ರಾಜ್ಯ ಸರ್ಕಾರದ ಭ್ರಷ್ಟಾಚಾರ ಮುಚ್ಚಿ ಹಾಕಲು ದಬ್ಬಾಳಿಕೆ: ನಳಿನ್ ಕುಮಾರ್

ಪುತ್ತೂರು: ರಾಜ್ಯದಲ್ಲಿ ಸಾಕಷ್ಟು ಭ್ರಷ್ಟಾಚಾರಗಳು ನಡೆಯುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೌನವಾಗಿ ದ್ದಾರೆ. ಇದೊಂದು ಭ್ರಷ್ಟಾಚಾರದ ಸರ್ಕಾರ. ಭ್ರಷ್ಟಾಚಾರಿಗಳ ಕೂಟದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ನಡೆಸುತ್ತಿದ್ದಾರೆ. ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದರೆ ಅವರ ಮೇಲೆಯೇ ಕೇಸು ದಾಖಲು ಮಾಡಿ ತನ್ನ ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ದಬ್ಬಾಳಿಕೆ ನಡೆಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಪುತ್ತೂರು ಬಿಜೆಪಿ ಕಚೇರಿಯಲ್ಲಿ ಗುರುವಾರ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಅವರು ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಸಚಿವ ಸುಧಾಕರ್ ಅವರು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಜಾಗವನ್ನು ಅಕ್ರಮ ಮಾಡಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಅವರ ಬಗ್ಗೆ ಎಫೈಆರ್ ಆಗಿದೆ. ಇನ್ನೊಂದೆಡೆ ಚೆಲುವರಾಯಸ್ವಾಮಿ ಮೇಲೆ ಅಧಿಕಾರಿಗಳೇ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಆದರೂ ಮುಖ್ಯ ಮಂತ್ರಿ ಮೌನವಾಗಿದ್ದಾರೆ. ಇದೊಂದು ಭ್ರಷ್ಟಾಚಾರದ ಸರ್ಕಾರ ಎಂದರು.
ಸರ್ಕಾರದ ವಿರುದ್ದ ಆರೋಪ ಮಾಡಿದರೆ ಅಂತಹ ಮಾಧ್ಯಮಗಳ ಮೇಲೆ, ಸೋಶಿಯಲ್ ಮೀಡಿಯಾಗಳ ಮೇಲೆಯೇ ಕೇಸು ದಾಖಲಿಸುತ್ತಾರೆ. ಭ್ರಷ್ಟಾಚಾರದ ಮುಚ್ಚಿ ಹಾಕಲು ಇಂತಹ ದಬ್ಬಾಳಿಕೆ ನಡೆಸಲಾಗುತ್ತಿದೆ. ರೈತರ ವಿದ್ಯಾನಿಧಿ ಮೂಲಕ ಕಿಸಾನ್ ಸಮ್ಮಾನ್ 4ಸಾವಿರ ನೀಡಲಾಗುತ್ತಿದ್ದ ಯೋಜನೆಯನ್ನು ರದ್ದು ಪಡಿಸಲಾಗಿದೆ. 3 ತಿಂಗಳಲ್ಲಿ 275 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಲ್ಲಿನ ರೈತರು ಬರದಿಂದ ತತ್ತರಿಸುತ್ತಿದ್ದಾಗ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿದೆ. ಇದೊಂದು ರೈತ ವಿರೋಧಿ ಸರ್ಕಾರ, ಭ್ರಷ್ಟಾಚಾರ ಪರವಾದ ಸರ್ಕಾರ ಎಂದು ಅವರು ಆರೋಪಿಸಿದರು.
ಈಗಾಗಲೇ ಪುತ್ತೂರಿನ ಎಪಿಎಂಸಿ ರೈಲ್ವೇ ಅಂಡರ್ ಪಾಸ್ ರಸ್ತೆ ಕಾಮಗಾರಿ ಮುಗಿದಿದೆ. ವಿವೇಕಾನಂದ ಕಾಲೇಜು ಸಂಪರ್ಕದ ರೈಲ್ವೇ ಮೇಲ್ಸೇತುವೆ ಅಗಲೀಕರಣಕ್ಕೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಅತೀ ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಈ ರಸ್ತೆಗೆ ಕಲ್ಲಡ್ಕದಲ್ಲಿ ಫ್ಲೈ ಓವರ್ ನಿರ್ಮಾಣ ಕಾರ್ಯ ನಡೆಯಲಿರುವುದರಿಂದ ಕಾಮಗಾರಿ ಸ್ಪಲ್ಪ ನಿಧಾನವಾಗಿದೆ. ಉಳಿದಂತೆ ಉಪ್ಪಿನಂಗಡಿಯಿಂದ ಗುಂಡ್ಯ ತನಕ ಕಾಮಗಾರಿ ನಡೆಯುತ್ತಿದೆ. ಉಪ್ಪಿನಂಗಡಿಯಿಂದ ಮಾಣಿಯ ತನಕ ಕಾಮಗಾರಿ ಮುಂದೆ ನಡೆಯಲಿದೆ. ಎಲ್ಲಾ ಕಾಮಗಾರಿಗಳಿಗೆ ವೇಗ ನೀಡುವ ಕೆಲಸ ಕಾರ್ಯ ಮಾಡಲಾಗುವುದು ಎಂದರು.
ಬೆಂಗಳೂರಿನಿಂದ ಮೈಸೂರು ಹಾಗೂ ಮೈಸೂರಿನಿಂದ ಕೊಡಗು ತನಕ ಚತುಷ್ಪಥ ರಸ್ತೆ ಕಾಮಗಾರಿಗೆ ಆದೇಶ ಬಂದಿದೆ. ಮಡಿಕೇರಿಯಿಂದ ಮಾಣಿಯ ತನಕದ ರಸ್ತೆಯನ್ನು ಈ ಹಿಂದೆ ಕೆಆರ್ಡಿಸಿಎಲ್ ಅಭಿವೃದ್ಧಿ ಪಡಿಸಿತ್ತು. ಆದರೆ ಕೆಆರ್ಡಿಸಿಎಲ್ ನಿಂದ ಹಸ್ತಾಂತರ ಪ್ರಕ್ರಿಯೆ ತಡವಾಗಿರುವುದರಿಂದ ಸ್ಪಲ್ವ ತಡವಾಗಿದೆ. ಇದೀಗ ರಸ್ತೆಯ ಸರ್ವೇ ಕಾರ್ಯಗಳು ಮುಗಿದಿದೆ. ಮುಂದಿನ ದಿನಗಳಲ್ಲಿ ನಿತಿನ್ ಗಡ್ಕರಿ ಅವರು ಮುಂದಿನ ಫೇಸ್ನಲ್ಲಿ ಅದನ್ನು ಚತುಷ್ಪಥ ರಸ್ತೆಯಾಗಿ ಪರಿವರ್ತನೆ ಮಾಡಲು ಒಪ್ಪಿಗೆ ನೀಡಿದ್ದಾರೆ ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್ ರಾವ್, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಆರ್.ಸಿ. ನಾರಾಯಣ, ಮುಖಂಡರಾದ ಚಂದ್ರಶೇಖರ ರಾವ್ ಬಪ್ಪಳಿಗೆ ಮತ್ತಿತರರು ಇದ್ದರು.







