ಡಿ.20ರಿಂದ ಕರಾವಳಿ ಉತ್ಸವ; ಪಿಲಿಕುಳ ಪರ್ಬ ವಿಶೇಷ ಆಕರ್ಷಣೆ

ಮಂಗಳೂರು: ಪ್ರತೀ ವರ್ಷದಂತೆ ಈ ವರ್ಷವೂ ಕೂಡ ವೈವಿಧ್ಯಮಯವಾದ ವಸ್ತು ಪ್ರದರ್ಶನ, ಆಹಾರೋತ್ಸವ, ಕ್ರೀಡೆ ಹಾಗೂ ಸಾಂಸ್ಕೃತಿಕ, ಮನರಂಜನೆ ಯನ್ನು ನೀಡುವುದರೊಂದಿಗೆ ಕರಾವಳಿ ಉತ್ಸವ ಡಿಸೆಂಬರ್ 20 ರಿಂದ ಪ್ರಾರಂಭವಾಗಲಿದ್ದು, ಜನವರಿ 31 ವರೆಗೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಆಕರ್ಷಕ ಸಾಂಸ್ಕೃತಿಕ ಮತ್ತು ಸಾಹಸಮಯ ಕಾರ್ಯಕ್ರಮ ಗಳನ್ನುಆಯೋಜಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಪಿಲಿಕುಳದಲ್ಲಿ ಡಿ.20ರಿಂದ ಜ.4ರವರೆಗೆ ಪಿಲಿಕುಳ ಹಬ್ಬ ನಡೆಯಲಿದೆ.
ಇದೇ ಸಂದರ್ಭದಲ್ಲಿ ಖ್ಯಾತ ಗಾಯಕರಾದ ಕೈಲಾಸ್ ಕೇರ್, ವಿಜಯ ಪ್ರಕಾಶ್ ರಿಂದ ಸಂಗೀತ ಸಂಜೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಮುಖ್ಯ ಕಾರ್ಯಕ್ರಮ ನಡೆಯಲಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿದ ಭಾರತೀಯ ಕಲಾವಿದರಿಂದ ವೈವಿಧ್ಯಮಯವಾದ ಸಾಂಸ್ಕೃತಿಕ ಮನರಂಜನಾ ಪ್ರದರ್ಶನವನ್ನು ಆಯೋಜಿಸಲಾಗಿದೆ ಹಾಗೂ ಜಿಲ್ಲೆಯ ಕಡಲ ತೀರಗಳಿಗೆ ಪ್ರವಾಸಿಗರನ್ನು ಆಕರ್ಷಿಸಲು. ಜಿಲ್ಲೆಯ ಬೀಚ್ಗಳಲ್ಲಿ ಕರಾವಳಿ ಉತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ಉತ್ಸವದ ಅಂಗವಾಗಿ ಕದ್ರಿ ಪಾರ್ಕ್ನಲ್ಲಿ ಕಲಾ ಪರ್ಬ ಕಾರ್ಯಕ್ರಮ, ಫಲಪುಷ್ಪ ಪ್ರದರ್ಶನ, ಸ್ವೀಟ್ ಫುಡ್ ಫೆಸ್ಟಿವಲ್ ಹಾಗೂ ವಿವಿಧ ಜಾತಿಯ ಶ್ವಾನಗಳ ಪ್ರದರ್ಶನ ನಡೆಯಲಿದೆ.ಮಂಗಳೂರು ನಗರದಲ್ಲಿ ಚಲನಚಿತ್ರ ಉತ್ಸವ ನಡೆಯಲಿದೆ.ನೆಹರು ಮೈದಾನದ ಫುಟ್ಬಾಲ್ ಕ್ರೀಡಾಂಗಣದಲ್ಲಿ ಫುಟ್ಬಾಲ್ ಕ್ರೀಡಾ ಸ್ಪರ್ಧೆ ನಡೆಯಲಿದೆ.
ಪಿಳಿಕುಳ ಉದ್ಯಾನವನದಲ್ಲಿಯೂ ಗಾಲ್ಫ್ ಪಂದ್ಯಾವಳಿ ಕಾರ್ಯಕ್ರಮ ನಡೆಯಲಿದೆ.
