾರ ಪರಂಪರೆಯು 14ನೇ ತಲೆಮಾರಿಗೂ ಮುಂದುವರಿದುಕೊಂಡು ಬಂದಿದೆ. ಶಿಕ್ಷಣಕ್ಕೆ ಆದ್ಯತೆ ನೀಡುವುದಕ್ಕೆ ಹೆಸರಾಗಿರುವ ಈ ಕುಟುಂಬವು, ಸದ್ಯ ತನ್ನ ಪ್ರತಿಷ್ಠಾನದ ಮೂಲಕ ಯುವ ಸದಸ್ಯರ ಶೈಕ್ಷಣಿಕ ಅಭಿವೃದ್ಧಿಯತ್ತ ಸಕ್ರಿಯವಾಗಿ ಕೆಲಸ ಮಾಡುತ್ತಿದೆ.
ಕಾರ್ಯಕ್ರಮವನ್ನು ಪ್ರತಿಷ್ಠಾನದ ಅಧ್ಯಕ್ಷ ಡಾ. ಸಿ.ಪಿ.ಹಬೀಬ್ ರಹಮಾನ್ ಉದ್ಘಾಟಿಸಿದರು. ಅವರು ತಮ್ಮ ಭಾಷಣದಲ್ಲಿ ಕುಟುಂಬದ ಸದಸ್ಯರ ಹಣಕಾಸು ಸ್ಥಿರತೆಯ ಮಹತ್ವದ ಕುರಿತು ಒತ್ತಿ ಹೇಳಿದರು. ಇದರೊಂದಿಗೆ ಮಾಹಿಂಕಾ ಕ್ಯಾಪಿಟಲ್ ಪೂಲ್, ಮಾಹಿಂಕಾ ವರ್ಚುಯಲ್ ಸಿಟಿ ಹಾಗೂ ಮಹಿಂಕಾ ಬಿಸಿನೆಸ್ ಮತ್ತು ಡ್ವೆಲ್ಲಿಂಗ್ ಸೆಂಟರ್ ಒಳಗೊಂಡಂತೆ ಭವಿಷ್ಯದ ಯೋಜನೆಗಳನ್ನು ಹಂಚಿಕೊಂಡರು.
ಕಾರ್ಯದರ್ಶಿ ಬಿ.ಎಂ.ಸಾದಿಕ್ ಅವರ ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ನಂತರ, ಅಗಲಿದ ಕುಟುಂಬದ ಸದಸ್ಯರಿಗೆ ಕಾರ್ಯದರ್ಶಿ ಎಸ್.ಪಿ.ಎಂ. ಶರಫುದ್ದೀನ್ ಸಂತಾಪ ವ್ಯಕ್ತಪಡಿಸಿದರು. ಪ್ರಧಾನ ಕಾರ್ಯದರ್ಶಿ ಎಂ.ಎ.ಸಲಾಹುದ್ದೀನ್ ಅವರು ವಾರ್ಷಿಕ ವರದಿಯನ್ನು ಮಂಡಿಸಿದರು. ಖಜಾಂಚಿ ಪಿ.ಸಿ.ಹಾಶಿರ್ ಪ್ರತಿಷ್ಠಾನದ ಹಣಕಾಸು ಖಾತೆಗಳ ಕುರಿತು ವಿವರಿಸಿದರು. ಸಭೆಯನ್ನುದ್ದೇಶಿಸಿ ಉಪಾಧ್ಯಕ್ಷ ಟಿ.ಸಿ.ಎಂ.ಶರೀಫ್ ಹಾಗೂ ಕಾರ್ಯದರ್ಶಿ ಜಲೀಲ್ ಮುಹಮ್ಮದ್ ಮಾತನಾಡಿದರು.
ಸೀಯಾಲ್ ಅಬ್ದುಲ್ ಕರೀಂ ಅವರು ಕೌಟುಂಬಿಕ ದಾಖಲೆಗಳ ಸುಧಾರಣೆಯ ಅಗತ್ಯ ಹಾಗೂ ಚಮ್ಮನಾಡ್ ಮಾಹಿಂಕಾ ತರವಾಡ್ ಸದಸ್ಯರ ದೊಡ್ಡ ಸಮಾವೇಶವನ್ನು ಆಯೋಜಿಸುವ ಸಾಧ್ಯತೆಯ ಕುರಿತು ಯೋಚಿಸಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದ ಆತಿಥ್ಯವನ್ನು ಮಂಗಳೂರಿನ ಪ್ರತಿಷ್ಠಿತ ಉದ್ಯಮಿ ಪಿ.ಬಿ.ಅಬ್ದುಲ್ ಹಮೀದ್ ವಹಿಸಿದ್ದರು. ನಂತರ ಇಹ್ತಿಶಾಮ್ ಅಹ್ಮದ್ ರಫಾಯಿ ಅವರು ವಂದಿಸಿದರು. ಸಂಗೀತ ಪ್ರದರ್ಶನ ಹಾಗೂ ಮಕ್ಕಳು, ವಯಸ್ಕರಿಗಾಗಿ ಆಯೋಜಿಸಲಾಗಿದ್ದ ಮನರಂಜನೆ ಆಟಗಳೊಂದಿಗೆ ಕಾರ್ಯಕ್ರಮವು ಸಮಾರೋಪಗೊಂಡಿತು.