ಸಾರ್ವಜನಿಕರು ನಗರದ ಹಾಗೂ ಕಡಲ ತೀರದ ಸೊಬಗನ್ನು ಆನಂದಿಸಲು ಅನುಕೂಲವಾಗುವಂತೆ ಸುಲ್ತಾನ್ ಬತ್ತೇರಿ ಹಾಗೂ ಪಣಂಬೂರಿನಲ್ಲಿ ಹೆಲಿಕಾಪ್ಟರ್ ಸಂಚಾರ ಕೂಡ ಆಯೋಜಿಸಲಾಗಿದೆ.
ತಣ್ಣೀರು ಬಾವಿ ಬೀಚ್ನಲ್ಲಿ ಮುಸ್ಸಂಜೆಯ ಸಮಯದಲ್ಲಿ ಕಡಲ ತೀರಕ್ಕೆ ವಾಯು ವಿಹಾರಕ್ಕೆಂದು ಹೋಗುವ ಜನತೆಗೆ ಕಡಲ ತೀರದಲ್ಲಿ ಮನಸ್ಸಿಗೆ ಮುದ ನೀಡುವಂತೆ ಮ್ಯೂಸಿಕ್ ಫೆಸ್ಟಿವಲ್ (ಸಂಗೀತ ಉತ್ಸವ) ನ್ನು ಆಯೋಜಿಸಲಾಗಿದೆ.ಸಾರ್ವಜನಿಕರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಅತ್ಯಂತ ಉತ್ಸಾಹದಿಂದ ಕುಟುಂಬ ಸಮೇತರಾಗಿ ಹಾಗೂ ಸ್ನೇಹಿತರೊಂದಿಗೆ ಭಾಗವಹಿಸಿ, ಕರಾವಳಿ ಉತ್ಸವವನ್ನು ಯಶಸ್ವೀಗೊಳಿಸಲು ಜಿಲ್ಲಾಡಳಿತದ ಪರವಾಗಿ ವಿನಂತಿಸುತ್ತೇವೆ. ವೈವಿಧ್ಯಮಯವಾದ ವಸ್ತು ಪ್ರದರ್ಶನ, ಆಹಾರೋತ್ಸವ, ಕರಾವಳಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಮನರಂಜನಾ ಕಾರ್ಯಕ್ರಮಗಳು ಕರಾವಳಿ ಜನತೆಯ ಒತ್ತಡದ ಜೀವನಕ್ಕೆ ವಿರಾಮ ನೀಡುವುದರೊಂದಿಗೆ ಖುಷಿ ಇಮ್ಮಡಿಗೊಳಿಸುವುದರಲ್ಲಿ ಅಚ್ಚರಿಯೇನಿಲ್ಲ. ಕ್ರಿಸ್ಮಸ್ ಹಾಗೂ ಹೊಸ ವರ್ಷದ ಆಚರಣೆಯನ್ನು ಸವಿಯಲು ಕರಾವಳಿ ಉತ್ಸವವು ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ಪ್ರಮುಖ ವೇದಿಕೆಯಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಡಿ20ರಂದು ಕರಾವಳಿ ಉತ್ಸವ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಗೊಳ್ಳಲಿದೆ.ಡಿ21ರಂದು ತಣ್ಣೀರು ಬಾವಿ ಬ್ಲೂ ಪ್ಲ್ಯಾಗ್ ಬೀಚ್ ನಲ್ಲಿ ಕೇಕ್ ಮತ್ತು ವೈನ್ ಉತ್ಸವ ನಡೆಯಲಿದೆ.ಡಿ.23ರಿಂದ ಜ.2ರವರೆಗೆ ಸುಲ್ತಾನ್ ಬತ್ತೇರಿ ಪಣಂಬೂರು ಬೀಚ್ ನಲ್ಲಿ ಹೆಲಿಕಾಪ್ಟರ್ ರೈಡ್ ನಡೆಯಲಿದೆ.
ಪಿಲಿಕುಳದ ಪುಟಾಣಿ ಹುಲಿ ಮರಿ ವಿಶೇಷ ಆಕರ್ಷಣೆಯಾಗಿ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶವಿದೆ ಎಂದು ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ದರ್ಶನ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ನಾರ್ವಡೆ ವಿನಾಯಕ ಕರ್ಬಾರಿ,ಉಪ ಅರಣ್ಯ ಸಂರಕ್ಷಣಾಧಿಕಾರಿ ಅ್ಯಂಟೊನಿ ಎಸ್ ಮರಿಯಪ್ಪ, ಅಪರ ಜಿಲ್ಲಾಧಿಕಾರಿ ರಾಜು ಕೆ, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಅರುಣ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.







